ಕರ್ನಾಟಕ

karnataka

By

Published : Feb 7, 2023, 12:24 PM IST

Updated : Feb 7, 2023, 1:08 PM IST

ETV Bharat / state

ಬಳ್ಳಾರಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: 30ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಏಳು ಮಂದಿ ಸ್ಥಿತಿ  ಗಂಭೀರ

ಬಳ್ಳಾರಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳ - 30ಕ್ಕೂ ಹೆಚ್ಚು ಜನರ ಮೇಲೆ ದಾಳಿ - ಏಳು ಮಂದಿ ಗಂಭೀರ ಗಾಯ

bellary
ಬೀದಿ ನಾಯಿಗಳ ಹಾವಳಿ

ಬಳ್ಳಾರಿ:ಬಳ್ಳಾರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ನಗರದ ವಾರ್ಡ್​ ನಂ.30ರ ವಟ್ಟಪ್ಪಗೇರಿಯಲ್ಲಿ ನಿನ್ನೆ ರಾತ್ರಿ ಏಕಾಏಕಿ 30 ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಮಕ್ಕಳು ಸೇರಿದಂತೆ ಮಹಿಳೆಯರ ಮೇಲೂ ಈ ನಾಯಿಗಳು ತಮ್ಮ ಅಟ್ಟಹಾಸ ತೋರಿವೆ.

ಪರಿಣಾಮವಾಗಿ ಏಳು ಜನರು ಗಂಭೀರ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಪಾಲಿಕೆ ಆಯುಕ್ತ ರುದ್ರೇಶ್​ ಭೇಟಿ ನೀಡಿದ್ದು, ಬೀದಿ ನಾಯಿಗಳನ್ನು ಹಿಡಿಯಲು ಪಾಲಿಕೆ ಸಿಬ್ಬಂದಿಗಳು ಮುಂದಾಗಿದ್ದಾರೆ. ಬೆಳಗ್ಗೆಯಿಂದಲೇ ನಗರದಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ:ಉತ್ತರಕನ್ನಡದಲ್ಲಿ ಬೀದಿ ನಾಯಿ ಕಾಟ: 6 ಸಾವಿರಕ್ಕೂ ಹೆಚ್ಚು ಜನರ ಮೇಲೆ ಶ್ವಾನಗಳ ದಾಳಿ

ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಸರ್ಕಾರದಿಂದ ಸುತ್ತೋಲೆ: ನಗರಾಭಿವೃದ್ಧಿ ಮತ್ತು ಪಶುಸಂಗೋಪನೆ ಇಲಾಖೆಯು ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಜಂಟಿ ಸುತ್ತೋಲೆ ಹೊರಡಿಸಿದೆ. ಕೆಲ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಈ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಿದ್ದಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಾಗಲು ಸಾಧ್ಯವಿದೆ ಎಂದು ತಿಳಿಸಿತ್ತು.

ಮಾರ್ಗಸೂಚಿ ಪ್ರಕಾರ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದಿರುವ ಕಲ್ಯಾಣ ಸಂಸ್ಥೆಗಳು ಮಾತ್ರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅಗತ್ಯವಿರುವ ಹಣಕಾಸನ್ನು ಪ್ರತಿ ವರ್ಷ ಸ್ಥಳೀಯ ಸಂಸ್ಥೆಗಳ ಆಯವ್ಯಯದಲ್ಲಿ ಹಂಚಿಕೆ ಮಾಡಿಕೊಳ್ಳಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಕೂಡ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯ ನಂತರ ಲಸಿಕೆಯನ್ನು ನೀಡಿ ನಾಯಿಗಳನ್ನು ಕರೆತಂದ ಪ್ರದೇಶಗಳಲ್ಲೇ ವಾಪಸ್​ ಬಿಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಬೀದಿ ನಾಯಿ ದಾಳಿ ಮಾಡಿದರೆ ಕೊಂದೇ ಬಿಡುವೆ.. ಏರ್​ಗನ್​ ಪ್ರದರ್ಶಿಸಿದ ವ್ಯಕ್ತಿ ವಿರುದ್ಧ ಕೇಸ್​

ತೀರಾ ಇತ್ತೀಚೆಗೆ ಅಂದರೆ ಜನವರಿ ತಿಂಗಳಲ್ಲಿ ಸೂರತ್​ನಲ್ಲಿ 7 ವರ್ಷದ ಪುಟ್ಟ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು. ಸೂರತ್​ನ ವಾಪೂಲ್​​ಪಡ ಅಶ್ವನಿ ಕುಮಾರ್​​ ಸೊಸೈಟಿ ನಡೆದ ದಾಳಿಯಲ್ಲಿ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣಕ್ಕೆ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಮುಖಕ್ಕೆ ಅನೇಕ ಹೊಲಿಗೆಗಳನ್ನು ಹಾಕಲಾಗಿದೆ. ಘಟನೆ ಬಳಿಕ ಸ್ಥಳೀಯರು ಈ ಕುರಿತು ವರದಿ ಮಾಡಿದ ಹಿನ್ನೆಲೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಬೀದಿನಾಯಿ ಹಿಡಿಯುವ ಕೆಲಸ ಮಾಡಿದ್ದಾರೆ.

ಇನ್ನೊಂದೆಡೆ ಬೀದಿ ನಾಯಿ ಹಾವಳಿ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕೋರ್ಟ್​ ಮೆಟ್ಟಿಲನ್ನೂ ಏರಿದ್ದು, ಅಲ್ಲಿನ ಕೋರ್ಟ್​ ಪುಣೆ ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ನಡೆದಿವೆ.

ಮತ್ತೊಂದು ಕಡೆ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಾಯಿ ಕಡಿತದ ಪ್ರಕರಣಗಳು ಕೂಡ ಏರಿಕೆ ಕಾಣುತ್ತಿದೆ. ಇಲ್ಲಿನ ನ್ಯೂ ಸಿವಿಲ್​ ಆಸ್ಪತ್ರೆಯಲ್ಲಿ ದಿನಕ್ಕೆ 25ರಿಂದ 30 ನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತಿದೆ. ಅದರಲ್ಲೂ ಮಕ್ಕಳ ಮೇಲಿನ ಈ ಪ್ರಕರಣ ಸಂಖ್ಯೆ ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ.

Last Updated : Feb 7, 2023, 1:08 PM IST

ABOUT THE AUTHOR

...view details