ಹೊಸಪೇಟೆ:ಬಳ್ಳಾರಿಯನ್ನು ವಿಭಜನೆ ಮಾಡಿದ್ದಕ್ಕೆ ಇಲ್ಲಿನ ನೂರಾರು ಮಂಗಳಮುಖಿಯರು ನನ್ನ ವಿರುದ್ಧ ಹೋರಾಟ ಮಾಡಿದರು. ಬೀದಿ ಬೀದಿಯಲ್ಲಿ ಬೈದಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹಳೆಯ ಘಟನಾವಳಿಗಳನ್ನು ನೆನಪಿಸಿಕೊಂಡರು.
ನಗರದ ತಳವಾರ ಕೇರಿಗರಡಿ ಮನೆಯಲ್ಲಿ ದೈವಸ್ಥರಿಂದ ವಿಜಯನಗರ ಜಿಲ್ಲೆ ಬೆಂಬಲಿಸಿ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಮಂಗಳಮುಖಿಯರ ಬೈಗುಳಗಳು ಆಶೀರ್ವಾದ ಇದ್ದಂತೆ. ಬೈದರೆ ಒಳ್ಳೆದು ಎಂಬ ಕಾರಣದಿಂದ ಚಿಕ್ಕವರಿದ್ದಾಗ ಅವರನ್ನು ಚುಡಾಯಿಸಲಾಗುತ್ತಿತ್ತು ಎಂದು ಹಳೆಯ ಘಟನಾವಳಿಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ : ಮಂಗಳಮುಖಿ ಹುಟ್ಟಿದರೆ ಮಕ್ಕಳಂತೆ ಸ್ವೀಕರಿಸಿ: ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಬಿ.ಜೋಗತಿ
ಮಂಗಳಮುಖಿಯರ ಬೈಗುಳಗಳಿಗೆ ವಿರೋಧ ವ್ಯಕ್ತಪಡಿಸುವುದಕ್ಕಿಂತ ಧನಾತ್ಮಕವಾಗಿ ತಗೆದುಕೊಳ್ಳಬೇಕು. ಅವರ ಬೈಗುಳಕ್ಕೆ ಬೇಸರವಿಲ್ಲ. ಬೈಗುಳದ ವಿಡಿಯೋ ಅನ್ನು ನೋಡಿ ಸಾಕಷ್ಟು ಬಾರಿ ನಕ್ಕಿದ್ದೇನೆ. ಬಳ್ಳಾರಿ ವಿಭಜನೆಯಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಬೈಗುಳದಿಂದ ದೇವಿಯ ಮೇಲೆ ಪ್ರಾಮಾಣ ಮಾಡುತ್ತೇನೆ, ನನಗೆ ಕೋಪ ಬಂದಿಲ್ಲ ಎಂದರು.
ನೀರು ಹಂಚಿಕೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತದೆ. ಶೀಘ್ರದಲ್ಲೇ ನಾನು ಎಲ್ಲದಕ್ಕೂ ಉತ್ತರ ನೀಡುವೆ ಎಂದು ಇದೇ ವೇಳೆ ಭರವಸೆ ನೀಡಿದರು.