ಕರ್ನಾಟಕ

karnataka

ETV Bharat / state

ಹಂಪಿಯಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ: ಹೋಂಸ್ಟೇ, ಹೋಟೆಲ್, ರೆಸಾರ್ಟ್​ ನೆಲಸಮ - ಈಟಿವಿ ಭಾರತ್​ ಕನ್ನಡ ನ್ಯೂಸ್

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿದೆ.

ತೆರವು ಕಾರ್ಯಚರಣೆ
ತೆರವು ಕಾರ್ಯಚರಣೆ

By

Published : Jun 20, 2023, 9:27 AM IST

ವಿಜಯನಗರ : ವಿಶ್ವವಿಖ್ಯಾತ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಂಪಿ ನಿರ್ವಹಣe ಪ್ರಾಧಿಕಾರ ಹಾಗೂ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ ನಡೆದಿದೆ. ಅಕ್ರಮವಾಗಿ ತಲೆಎತ್ತಿದ್ದ ಹೋಂ ಸ್ಟೇ, ಹೋಟೆಲ್, ರೆಸಾರ್ಟ್​ಗಳು ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಸೋಮವಾರ ತೆರವು ಮಾಡಲಾಗಿದೆ. ಹಂಪಿಯ ಪ್ಲಾಟ್‌ಗಳಲ್ಲಿನ ಮನೆಗಳ ವಾಸ ಹೊರತುಪಡಿಸಿ, ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಬೀಗ ಹಾಕಲಾಗಿದೆ.

ಆಯುಕ್ತ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಡಿಎಸ್‌ಪಿ ವಿಶ್ವನಾಥ ಕುಲ್ಕರ್ಣಿ ಸೇರಿ ಇತರೆ ಅಧಿಕಾರಿಗಳು ಹಾಗು ಪೊಲೀಸರ ಭದ್ರತೆಯಲ್ಲಿ ಅನಧಿಕೃತ ಹೊಂ ಸ್ಟೇಗಳು, ವಾಣಿಜ್ಯ ಚಟುವಟಿಕೆಗಳ ಕಟ್ಟಡಗಳು ತೆರವು ನಡೆಯಿತು. ಕಟ್ಟಡಗಳ ತೆರವಿಗೆ ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದ್ದಂತೆ ಹೊಂ ಸ್ಟೇ ಮಾಲೀಕರು ಕಣ್ಣೀರು ಹಾಕಿದರು.

ಪ್ರವಾಸೋದ್ಯಮ ನಂಬಿಕೊಂಡಿದ್ದ ನಾವು ಇದರಿಂದ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಇದರ ಮೇಲೂ ಅಧಿಕಾರಿಗಳ ಕಣ್ಣು ಬಿದ್ದಿದೆ ಎಂದು ಇಲಾಖೆ ಅಧಿಕಾರಿಗಳು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಕೆಲವು ಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಕಟ್ಟಡಗಳನ್ನು ತೆರವು ಮಾಡಿದರು.

29 ಹಳ್ಳಿಗಳಲ್ಲಿ ತೆರವು ಕಾರ್ಯ :ಅನುಮತಿ ಇಲ್ಲದೇ 13 ಅನಧಿಕೃತ ರೆಸಾರ್ಟ್​ಗಳನ್ನು ಹಂಪಿ ಪ್ರಾಧಿಕಾರ ಗುರುತಿಸಿತ್ತು. ತಾಲೂಕಿನ ಕಡ್ಡಿರಾಂಪುರ ಲಿಟಲ್ ಬನಾನಾ, ರಿಯಾಲೋಟಸ್, ನ್ಯಾಸಾನ್ವಿ, ಷಣ್ಮುಖ ಗೌಡ ಫಾಂಹೌಸ್, ಆರ್ಗನಿಕ್ ಕೆಫೆ, ಬನಾನಾ, ಶಂಕರ್ ಹೋಂಸ್ಟೇ, ಕಡ್ಡಿರಾಂಪುರ ಕ್ರಾಸ್‌ನ ಬಳಿಯ ಸಾಗರ್ ರೆಸ್ಟೋರೆಂಟ್ ಹಾಗೂ ಕಮಲಾಪುರದಲ್ಲಿನ ಮ್ಯಾಂಗೋಟ್ರೀ, ವೆಂಕಟಾಪುರದ ಶಿವಸಾಗರ್, ಪೈ ಸ್ಕೈ ಸೇರಿದಂತೆ ಹಂಪಿ ಸುತ್ತಮುತ್ತಲಿನ 29 ಹಳ್ಳಿಗಳಲ್ಲಿ ಇತರೆ ಹೋಂ ಸ್ಟೇ, ರೆಸಾರ್ಟ್, ಹೊಟೇಲ್‌ಗಳನ್ನು ಅಧಿಕಾರಿಗಳು ತೆರವು ಮಾಡಿಸಿದ್ದಾರೆ.

