ಬಳ್ಳಾರಿ:ಜೋಡೆತ್ತಿನ ಕೂರಿಗಿ ಮುಗ್ಗರಿಸುತ್ತಲೇ ಪರಾಕ್ ಎಂದು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ಭವಿಷ್ಯ ನುಡಿದಿದ್ದಾನೆ.
ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್... ಮೈಲಾರಲಿಂಗೇಶ್ವರನ ಕಾರಣಿಕ - ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ
ಹೂವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ನುಡಿಯುವ ಕಾರಣಿಕ ಉತ್ತರ ಕರ್ನಾಟಕ ಭಾಗದಲ್ಲಿ ತುಂಬಾ ಫೇಮಸ್. ಗೊರವಯ್ಯನ ಕಾರಣಿಕ ಅವಲಂಬಿಸಿ ನಾಡಿನ ಆಗುಹೋಗುಗಳ ಜೊತೆ ರೈತರು ಕೂಡ ತಮ್ಮ ವ್ಯವಸಾಯದ ಬಗ್ಗೆ ಯೋಜನೆ ರೂಪಿಸುತ್ತಾರೆ.
ಹಕ್ಕಂಡಿ ಗ್ರಾಮದ ಗೊರವಯ್ಯ ಹವಳದ ಚನ್ನನಗೌಡ್ರು ಭಾನೆತ್ತರದ ನಿಲಗಂಬಿ ಮೇಲೇರಿ ಸದ್ದಲೇ ಎನ್ನುತ್ತಲೇ ಈ ದೈವವಾಣಿಯನ್ನು ನುಡಿದು ಬಳಿಕ, ಕೆಳಗಡೆ ಬಿದ್ದರು. ಗೊರವಯ್ಯನನ್ನು ಸುತ್ತಲೂ ಸೇರಿದ್ದ ಭಕ್ತರು ರಕ್ಷಣೆ ಮಾಡಿದ್ರು. ನಿನ್ನೆ ಸಂಜೆ ನಡೆದ ಈ ಕಾರ್ಣಿಕೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.
ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ ಈ ಭಾಗದಲ್ಲಿ ಹೆಚ್ಚು ಖ್ಯಾತಿ ಹೊಂದಿದೆ. ಈ ಬಾರಿ ಗೊರವಯ್ಯ ನುಡಿದ "ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್" ಕಾರಣಿಕ ಅಶುಭ ಸೂಚಕವೆನ್ನಲಾಗಿದೆ. ಈ ಕಾರಣಿಕದಂತೆ ರೈತಾಪಿ ವರ್ಗಗಳಿಗೆ ಅಶುಭವಾಗಲಿದೆ. ಜೊಡೆತ್ತುಗಳನ್ನ ಬಳಸಿಕೊಂಡು ಬಿತ್ತುವಾಗ, ಬಿತ್ತುವ ಕೂರಿಗಿ ಮುಗ್ಗರಿಸಿ ಬೀಳುವುದು ಎಂಬುದು ಈ ಕಾರಣಿಕದ ಅರ್ಥ, ಹೀಗಾಗಿ ಈ ಭಾಗದ ರೈತರಲ್ಲಿ ಬೇಸರ ಮನೆ ಮಾಡಿದೆ.