ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್ನಿಂದ ಗುಣಮುಖರಾದ ಮಕ್ಕಳಲ್ಲಿ ಹೊಸದಾದ ಮಿಸ್- ಸಿ ಕಾಯಿಲೆ ಪತ್ತೆಯಾಗಿದೆ. ಕೊರೊನಾ, ಬ್ಲ್ಯಾಕ್ ಫಂಗಸ್ ಹಾಗೂ ಮೂರನೇ ಅಲೆಯ ಆತಂಕದ ನಡುವೆ ಹೊಸದಾದ ರೋಗ ಪತ್ತೆಯಾಗಿರುವುದು ಉಭಯ ಜಿಲ್ಲೆಗಳ ಜನರನ್ನು ಭೀತಿಗೆ ದೂಡಿದೆ.
ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಕೆಲವೇ ಕೆಲ ಮಕ್ಕಳಲ್ಲಿ ಮಿಸ್-ಸಿ (MIS- C) ಕಾಯಿಲೆ ಕಂಡುಬಂದಿದೆ. ಬಳ್ಳಾರಿ- ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ 35 ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
MIS- C ಎಂದರೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಹೆಚ್ಓ ಜನಾರ್ದನ್, ಇದನ್ನು ಮಲ್ಟಿ ಆರ್ಗನ್ ಇನ್ ಫೆಂಟ್ರಿ ಸಿಂಡ್ರೋಮ್ ಇನ್ ಚಿಲ್ಡ್ರನ್ ( ಮಿಸ್- ಸಿ) ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಈ ರೋಗಕ್ಕೆ ತುತ್ತಾಗಿರುವ ಮಕ್ಕಳನ್ನು ಪರೀಕ್ಷಿಸಿದಾಗ ಕೋವಿಡ್ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂದರೆ ಕೋವಿಡ್ ಬಂದಿರುವುದು ಗೊತ್ತಾಗದೆ ಇದ್ದರೂ ಕೊರೊನಾ ಬಂದು ಹೋಗಿರೋದನ್ನು ಈ ರೋಗ ಖಚಿತಪಡಿಸುತ್ತದೆ.
ಯಾವ ಮಕ್ಕಳು ಕೊರೊನಾಗೆ ತುತ್ತಾಗಿ ಗುಣಮುಖರಾಗಿರುತ್ತಾರೋ ಅಂತಹ ಮಕ್ಕಳಿಗೆ ಎರಡು-ಮೂರು ವಾರಗಳ ನಂತರ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಆ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುತ್ತದೆ. ಮೂತ್ರಪಿಂಡ, ಲಿವರ್ ಸಹಿತ ದೇಹದ ಬಹುತೇಕ ಅಂಗಾಂಗಗಳಿಗೆ ತೊಂದರೆಯಾಗುತ್ತದೆ.