ಕರ್ನಾಟಕ

karnataka

ETV Bharat / state

ಹೊಸಪೇಟೆ: ಲಾಕ್‍ಡೌನ್ ಸಮಯದಲ್ಲಿ ನೂರಕ್ಕೂ ಹೆಚ್ಚು ಬಾಲ್ಯವಿವಾಹ ತಡೆ - child marriages news

ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಜನಜಾಗೃತಿ ವಾಹನವು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಕಾಣೆಯಾದ ಮಕ್ಕಳು, ದೌರ್ಜನ್ಯಕ್ಕೊಳಗಾದ ಮಕ್ಕಳು, ವಿಕಲಚೇತನ ಮಕ್ಕಳು, ನಿರ್ಗತಿಕ ಮಕ್ಕಳು ಸಹಾಯಕ್ಕಾಗಿ ಜಾರಿಗೆ ತಂದಿರುವ 1098 ಚೈಲ್ಡ್​ಲೈನ್ ಮಕ್ಕಳ ಸಹಾಯವಾಣಿ ಕುರಿತು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೋಷಣಾ ಅಭಿಯಾನದ ಉದೇಶಗಳು, ಮಕ್ಕಳ ರಕ್ಷಣ ಘಟಕದ ಕಾರ್ಯನಿರ್ವಹಣೆ ಕುರಿತಾದ ಮಾಹಿತಿ ಮತ್ತು ಜನಜಾಗೃತಿಯನ್ನು ಮೂಡಿಸಲಾಗುತ್ತದೆ.

Hospet
ಹೊಸಪೇಟೆಯಲ್ಲಿ ಲಾಕ್‍ಡೌನ್ ಸಮಯದಲ್ಲಿ ನೂರಕ್ಕೂ ಹೆಚ್ಚು ಬಾಲ್ಯವಿವಾಹಗಳಿಗೆ ತಡೆ

By

Published : Aug 13, 2020, 6:34 PM IST

ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಲಾಕ್‍ಡೌನ್ ಸಮಯದಲ್ಲೇ ಅತೀ ಹೆಚ್ಚು ಬಾಲ್ಯವಿವಾಹ ದೂರು ದಾಖಲಾಗಿದ್ದು, ನೂರಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ಇಲಾಖೆಯ ವತಿಯಿಂದ ತೆಡೆಯಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅಮರೇಶ್ ತಿಳಿಸಿದರು.

ನಗರದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ್ಯವಿವಾಹ ನಿಷೇಧ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತಾದ ಜನಜಾಗೃತಿ ಜಾಥಾ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ಆ.07 ರಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಂದ ಚಾಲನೆ ದೊರೆತ ಸಂಚಾರಿ ಜಾಗೃತಿ ಜಾಥಾ ವಾಹನವು ಇಂದಿನಿಂದ ನಗರದಲ್ಲಿ ಸಂಚರಿಸಲಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಾಲ್ಯವಿವಾಹ ನಿಷೇಧ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕಾನೂನುಗಳ ಕುರಿತು ತರಬೇತಿ ನೀಡುವುದರ ಜೊತೆಗೆ ಮಕ್ಕಳ ರಕ್ಷಣೆ ಬಗ್ಗೆ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಅನುಸರಿಸುವ ನಿಟ್ಟಿನಲ್ಲಿ ಮೊಬೈಲ್ ಧ್ವನಿವರ್ಧಕ, ಭಿತ್ತಿಪತ್ರಗಳ ಮೂಲಕವೇ ಸಾರ್ವಜನಿಕರಿಗೆ ಕೆಡುಕುಗಳ ಕುರಿತು ತಿಳಿವಳಿಕೆ ಜತೆಗೆ ಜನಜಾಗೃತಿ ಮೂಡಿಸಲಿದ್ದು, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕೊರೊನಾ ಹಿನ್ನಲೆಯಲ್ಲಿಯೂ ಬಾಲ್ಯವಿವಾಹದ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು, ಅವುಗಳಲ್ಲಿ ಬೆಳಗಿನ ಜಾವ ನಡೆಯುವ ಪ್ರಕರಣಗಳು ಕಂಡುಬಂದಿವೆ. ಬಹುತೇಕ ಪೋಷಕರು ಅನಕ್ಷರಸ್ಥರಾಗಿದ್ದು ಬಾಲ್ಯವಿವಾಹ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ವಿವಾಹ ಪೂರ್ವದಲ್ಲೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಂಚಾರಿ ವಾಹನವು ಸಹಕಾರಿಯಾಗಲಿದೆ.

ಜತೆಗೆ ಜನಪ್ರತಿನಿಧಿಗಳು ಗ್ರಾಮಸ್ಥರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಜನಪ್ರತಿನಿಧಿಗಳು ಮನವರಿಕೆ ಮಾಡುವುದರಿಂದ ಹೆಚ್ಚಿನ ಅರಿವು ಮೂಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ನೀಡಿ ಮಾತನಾಡಿದ ತಾಲೂಕು ಪಂಚಾಯತಿ ಅಧ್ಯಕ್ಷೆ ನಾಗವೇಣಿ ಬಸವರಾಜ್ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಸೇರಿದಂತೆ ಮಕ್ಕಳ ದೌರ್ಜನ್ಯ ಪ್ರಕರಣಗಳ ವಿರುದ್ಧ ಜನರಿಗೆ ಜಾಗೃತಿ ಮೂಡಿಸಲು ಸಂಚಾರಿ ವಾಹನದ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಲಿದೆ ಎಂದರು.

ನಂತರ ಮಾತನಾಡಿದ ಗ್ರೇಡ್ 2 ತಹಶೀಲ್ದಾರ್ ಅಮರನಾಥ್ ಅವರು, ಜನರಿಗೆ ತಿಳುವಳಿಕೆಗಿಂತ ಅನುಭವ ಹೆಚ್ಚು ಜಾಗೃತಿ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಾರ್ಯ ಶ್ಲಾಘನೀಯವಾದುದ್ದು, ಆಡಳಿತ ವರ್ಗದ ಜೊತೆಗೆ ಜನಪ್ರತಿನಿಧಿಗಳು ಸಹ ಬಾಲ್ಯವಿವಾಹ ನಿಷೇಧ ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಸೇರಿದಂತೆ ಭವಿಷ್ಯ ಉಜ್ವಲತೆಗೆ ಹೆಚ್ಚಿನ ಒತ್ತು ನೀಡಿ ಅರಿವು ಮೂಡಿಸಿದಾಗ ಜನಜಾಗೃತಿ ಶಾಶ್ವತವಾಗಿ ನೆಲೆಯುರುತ್ತದೆ ಹಾಗೂ ಕಾರ್ಯಕ್ರಮದ ಸಾರ್ಥಕತೆಯು ಲಭಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷರಾದ ಶಿವಪ್ಪ, ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್, ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಡಾ.ಆನಂದ್, ಚೈಲ್ಡ್ ಲೈನ್ ತಾಲೂಕು ಸಂಯೋಜಕರಾದ ಚಿದಾನಂದ ಹಾಗೂ ಸಿಬ್ಬಂದಿಗಳು ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.

ABOUT THE AUTHOR

...view details