ಬಳ್ಳಾರಿ:ಮಹಾಮಾರಿ ಕೊರೊನಾ ವೈರಸ್ ತಡೆಗೆ ಜಿಲ್ಲೆಯ ನಾನಾ ಕಡೆಗಳಲ್ಲಿ ಡಿಸ್ಇನ್ಫೆಕ್ಷನ್ ಟನಲ್ (ಸೋಂಕು ನಾಶಕ ಸುರಂಗ ಮಾರ್ಗ) ಸ್ಥಾಪಿಸಿರೋದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲ್ಯುಹೆಚ್ಓ) ನಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಆದರೆ, ಗಣಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆಯಲ್ಲಿರೊ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿ ಡಿಸ್ಇನ್ಫೆಕ್ಷನ್ ಟನಲ್ ಗೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಅವರೇ ಚಾಲನೆ ನೀಡಿರೋದು ಚರ್ಚೆಗೆ ಗ್ರಾಸವಾಗಿದೆ.
ಡಿಸ್ಇನ್ಫೆಕ್ಷನ್ ಟನಲ್ ಸ್ಥಾಪನೆಗೆ ಡಬ್ಲ್ಯುಹೆಚ್ಓ ನಕಾರ... ಹಗರಿಬೊಮ್ಮನಳ್ಳಿ ಶಾಸಕ ಮಾಡಿದ್ದೇನು ಗೊತ್ತಾ?
ಡಬ್ಲ್ಯುಹೆಚ್ಓ ಸುರಂಗ ಮಾರ್ಗದ ಕಾರ್ಯ ಕಲಾಪಕ್ಕೆ ತಾತ್ಕಾಲಿಕ ಬ್ರೇಕ್ ಹಾಕಬೇಕೆಂಬ ಸೂಚನೆ ನೀಡಿದೆ. ಆದರೆ ಡಿಸ್ಇನ್ಫೆಕ್ಷನ್ ಟನಲ್ ಗೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಈಗಾಗಲೇ ಚಾಲನೆ ಕೂಡ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಸೋಂಕು ನಾಶಕ ಸುರಂಗ ಮಾರ್ಗ ಸ್ಥಾಪನೆ ಮಾಡೋದರಿಂದ ವ್ಯತಿರಿಕ್ತ ಪರಿಣಾಮ ಬೀರಿ ಕೊರೊನಾ ವೈರಸ್ ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ. ಹಾಗೂ ಸುರಂಗ ಮಾರ್ಗವು ಸೋಂಕು ನಾಶಕದ ಯಾವುದೇ ಕೆಲಸವನ್ನೂ ಮಾಡೋದಿಲ್ಲ. ಹೀಗಾಗಿ, ಸುರಂಗ ಮಾರ್ಗದ ಕಾರ್ಯಕಲಾಪಕ್ಕೆ ತಾತ್ಕಾಲಿಕ ಬ್ರೇಕ್ ಹಾಕಬೇಕೆಂಬ ಸೂಚನೆಯ ಮೇರೆಗೆ ಜಿಲ್ಲೆಯ ಜಿಂದಾಲ್, ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾದ ಸೋಂಕು ನಾಶಕ ಸುರಂಗ ಮಾರ್ಗದ ಬಳಕೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಆದರೆ, ಇವೆಲ್ಲವುಗಳ ನಡುವೆಯೂ ಕೊಟ್ಟೂರು ಪಟ್ಟಣದಲ್ಲಿ ಶಾಸಕ ಭೀಮಾ ನಾಯ್ಕ ಅವರು ಸೋಂಕು ನಾಶಕ ಸುರಂಗ ಮಾರ್ಗಕ್ಕೆ ಚಾಲನೆ ನೀಡಿರೋದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೊಡ್ಡ ತಲೆಬಿಸಿಯಾಗಿದೆ.
ಡಿಸ್ಇನ್ಫೆಕ್ಷನ್ ಟನಲ್ ಒಳಗಡೆಯಿಂದ ಜನರು ಹಾದು ಹೋದಾಗ ಅವರ ಮೈಮೇಲೆ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಣೆಯಾಗುತ್ತೆ. ಇದರಿಂದ ಸೋಂಕು ಹರಡಂತೆ ತಡೆಗಟ್ಟಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೀಗ ಡಬ್ಲ್ಯುಹೆಚ್ ಓ ಹೊರಡಿಸಿದ ಆದೇಶವು ಈ ಎಲ್ಲ ಅಭಿಪ್ರಾಯವನ್ನೂ ಬುಡಮೇಲು ಮಾಡಿದೆ.