ವಿಜಯನಗರ : ಟಿಪ್ಪರ್, ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ಸರಣಿ ಅಪಘಾತದಲ್ಲಿ ಓರ್ವ ಬಾಲಕ, ಮಹಿಳೆಯರು ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ವ್ಯಾಸನಕೇರಿ ಬಳಿ ರಾಷ್ತ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಮಧ್ಯಾಹ್ನ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಕ್ರೂಸರ್ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರ್ ಮುಂಭಾಗ ಜಖಂಗೊಂಡಿದ್ದು, ಕಳಚಿ ಬಿದ್ದಿದೆ. ಮತ್ತೊಂದು ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಮೃತರನ್ನು ಹೊಸಪೇಟೆಯ ಉಕ್ಕಡ ಕೇರಿಯ ಉಮಾ (45), ಕೆಂಚವ್ವ (80), ಭಾಗ್ಯ (32), ಅನಿಲ (30), ಗೋಣಿ ಬಸಪ್ಪ (65), ಭೀಮಲಿಂಗಪ್ಪ (50), ಬಾಲಕ ಯುವರಾಜ (4) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಮೃತರ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.
ಮೃತರ ಕುಟುಂಬಸ್ಥರ ಆಕ್ರಂದನ: ಕ್ರೂಸರ್ ವಾಹನದಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಕುಟುಂಬಸ್ಥರು, ಮರಳಿ ಬರುವಾಗ ದುರ್ಘಟನೆ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಖಂಗೊಂಡ ವಾಹನಗಳಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ.