ಕರ್ನಾಟಕ

karnataka

By

Published : Apr 2, 2023, 1:34 PM IST

ETV Bharat / state

ಹಿರಿಯ ರಂಗ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಕಾರು ಅಪಘಾತದಲ್ಲಿ ನಿಧನ

ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಚಿತ್ರದುರ್ಗದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

veteran-artist-nadoja-belagallu-veeranna-passes-away
ಕಾರು ಅಪಘಾತ: ಹಿರಿಯ ರಂಗ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ

ಬಳ್ಳಾರಿ/ಚಿತ್ರದುರ್ಗ:ಪಾರಂಪರಿಕ ತೊಗಲು ಗೊಂಬೆಯಾಟದ ಮೂಲಕ ರಾಜ್ಯ, ದೇಶ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ತಮ್ಮ ಕಲೆಯನ್ನು ಹಂಚಿದ್ದ ಹಿರಿಯ ಕಲಾವಿದ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ನಾಡೋಜ ಬೆಳಗಲ್ಲು ವೀರಣ್ಣ (91) ಭಾನುವಾರ ಬೆಳಗ್ಗೆ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿಯ ತಳಕು ಸಮೀಪ ಅಪಘಾತ ನಡೆದಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಚಾಲಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂಲತಃ ತೊಗಲು ಗೊಂಬೆಯಾಟದ ಕಲಾವಿದರಾದ ಬೆಳಗಲ್ಲು ವೀರಣ್ಣ ಅವರು ತೊಗಲು ಗೊಂಬೆಯಾಟದ ಹಿರಿಮೆಯನ್ನು ಸಪ್ತ ಸಾಗರದ ಆಚೆಗೆ ತಲುಪಿಸಿದ ಅಪರೂಪದ ಕಲಾವಿದರು. ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳ ಕಟ್ಟಿ ಊರೂರು, ರಾಜ್ಯದಿಂದ ರಾಜ್ಯ, ದೇಶದಿಂದ ವಿದೇಶಕ್ಕೆ ಸುತ್ತಿದವರು. ವೀರಣ್ಣ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಜಿಲ್ಲೆಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಎಂ ಬೊಮ್ಮಾಯಿ ಟ್ವೀಟ್​ :"ತೊಗಲು ಗೊಂಬೆಯಾಟ" ಎಂಬ ಜಾನಪದ ಕಲೆಗೆ ಹೊಸ ಸ್ಪರ್ಶ ನೀಡಿ, ಹೊಸ ವೈಭವವನ್ನು ಸೃಷ್ಟಿಸಿದ ಖ್ಯಾತ ರಂಗಭೂಮಿ ಮತ್ತು ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣನವರು ರಸ್ತೆ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದು, ''ತೊಗಲು ಬೊಂಬೆಯಾಟದ ಮಾಂತ್ರಿಕ, ಹಿರಿಯ ರಂಗಭೂಮಿ ಕಲಾವಿದ ಬೆಳಗಲ್ಲು ವೀರಣ್ಣ ಅವರ ಸಾವಿನಿಂದ ಆಘಾತಗೊಂಡಿದ್ದೇನೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಇನ್ನಷ್ಟು ದಿನ ಅವರ ಕಲಾಸೇವೆಯ ಅಗತ್ಯವಿತ್ತು. ವೀರಣ್ಣ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುವೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ:10 ದಿನಗಳ ಹಿಂದಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ ಅಪಘಾತದಲ್ಲಿ ಸಾವು

ABOUT THE AUTHOR

...view details