ಕರ್ನಾಟಕ

karnataka

ETV Bharat / state

Transgender: ಬಳ್ಳಾರಿಯ ಚೋರನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೃತೀಯಲಿಂಗಿ ಆಯ್ಕೆ - ಚೋರನೂರು ಗ್ರಾಮ ಪಂಚಾಯ್ತಿ

Transgender elected as Gram Panchayat President: ಬಳ್ಳಾರಿಯ ಚೋರನೂರು ಗ್ರಾಮ ಪಂಚಾಯಿತಿಯ ಹೊಸ ಅಧ್ಯಕ್ಷರಾಗಿ ತೃತೀಯಲಿಂಗಿ ಸಿ.ಅಂಜಿನಮ್ಮ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸಿ ಅಂಜಿನಮ್ಮ
ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸಿ ಅಂಜಿನಮ್ಮ

By

Published : Aug 8, 2023, 6:09 PM IST

Updated : Aug 8, 2023, 10:50 PM IST

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಅಂಜಿನಮ್ಮ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತೃತೀಯಲಿಂಗಿ ಸಿ.ಅಂಜಿನಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಅಂಜಿನಮ್ಮ 2ನೇ ಅವಧಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅನುಸೂಚಿತ ಪಂಗಡದ ಮಹಿಳೆ ಮೀಸಲಾತಿ ಅಡಿಯಲ್ಲಿ ಗೀತಾ ಬಿ.ಹನುಮಂತಪ್ಪ ಚೋರನೂರು ಅವರೂ ಕೂಡಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಹಾಯಕ ಕೃಷಿ ಇಲಾಖೆಯ ನಿರ್ದೇಶಕ ಮಂಜುನಾಥರೆಡ್ಡಿ ಪ್ರಕಟಿಸಿದ್ದಾರೆ.

ಅಂಜಿನಮ್ಮ ಮಾತನಾಡಿ, "ತನ್ನ ಗೆಲುವಿನ ಶ್ರೇಯಸ್ಸು ಗ್ರಾಮಸ್ಥರಿಗೆ ಸಲ್ಲುತ್ತದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ, ಗ್ರಾಮದ ಹಿರಿಯರು ಸ್ಪರ್ಧಿಸುವಂತೆ ಹೇಳಿದರು. ಇದೀಗ ನನಗೆ ದೊಡ್ಡ ಪಟ್ಟವನ್ನೇ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಗ್ರಾಮದ ಜನರಿಗೆ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆ ಮತ್ತು ಇತರ ಮೂಲ ಸೌಕರ್ಯಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಗ್ರಾಮ ಪಂಚಾಯಿತಿಗೆ ಹಣ ತರಲು ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸುತ್ತೇನೆ. ನಮ್ಮಂತಹ ಅನೇಕ ಮಂಗಳಾಮುಖಿ ಮಹಿಳೆಯರನ್ನು ಗ್ರಾಮಮಟ್ಟದಲ್ಲಿ ಸಬಲೀಕರಣ ಮಾಡುತ್ತೇನೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಬ್ದುಲ್ ಸಾಬ್ ಖಾದ್ರಿ, ಸಿಬ್ಬಂದಿ ಮತ್ತು ಪಂಚಾಯಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಇನ್ನೊಂದೆಡೆ, ರಾಜ್ಯದಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಗ್ಗಳಿಕೆ ಪಡೆದಿರುವ ಸಂಕೋನಟ್ಟಿ ಗ್ರಾ.ಪಂ.ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಚ್ಚರಿಯೆಂಬಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ (ಆಗಸ್ಟ್​ 2-2023) ಆಯ್ಕೆಯಾಗಿದ್ದು, ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ವಲಯಕ್ಕೆ ನಿರಾಸೆಯಾಗಿತ್ತು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂತೋಷ ಕಕಮರಿ 31 ಮತ ಪಡೆದು ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ರೂಪಾಲಿ ಸೋನಕರ ಆಯ್ಕೆಯಾಗಿದ್ದರು. 56 ಸದಸ್ಯ ಸ್ಥಾನ ಹೊಂದಿರುವ ಸಂಕೋನಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ 48 ಸದಸ್ಯರನ್ನು ಶಾಸಕರ ಆಪ್ತರು ಮೂರು ದಿನಗಳಿಂದ ರೆಸಾರ್ಟ್​ನಲ್ಲಿ ಇರಿಸಿದ್ದರು.

ಅಂದು ನೇರವಾಗಿ ಸರ್ಕಾರಿ ಬಸ್​​ನ ಮೂಲಕ 48 ಸದಸ್ಯರನ್ನು ಮತಗಟ್ಟೆಗೆ ತಂದು ಕಾಂಗ್ರೆಸ್ ಅಭ್ಯರ್ಥಿ ಶಂಕರ ಗಡದೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ರಮೇಶ್ ಜಾರಕಿಹೊಳಿ ಬೆಂಬಲಿಗ ಸಂತೋಷ್ ಕಕಮರಿ ಅವರನ್ನು ಆಯ್ಕೆ ಮಾಡಿದ್ದರು.

ಇದನ್ನೂ ಓದಿ:ಜಾರಕಿಹೊಳಿ ಬೆಂಬಲಿತ ಬಿಜೆಪಿ ಅಭ್ಯರ್ಥಿ ಅಚ್ಚರಿ ಗೆಲುವು: ಅಥಣಿ ಕಾಂಗ್ರೆಸ್ ವಲಯಕ್ಕೆ ಭಾರಿ ಮುಖಭಂಗ

Last Updated : Aug 8, 2023, 10:50 PM IST

ABOUT THE AUTHOR

...view details