ಹೊಸಪೇಟೆ(ವಿಜಯನಗರ):ಮಳೆ ಇಲ್ಲದೇ ಒಣಗಿದ ಮೆಕ್ಕೆಜೋಳದ ಬೆಳೆಯನ್ನು ರೈತ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿರುವ ಘಟನೆ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ನಡೆದಿದೆ.
ಮಳೆಯಿಲ್ಲದೇ ಒಣಗಿದ 12 ಎಕರೆ ಮೆಕ್ಕೆಜೋಳ: ಬೆಳೆ ನಾಶಪಡಿಸಿ ರೈತನ ಹತಾಶೆ - Hospete News
ಮಳೆ ಅಭಾವದಿಂದ ಮೆಕ್ಕೆಜೋಳ ಬೆಳೆ ಕುಂಟಿತವಾಗಿದ್ದು, ಇದರಿಂದ ನೊಂದ ರೈತ ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿ ಬೇಸರ ವ್ಯಕ್ತಪಡಿಸಿದ್ದಾನೆ.

ರೈತ ವಿದ್ಯಾಧರ ಎಂಬವರು 12 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡಿದ್ದಾರೆ. ಮಳೆ ಅಭಾವದಿಂದ ಬೆಳೆ ಕುಂಟಿತವಾಗಿದ್ದು, ಇದರಿಂದ ನೊಂದ ರೈತ ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹಿರೇಹಡಗಲಿ, ಹಿರೇಕೊಳಚಿ, ಮಾನ್ಯರ ಮಸಲವಾಡ ಸೇರಿದಂತೆ ಈ ಭಾಗದ ಹಲವು ಕಡೆ ಬೆಳೆಯನ್ನು ಬೆಳೆಯಲಾಗಿತ್ತು. ಆದರೆ ಮಳೆಯ ಕೊರತೆಯಿಂದ ಎಲ್ಲವೂ ಹಾಳಾಗಿವೆ. ಇನ್ನು ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದರು.
ರೈತ ರಮೇಶ್ ಮಾತನಾಡಿ, ಮಳೆಯ ಅಭಾವದಿಂದ ಮೆಕ್ಕೆಜೋಳ ಬೆಳೆಯಲ್ಲಿ ತೆನೆ ಬಂದಿಲ್ಲ. ದನಕರುಗಳಿಗೆ ಬೆಳೆಯನ್ನು ತಿನ್ನಿಸುವ ಸಂಕಷ್ಟ ರೈತರಿಗೆ ಎದುರಾಗಿದೆ. 12 ಎಕರೆಗೆ ಸುಮಾರು 80 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ, ರೈತರಿಗೆ ಬಿಡಿಗಾಸು ಸಹ ಬಂದಿಲ್ಲ. ಸದ್ಯ ಮಳೆ ಬಂದರೂ ಸಹ ಬೆಳೆ ಕೈಗೆಟುಕುವುದಿಲ್ಲ ಎಂಬಂತಾಗಿದೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿಕೊಂಡರು.