ಬಳ್ಳಾರಿ: ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಜನರು ಮಣ್ಣಿನ ಪಾತ್ರೆಗಳ ಮೊರೆ ಹೋಗಿದ್ದಾರೆ. ಹೀಗಾಗಿ, ಮಣ್ಣಿನ ಮಡಿಕೆಗಳಿಗೆ ಬಾರಿ ಬೇಡಿಕೆ ಶುರುವಾಗಿದೆ.
ಹೆಚ್ಚಿದ ಬಿಸಿಲಿನ ಧಗೆ: ಗಣಿ ನಾಡಲ್ಲಿ ಮಣ್ಣಿನ ಪಾತ್ರೆಗಳಿಗೆ ಸಖತ್ ಡಿಮ್ಯಾಂಡ್ - Demand for Clay Pots in Bellary
ಬೇಸಿಗೆ ಆರಂಭದಲ್ಲೇ ಬಿಸಿಲಿನ ಧಗೆ ಬಾರೀ ಜೋರಾಗಿದ್ದು, ಗಣಿನಾಡು ಬಳ್ಳಾರಿಯ ಜನ ಈಗಾಗಲೇ ಬಿಸಿಲಿನ ಝಳಕ್ಕೆ ಬಳಲಿದ ಹಾಗೆ ಕಾಣ್ತಿದೆ. ಹೀಗಾಗಿ ಕೂಲ್ ಆಗಿ ಇರಲು ಪ್ಲಾನ್ ಮಾಡ್ತಿದ್ದು, ಮಣ್ಣಿನ ಪಾತ್ರೆಗಳತ್ತ ಗಮನಹರಿಸಿದ್ದಾರೆ. ಇದರಿಂದ ನಗರದಲ್ಲಿ ಮಡಿಕೆ ವ್ಯಾಪಾರವಂತೂ ಜೋರಾಗಿಯೇ ನಡೀತಿದೆ.
ನಗರದ ಪಾಲಿಟೆಕ್ನಿಕ್ ಕಾಲೇಜ್ ಮುಂಭಾಗದಲ್ಲಿ ರಾಜಸ್ಥಾನದಿಂದ ಬಂದ ವ್ಯಾಪಾರಸ್ಥರು ಮಡಿಕೆ ಮಾರಾಟದಲ್ಲಿ ತೊಡಗಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಮಡಿಕೆ ವ್ಯಾಪಾರಿ ಬನ್ಸಿಲಾಲ್, ಫೆ. 5ರಂದು ರಾಜಸ್ಥಾನದ ಜ್ಯೋತ್ಪುರದಿಂದ 1800 ಮಡಿಕೆಗಳನ್ನು ಮಾರಾಟಕ್ಕೆಂದು ತಂದಿದ್ದೇನೆ. ಕಳೆದ 12 ವರ್ಷಗಳಿಂದ ನಗರಕ್ಕೆ ಬಂದು ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದೇವೆ. ಬೇಸಿಗೆ ಹೆಚ್ಚಾಗಿರುವುದರಿಂದ ಮಣ್ಣಿನ ಪಾತ್ರೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ ಮಣ್ಣಿನ ನೀರಿನ ಬಾಟಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಿದರು.
ವಿಭಿನ್ನ ವಿನ್ಯಾಸದ ಕಲರ್ಫುಲ್ ಮಣ್ಣಿನ ಬಾಟಲಿ, ಕುಕ್ಕರ್ ಮತ್ತು ನೀರಿನ ಮಡಿಕೆಗಳು ಇದ್ದು, 150 ರೂಪಾಯಿಂದ 500 ರವರೆಗೆ ಮಾರಾಟವಾಗುತ್ತಿದೆ.