ಹೊಸಪೇಟೆ: ಮಾಜಿ ಶಾಸಕ ಶಿವಶಂಕರ ಅವರು ನಿಜವನ್ನೇ ಹೇಳಿದ್ದಾರೆ. ಈ ಸಮಾಜದ ಹೆಸರನ್ನು ತೆಗೆದುಕೊಂಡು ಮಂತ್ರಿಯಾಗಿದ್ದಾರೆ ಅಂತಾ ಸತ್ಯ ಹೇಳಿದ್ರೆ ಕೆಲವರಿಗೆ ಎದೆಗೆ ಒದ್ದಂತೆ ಆಗುತ್ತದೆ ಎಂದು ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಪಂಚಮಸಾಲಿ 2ಎ ಹೋರಾಟದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇದಿಕೆ ಮೇಲೆ ಕೆಲವರು ಇದ್ದಾರೆ, ಎರಡೂ ಕಡೆ ಕಾಣಿಸಿಕೊಳ್ಳುತ್ತಾರೆ. ಅವರದ್ದು ನಾಟಕ ಕಂಪನಿ. ಪಾದಯಾತ್ರೆಗೆ ಭಾಗವಹಿಸುವುದಾದರೆ ಬನ್ನಿ, ಇಲ್ಲ ಆ ಹಾಳದ ಮಠಕ್ಕೆ ಹೋಗಿ. ಆ ಮಠದಲ್ಲಿ ಎಸಿ ಇದೆ. ಆದರೆ, ಕೂಡಲಸಂಗಮ ಸ್ವಾಮೀಜಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಸ್ವಾಮೀಜಿಯೊಬ್ಬರು ಸಿನಿಮಾ ತಾರೆಯರನ್ನು ತಂದು ಡ್ಯಾನ್ಸ್ ಮಾಡಿಸುತ್ತಾರೆ. ತಾರೆಯರಿಂದ ಮೀಸಲಾತಿ ಸಿಗುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಇಷ್ಟು ದಿನ ಉಪಯೋಗ ಮಾಡಿಕೊಂಡು ಈಗ ಒದ್ದು ಜೈಲಿಗೆ ಕಳುಹಿಸಿದ್ದಾರೆ. ಇನ್ನು ಸ್ವಲ್ಪ ದಿನ ಅವರು ಜೈಲಿನಿಂದ ಹೊರಗಡೆ ಬರುತ್ತಾರೆ. ಈ ನಾಟಕಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಪಾದಯಾತ್ರೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಬೆಂಗಳೂರಿನಲ್ಲಿ ಕುಳಿತುಕೊಂಡು ವ್ಯವಸ್ಥಿತವಾಗಿ ಮಾಧ್ಯಮದವರನ್ನು ತಡೆಯುತ್ತಿದ್ದಾರೆ. ಹೀಗಾಗಿ ಹೋರಾಟಗಳಿಗೆ ಪ್ರಚಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.
ನಾವು ಪಾಕಿಸ್ತಾನ ಬೇಕು ಎಂದು ಕೇಳುತ್ತಿಲ್ಲ. ಪಂಚಮಸಾಲಿಗಳ ಸಂಖ್ಯೆ ಹೆಚ್ಚಿದೆ. ಅವರಿಗೂ ಮೀಸಲಾತಿ ಸಿಗಲಿ. ನಾವು ನಾಯಿ ಜಾತಿಯವರು, ಮನೆ ತುಂಬ ಮಕ್ಕಳಿರಲಿ. ಆ ಮಕ್ಕಳು ಒಂದು ತುತ್ತು ಅನ್ನ ಹಾಕಲಿ. ಆಗ ಹೊಟ್ಟೆ ತುಂಬುತ್ತದೆ. ಆದರೆ, ಕೆಲವು ಬೆಕ್ಕಿನ ಜಾತಿಯವರು, ಅವರೊಬ್ಬರೇ ಹಾಲು ಕುಡಿಯಬೇಕು ಎನ್ನುವ ಅಪೇಕ್ಷೆ. ಅವರೇ ಈಗ ಮಂತ್ರಿಗಳಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಂತ್ರಿಯೊಬ್ಬರು ಹೋರಾಟದಿಂದ ಏನೂ ಆಗಲ್ಲ ಅನ್ನುತ್ತಿದ್ದಾರೆ. ಹೋರಾಟದಿಂದ ಮಂತ್ರಿಯಾಗಿದ್ದು, ಸ್ವಾತಂತ್ರ್ಯ ಸಿಕ್ಕಿದ್ದು ಹೋರಾಟದಿಂದ, ಬ್ರಿಟಿಷರ ಜೊತೆಗಿನ ಅಡ್ಜೆಸ್ಟ್ಮೆಂಟ್ನಿಂದ ದೊರೆತಿಲ್ಲ ಎಂದು ಸಚಿವರ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕೂಡಲ ಸಂಗಮದಲ್ಲಿ ಸರಿಯಾಗಿ ಗೋಡೆ ಇಲ್ಲ. ಅಲ್ಲದೇ, ನೆಲದಲ್ಲಿ ಕಲ್ಲುಗಳು ಇಲ್ಲ. ಆದರೆ, ಇನ್ನೊಂದು ಮಠದಲ್ಲಿ ಏರ್ ಕಂಡಿಷನ್ ಇದೆ. ಅಲ್ಲದೇ, ಆಶೀರ್ವಾದ ಮಾಡುವ ಚಿತ್ರಗಳು ಇವೆ, ಬಪ್ಪರ ಮಗನಾ ಎಂದು ಟೀಕಿಸಿದರು. 20 ಲಕ್ಷ ರೂ. ನೀಡಲಾಗಿದೆ. ಅದನ್ನು ಅವರ ಮುಖಕ್ಕೆ ಎಸೆಯಿರಿ. ಪಂಚಮಸಾಲಿಯರು 80 ಲಕ್ಷ ಜನರಿದ್ದಾರೆ. ಕುಟುಂಬದ ಒಬ್ಬೊಬ್ಬ ನೂರು ರೂ. ನೀಡಿದ್ರೆ ಕೋಟಿ ರೂ. ಆಗುತ್ತದೆ ಎಂದು ಹೇಳಿದರು. ಸ್ವಾಮೀಜಿಗಳೇ ನಿಮ್ಮನ್ನು ಮಾತನಾಡಿಸಲು ಬರುತ್ತಾರೆ. ಅವರದ್ದು ನಾಟಕ ಕಂಪನಿ ಎಂದು ಟೀಕಿಸಿದರು.
ಯತ್ನಾಳ್ ಅವರನ್ನು ಮುಗಿಸಬೇಕು ಎಂದು, ನನ್ನ ಮೇಲೆ ಗುಪ್ತಚರ ಇಲಾಖೆಯನ್ನು ಬಿಡಲಾಗಿದೆ. ಅಕ್ರಮ ಆಸ್ತಿಗಾಗಿ ಹುಡುಕಾಡುತ್ತಿದ್ದಾರೆ. ನೀನಲ್ಲ, ನಿನ್ನ ಮುತ್ತಜ್ಜ ಬಂದರೂ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಅಕ್ರಮ ಆಸ್ತಿಯನ್ನು ಮಾಡಿಕೊಂಡಿಲ್ಲ ಎಂದು ಯತ್ನಾಳ್ ಟಾಂಗ್ ನೀಡಿದರು.