ಬಳ್ಳಾರಿ:ಇಂದಿನ ಯುವಜನರು ಸ್ವತಂತ್ರ ತಲೆವುಳ್ಳವರಾಗಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜ ಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಅಂಧಾನುಕರಣೆ ಬಿಟ್ಟು ಸ್ವತಂತ್ರ ತಲೆಯುಳ್ಳವರಾಗಿ: ಯುವಕರಿಗೆ ನಿಜಗುಣಾನಂದ ಸ್ವಾಮೀಜಿ ಸಲಹೆ - nijagunananda swamiji in bellary catholic church
ಯುವ ಜನರು ಬೇರೆಯವರ ಮಾತಿಗೆ ಕಿವಿ ಕೊಡದೆ, ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಶಕ್ತಿ ಹೊಂದಬೇಕು. ಅತಂತ್ರ, ಕುತಂತ್ರ, ಪರತಂತ್ರ ತಲೆಯ ಬದಲು ಸ್ವತಂತ್ರ ತಲೆ ನಿಮ್ಮದಾಗಬೇಕು ಎಂದು ಯುಕರಿಗೆ ಕಿವಿ ಮಾತು ಹೇಳಿದರು.

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್ ನ ಆರೋಗ್ಯ ಮಾತೆ ಪುಣ್ಯಕ್ಷೇತ್ರ ಆವರಣದ ತೆರೆದ ಸಭಾಂಗಣದಲ್ಲಿ 11ನೇ ಕರ್ನಾಟಕ ಪ್ರಾಂತೀಯ ಯುವ ಜನೋತ್ಸವವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ತಲೆಗಳಲ್ಲಿ ನಾಲ್ಕು ವಿಧ. ಅತಂತ್ರ, ಕುತಂತ್ರ, ಪರತಂತ್ರ ಹಾಗೂ ಸ್ವತಂತ್ರ ಬುದ್ಧಿಯುಳ್ಳ ತಲೆಗಳಿರುತ್ತವೆ. ಅತಂತ್ರ, ಕುತಂತ್ರ ಹಾಗೂ ಪರತಂತ್ರ ತಲೆಗಳ ಕಾರ್ಯ ವೈಖರಿಯನ್ನು ಎಳೆ ಎಳೆಯಾಗಿ ವಿವರಿಸುತ್ತಲೇ ನೆರೆದ ಯುವಜನರನ್ನು ನಗೆಗಡಲಲ್ಲಿ ತೇಲಿಸಿದರು.
ಯುವಜನರು ಆ ಮೂರು ತಲೆಗಳನ್ನು ಬಿಟ್ಟು ಸ್ವತಂತ್ರ ಬುದ್ಧಿಯುಳ್ಳವಂತರಾಗಿ. ಅಂಧಾನುಕರಣೆ, ಅಂಧ ಶ್ರದ್ಧೆಯನ್ನು ತೊರೆದು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯಲ್ಲಿ ಮಿಂದೇಳುವುದನ್ನು ಮೊದಲು ನೀವು ಕಲಿಯಬೇಕು ಎಂದರು.