ಅನಧಿಕೃತ ರೆಸಾರ್ಟ್​ಗಳು ಹಾಗು ಹೋಂ ಸ್ಟೇ ನಡೆಯುತ್ತಿರುವ ಕುರಿತು ಈಗಾಗಲೇ ಬೆಂಗಳೂರಿನ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕೂಡ ಸಲ್ಲಿಕೆಯಾಗಿದೆ. ಈ ಪ್ರಕರಣದ ವಿಚಾರಣೆ ಕೂಡ ಜೂ.26ರಂದು ನಡೆಯಲಿದೆ. ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರ ಸೇರಿದಂತೆ ಮಠಾಧೀಶರು ಈ ದಾವೆ ಹೂಡಿದ್ದಾರೆ. ಹಾಗಾಗಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ಅನಧಿಕೃತ ಹೋಂ ಸ್ಟೇ ಮತ್ತು ರೆಸಾರ್ಟ್​ಗಳನ್ನು ಬಂದ್ ಮಾಡಿಸಿದ್ದಾರೆ.

ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯಲ್ಲಿದ್ದ ಅಂಗಡಿಗಳನ್ನು 2009- 10ನೇ ಸಾಲಿನಲ್ಲಿ ಹಂಪಿ ಪ್ರಾಧಿಕಾರ ತೆರವುಗೊಳಿಸಿತ್ತು. ಆ ಬಳಿಕ ಕೊಪ್ಪಳ, ಹಂಪಿ ಮತ್ತು ಕಡ್ಡಿರಾಂಪುರ ಭಾಗದಲ್ಲೂ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಅನಧಿಕೃತ ಅನಧಿಕೃತವಾಗಿ ಕಟ್ಟಡಗಳು ತಲೆ ಎತ್ತುತ್ತಿವೆ. ಇದನ್ನರಿತು 2017ರಲ್ಲೇ ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದವರು ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪ್ರಾಧಿಕಾರ ಆಯುಕ್ತರ ಪ್ರತಿಕ್ರಿಯೆ : ಈ ಕುರಿತು ಮಾತನಾಡಿದ ಹಂಪಿ ನಿರ್ವಹಣ ಪ್ರಾಧಿಕಾರ ಆಯುಕ್ತ ಸಿದ್ದರಾಮೇಶ್ವರ, ಹಂಪಿಯಲ್ಲಿ ಅನಧಿಕೃತ ಹೋಂ ಸ್ಟೇ ಮತ್ತು ರೆಸಾರ್ಟ್​ಗಳನ್ನು ಬಂದ್ ಮಾಡಿಸಲಾಗುತ್ತಿದೆ. ಈಗಾಗಲೇ ಹಂಪಿ, ಕಡ್ಡಿರಾಂಪುರ, ಆನೆಗೊಂದಿ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಿಯಮಾವಳಿಗಳ ವಿರುದ್ದವಾಗಿ ಕಾರ್ಯನಿರ್ವಹಿಸುವ ಯಾವುದೇ ಚಟುವಟಿಕೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ :ಆನೆಗೊಂದಿ: ಅನಧಿಕೃತ ರೆಸಾರ್ಟ್​, ಹೋಂ ಸ್ಟೇಗಳ ತೆರವಿಗೆ ಜಿಲ್ಲಾಡಳಿತ ಸಿದ್ಧತೆ

ABOUT THE AUTHOR

...view details