ಬಳ್ಳಾರಿ: ನಾಡೋಜ ಸುಭದ್ರಮ್ಮ ಮನ್ಸೂರ್ ತಾಯಿಯ ಹೃದಯವನ್ನು ಹೊಂದಿರುವವರು ಮತ್ತು ನಾಟಕದ ವಿಚಾರದಲ್ಲಿ ಅವರಿಗೆ ಸಮಯ ಪಾಲನೆ, ಶಿಸ್ತು ಬಹಳ ಇತ್ತು ಎಂದು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದ್ದಾರೆ.
ಸುಭದ್ರಮ್ಮ ಮತ್ತು ನನ್ನ ನಡುವೆ ತಾಯಿ-ಮಗಳ ಸಂಬಂಧವಿತ್ತು; ಮಂಜಮ್ಮ ಜೋಗತಿ - ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್
ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಸಿಪಿಐ ಸುಭಾಷ್ ಚಂದ್ರ, ನಾಡೋಜ ಬೆಳಗಲ್ ವೀರಣ್ಣ, ಹಿರಿಯ ಕಲಾವಿದರು, ಸಾಹಿತಿಗಳು ನಾಡೋಜ ಸುಭದ್ರಮ್ಮ ಮನ್ಸೂರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಸುಭದ್ರಮ್ಮ ಮನ್ಸೂರ್ ಮತ್ತು ನನ್ನ ಸಂಬಂಧ ತಾಯಿ ಮಕ್ಕಳಂತೆ ಇತ್ತು. ನಮ್ಮ ಮೇಲೆ ತುಂಬ ಗೌರವ. ಅವರಿಗೆ ನಾನು ಅಮ್ಮ ಅಂತ ಕರೆದರೂ, ನನಗೆ ಅವರು ಅವ್ವ ಅಂತ ಕರೆಯುತ್ತಿದ್ದರು ಎಂದು ಕಂಬನಿ ಮಿಡಿದರು. ಜಿಲ್ಲೆಯಲ್ಲಿ ಜೋಗತಿಯವರಿಗೆ ಅವ್ವ ಎಂದು ಕರಿಯೋದ್ ಜಾಸ್ತಿ, ಹಾಗಾಗಿ ನನಗೂ ಅವ್ವ ಅಂತ ಕರೆಯುತ್ತಿದ್ದರು ಎಂದು ಹೇಳಿದರು. ಸುಭದ್ರಮ್ಮರೊಂದಿಗೆ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಮೋಹನ್ ಲಾಲ್ ಪಾತ್ರ, ಶಿವ ಅರ್ಜುನ ನಾಟಕದಲ್ಲಿ ಕೀಚಕನ ಪಾತ್ರ ಮಾಡಿದ್ದೇನೆ ಎಂದು ನಾಟಕದ ದಿನಗಳನ್ನು ಮೆಲುಕು ಹಾಕಿದರು.
ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ ಮಾತನಾಡಿ, ಸುಭದ್ರಮ್ಮ ಮನ್ಸೂರ್ ಅವರೊಂದಿಗೆ ತಾಯಿ ಮಕ್ಕಳಂತೆ ಇದ್ವಿ. ನಾವು ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ನಾಟಕವಾಡಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದೆವು. ಆದರೆ ಪೌರಾಣಿಕ ನಾಟಕಗಳ ಬಗ್ಗೆ ಸಲಹೆ, ಸೂಚನೆಗಳೊಂದಿಗೆ ಕಲಿಸಿಕೊಟ್ಟವರು ಸುಭದ್ರಮ್ಮ ಮನ್ಸೂರ್. ಅವರೇ 'ನನ್ನ ರಂಗ ಭೂಮಿಯ ತಾಯಿ' ಎಂದರು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸುಭದ್ರಮ್ಮ ಮನ್ಸೂರ್ಗೆ ಅಭಿಮಾನಿಗಳು ಹೆಚ್ಚಾಗಿದ್ದರು. ಪೌರಾಣಿಕ ನಾಟಕಗಳಿಗೆ ಜೀವ ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ ನಾಟಕ ಮಾಡುತ್ತಿದ್ದರೆ ಅವರೇ ನಿಜವಾದ ಹೇಮರೆಡ್ಡಿ ಮಲ್ಲಮ್ಮ ಎಂದು ಸುಭದ್ರಮ್ಮ ಪೋಟೋ ಇಟ್ಟು ಈಗಲೂ ಪೂಜೆ ಮಾಡುತ್ತಿರುವ ನಿದರ್ಶನಗಳು ಇವೆ ಎಂದರು.