ಬಳ್ಳಾರಿ:ಮಹಾನಗರ ಪಾಲಿಕೆ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಮೊದಲಿಗೆ ಕೋವಿಡ್ ನಿಯಮ ಉಲ್ಲಂಘಿಸಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಗುಂಪು ಕಟ್ಟಿಕೊಂಡು ಮತಗಟ್ಟೆಗೆ ಕೇಂದ್ರಕ್ಕಾಗಮಿಸಿ ಮತದಾನ ಮಾಡಿದ್ರು.
ಬಳ್ಳಾರಿ ಪಾಲಿಕೆ ಚುನಾವಣೆ: ಗುಂಪು ಕಟ್ಟಿಕೊಂಡು ಮತಗಟ್ಟೆಗೆ ಆಗಮಿಸಿದ ಶ್ರೀರಾಮುಲು!
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮತದಾನ ಕೇಂದ್ರಕ್ಕೆ ಗುಂಪು ಕಟ್ಟಿಕೊಂಡೇ ಬಂದ ಸಚಿವ ಶ್ರೀರಾಮುಲು ನಂತರ ಎಚ್ಚೆತ್ತು ಕೋವಿಡ್ ನಿಯಮಗಳನ್ನು ಪಾಲಿಸಿ ಮತದಾನ ಮಾಡಿದ್ದಾರೆ.
ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆ ಕೇಂದ್ರಕ್ಕಾಗಮಿಸಿದ ಸಚಿವ ಶ್ರೀರಾಮುಲು, ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಆಗಮಿಸಿದ್ರು. ಬಳಿಕ ಎದುರಿಗಿದ್ದ ಕ್ಯಾಮರಾಗಳನ್ನ ಸೂಕ್ಷ್ಮವಾಗಿ ಗಮನಿಸಿ, ತಮ್ಮ ಸುತ್ತಲೂ ಇದ್ದ ಕಾರ್ಯಕರ್ತರು, ಮುಖಂಡರನ್ನ ಚದುರಿಸಿ, ತಮ್ಮೊಂದಿಗೆ ಮೂವರನ್ನ ಮಾತ್ರ ಮತಗಟ್ಟೆಗೆ ಕರೆದೊಯ್ದರು.
ಮತಗಟ್ಟೆ ಕೇಂದ್ರದ ಮುಂದೆ ಸಚಿವ ಶ್ರೀರಾಮುಲು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು, ಒಳ ಹೋಗಿ ಮತದಾನ ಮಾಡಿದ್ರು. ಮತದಾನದ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಈ ಬಾರಿ ಅಭಿವೃದ್ಧಿ ಪರ ಮತದಾನ ನಡೆಯಲಿದೆ. 39 ವಾರ್ಡುಗಳ ಪೈಕಿ 27 ವಾರ್ಡುಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಮತದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಮಾಸ್ಕ್ ಧರಿಸುವ ಮೂಲಕ ಮತದಾನ ಮಾಡಬೇಕು. ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ ಪ್ರತಿಯೊಬ್ಬರೂ ಚುನಾವಣಾ ಆಯೋಗದ ಮಾರ್ಗಸೂಚಿ ಅನುಸರಿಸಬೇಕೆಂದು ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ.