ಕರ್ನಾಟಕ

karnataka

By

Published : Jul 9, 2023, 8:02 PM IST

ETV Bharat / state

G20 Summit: 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ.. ಹಂಪಿಯಲ್ಲಿ ನಾಳೆ ಜವಳಿ ವಸ್ತು ಪ್ರದರ್ಶನಕ್ಕೆ ಚಾಲನೆ

ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ20 ವೇದಿಕೆ- 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಆರಂಭ- ಸೋಮವಾರ ಜವಳಿ ವಸ್ತು ಪ್ರದರ್ಶನಕ್ಕೆ ಚಾಲನೆ.

G20 summit in Hampi
ಜಿ20 ಶೃಂಗಸಭೆ

ಬಳ್ಳಾರಿ: ಜಿ20 ಶೃಂಗಸಭೆ ಅಂಗವಾಗಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಇಂದಿನಿಂದ ಜು. 12ರ ವರೆಗೆ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಜರುಗಲಿದೆ. ದೇಶದ ಜವಳಿ ಕ್ಷೇತ್ರದ ವೈವಿಧ್ಯತೆ ಬಿಂಬಿಸುವ ಹಾಗೂ ಜಾಗತಿಕವಾಗಿ ಸಾಂಸ್ಕೃತಿಕ ಜವಳಿ ಉದ್ದಿಮೆಯ ಬೆಳವಣಿಗೆಗೆ ಇಂಬು ಕೊಡುವ ನಿಟ್ಟಿನಲ್ಲಿ ಹಂಪಿಯ ಎದುರು ಬಸವಣ್ಣ ಮಂಪಟದ ಆವರಣದಲ್ಲಿ ಜವಳಿ ವಸ್ತು ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಾಂಸ್ಕೃತಿಕ ಮಂತ್ರಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಹೇಳಿದರು. ಈ ಕುರಿತು ತೋರಣಗಲ್ ಪಟ್ಟಣದ ವಿದ್ಯಾ ನಗರದ ಜೆ-ಮ್ಯಾಕ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು‌.

ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ20 ವೇದಿಕೆಯಾಗಿದೆ. ಈ ಹಿಂದೆ ಒಡಿಶಾದ ಖಜುರಾಹೋ ಹಾಗೂ ಭುವನೇಶ್ವರದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಯಶಸ್ವಿಯಾಗಿವೆ. ಇದರಲ್ಲಿ ಜಿ‌20 ಸದಸ್ಯ ರಾಷ್ಟ್ರಗಳ 45 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಹಲವಾರು ವೆಬಿನಾರ್‌ಗಳನ್ನು ಸಹ ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು.

ಉದ್ದೇಶವೇನು?:

  • ಜಿ‌20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮುಖ್ಯ ಉದ್ದೇಶ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಿ ಪುನರ್‌ ಸ್ಥಾಪಿಸುವುದಾಗಿದೆ. 1970ರ ಯುನೆಸ್ಕೋ ಒಡಂಬಡಿಕೆಯಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ವಸಾಹತು ಸಮಯ ಅಥವಾ ಇನ್ನಿತರ ಮಾರ್ಗಗಳಿಂದ ತಮ್ಮ ರಾಷ್ಟ್ರದೊಳಗೆ ಆಗಮಿಸಿದ ಸಾಂಸ್ಕೃತಿಕ ಮಹತ್ವವುಳ್ಳ ಕಲಾಕೃತಿಗಳನ್ನು ಹಿಂದಿರುಗಿಸಬೇಕು. ಭಾರತವು ಸಹ ಇದಕ್ಕೆ ಬದ್ಧವಾಗಿದೆ. ಈಗಾಗಲೇ ಭಾರತ ಅಮೆರಿಕ ಸೇರಿದಂತೆ ಇತರ ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ 150 ಹೆಚ್ಚು ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ.
  • ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ 2ನೇ ಮುಖ್ಯ ಉದ್ದೇಶವೆಂದರೆ ಜನಜೀವನದ ಜೊತೆಗೆ ಪಾರಂಪರಿಕವಾಗಿ ಬಳಕೆಗೆ ಬಂದ ಪದ್ಧತಿಗಳನ್ನು ಉಳಿಸಿ ಬೆಳೆಸುವುದಾಗಿದೆ. ಭಾರತದಲ್ಲಿ ಆಯುರ್ವೇದ ಪದ್ಧತಿ ಬಳಕೆಯಲ್ಲಿದೆ. ಹಲವಾರು ಸಂದರ್ಭದಲ್ಲಿ ಆಯುರ್ವೇದದಲ್ಲಿ ಬಳಕೆಯಲ್ಲಿದ್ದ ಔಷಧೋಪಚಾರಗಳ ಸ್ವಾಮ್ಯ ಹಕ್ಕು(ಪೇಟೆಂಟ್) ಬೇರೆಯವರ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ.
  • 3ನೇ ಉದ್ದೇಶ ಸಾಂಸ್ಕೃತಿಕ ಅಂಶಗಳು, ಕಲಾ ಕುಸರಿ ಹಾಗೂ ಉದ್ದಿಮೆಗಳನ್ನು ಪ್ರಚುರ ಪಡಿಸುವುದಾಗಿದೆ. ಇದರ ಅಂಗವಾಗಿ ಹಂಪಿಯಲ್ಲಿ ಜವಳಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
  • 4ನೇ ಉದ್ದೇಶ ಸಾಂಸ್ಕೃತಿಕ ಅಂಶಗಳಿಗೆ ಡಿಜಿಟಲ್ ರೂಪ ನೀಡಿ, ಆಡಿಯೋ, ವಿಡಿಯೋ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದಾಗಿದೆ.

ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸಲು ಆಧಾರವಾಗಿದೆ ಎಂದು ಜಿ20 ಸಾಂಸ್ಕೃತಿಕ ಕಾರ್ಯಕಾರಣಿ ಗುಂಪು ನಂಬಿದೆ. ವಾರಣಾಸಿಯಲ್ಲಿ ಆ.26 ರಂದು ಸಾಂಸ್ಕೃತಿಕ ಕಾರ್ಯಕಾರಣಿ ಗುಂಪಿನ ಅಂತಿಮ ಸಭೆ ನಡೆಯಲಿದೆ. ವಾರಣಾಸಿ ಸಭೆಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಗೋವಿಂದ ಮೋಹನ್ ತಿಳಿಸಿದರು.

ಗಿನ್ನಿಸ್ ದಾಖಲೆಯ ಲಂಬಾಣಿ ಕಸೂತಿ ಕಲೆ: ಹಂಪಿಯ ಎದುರು ಬಸವಣ್ಣ ಮಂಟಪ ಎದುರು ಜವಳಿ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಜು.10ರಂದು ವಸ್ತು ಪ್ರದರ್ಶನದ ಉದ್ಘಾಟನೆ ನಡೆಯಲಿದೆ. 450 ಜನ ಲಂಬಾಣಿ ಸಮುದಾಯದ ಮಹಿಳೆಯರು 1300 ಕಸೂತಿಗಳನ್ನು ರಚಿಸುವರು. ಜತೆಗೆ ಕರಕಶುಲ ಹಾಗೂ ಜವಳಿ ಕಸೂತಿ ಕಲೆಗಾರರು ಪಾಲ್ಗೊಳ್ಳುವರು‌. ಸಂಡೂರಿನ ಲಂಬಾಣಿ ಕಲಾ ಕೇಂದ್ರ ವಿಶ್ವ ಗಿನ್ನಿಸ್ ದಾಖಲೆಯ ಲಂಬಾಣಿ ಕಸೂತಿ ಪ್ರದರ್ಶನ ನಡೆಯಲಿದೆ. ಈ ಮೂಲಕ ಜಾಗತಿಕವಾಗಿ ಲಂಬಾಣಿ ಕಸೂತಿಗೆ ಮನ್ನಣೆ ದೊರಕಿಸಿ, ಅಂತಾರಾಷ್ಟ್ರೀಯ ಮಾರುಕಟ್ಟೆ ದೊರಕಿಸಿಕೊಡಲಾಗುವುದು ಎಂದು ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ ತಿಳಿಸಿದರು‌.

ಮಾಧ್ಯಮಗೋಷ್ಟಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕ ಕೆ ಕೆ ಬಸಾ ಹಾಗೂ ಕೇಂದ್ರ ವಾರ್ತಾ ವಿಭಾಗದ(ಪಿಐಬಿ) ಸಹಾಯಕ ಮಹಾ ನಿರ್ದೇಶಕಿ ನಾನು ಭಾಸಿನ್ ಉಪಸ್ಥಿತರಿದ್ದರು.

ಇದನ್ನೂ ಓದಿ:G-20 summit: ಜಿ-20 ಶೃಂಗಸಭೆ: ನವವಧುವಿನಂತೆ ಶೃಂಗಾರಗೊಂಡ ಐತಿಹಾಸಿಕ ಹಂಪಿ

ABOUT THE AUTHOR

...view details