ವಿಜಯನಗರ: ದೇಶದ ಕಾರ್ಯಾಂಗದ ಅವಿಭಾಜ್ಯ ಹಾಗೂ ಪ್ರಮುಖ ಅಂಗವಾದ ಐಎಎಸ್ ಅಧಿಕಾರಿ ವರ್ಗವು ಆಡಳಿತಾತ್ಮಕವಾಗಿ ರಾಷ್ಟ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂತಹ ಅಧಿಕಾರಿಯಾಗಲು ತರಬೇತಿ ಪಡೆಯುತ್ತಿರುವ ಐಎಎಸ್ ಅಧಿಕಾರಿಗಳಿಗೆ ಪಾಠ ಮಾಡುವ ಅವಕಾಶವೊಂದು ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಒಲಿದು ಬಂದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಅವರು ಉತ್ತರಾಖಂಡ ರಾಜ್ಯದ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ಸುಮಾರು 500 ತರಬೇತಿನಿರತ ಐಎಎಸ್ ಅಧಿಕಾರಿಗಳಿಗೆ ಆಗಸ್ಟ್ 30 ರಂದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಕೈಗೊಂಡಿರುವ ವಿವಿಧ ಯೋಜನೆಗಳ ವಿವರ ಹಾಗೂ ಅವುಗಳ ಯಶಸ್ವಿ ಅನುಷ್ಠಾನ ಮಾಡುವ ಪ್ರಕ್ರಿಯೆ ಕುರಿತು ತಮ್ಮ ಕಾರ್ಯಾನುಭವ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ: ಸೈಕಲ್ನಲ್ಲಿ ಕಚೇರಿಗೆ ಆಗಮಿಸ್ತಾರೆ ಹಿರಿಯ ಐಎಎಸ್ ಅಧಿಕಾರಿ ಪುರುಷೋತ್ತಮ್
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಯೋಜನೆಗಳ ಜಾರಿಯಲ್ಲಿ ಎದುರಿಸಬಹುದಾದ ಸಮಸ್ಯೆ ಹಾಗೂ ಸವಾಲುಗಳನ್ನು ಈ ತರಬೇತಿ ನಿರತ ಐಎಎಸ್ ಅಧಿಕಾರಿಗಳಿಗೆ ಮಹೇಂದ್ರ ಅವರು ವಿವರಿಸಲಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಂದ್ರ, ಡಿಪ್ಲೊಮಾ ಪದವೀಧರ. ತಾವು ಹುಟ್ಟಿ ಬೆಳೆದ ಪರಿಸರದಲ್ಲಿಯೇ ಏನಾದರೂ ಸಾಧಿಸಬೇಕೆಂದು ನಿರ್ಣಯಿಸಿ ಹುಟ್ಟೂರಿಗೆ ಮರಳಿದ ಇವರು, ಸಮಾಜ ಸೇವೆ ಮಾಡುವ ಮೂಲಕ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟರು. ಅಧಿಕಾರ ವಿಕೇಂದ್ರೀಕರಣವೇ ಗ್ರಾಮೀಣ ಪ್ರದೇಶಗಳ ರೂಪಾಂತರಕ್ಕೆ ರಹದಾರಿ ಎಂದು ಮನಗೊಂಡಿರುವ ಮಹೇಂದ್ರ, ದೇವಗೊಂಡನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ವಿವಿಧ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಜನಪ್ರಿಯರಾಗಿದ್ದಾರೆ.
ಇದನ್ನೂ ಓದಿ:ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