ಕರ್ನಾಟಕ

karnataka

ETV Bharat / state

ಸಿಜೆಂಟಾ ತಳಿಯ ಮೆಣಸಿನಕಾಯಿ ಬೆಳೆಗೆ ಕೊಳೆ ರೋಗ.. ಬೆಳೆನಾಶಕ್ಕೆ ಮುಂದಾದ ರೈತರು.. - Shanavasapura

ಬೀಜ ಅಥವಾ ಹವಾಮಾನ ವೈಪರೀತ್ಯದ ಸಮಸ್ಯೆಯೇ ಎಂಬುದೇ ತಿಳಿಯುತ್ತಿಲ್ಲ‌. ಸಾಲಸೋಲ ಮಾಡಿ ಮೆಣಸಿನಕಾಯಿ ಬೆಳೆಯನ್ನ ಬೆಳೆದು ಬೆಳೆನಷ್ಟ ಅನುಭವಿಸಿದ ರೈತರ ಗೋಳು ಕೇಳೋರು ಯಾರೂ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಸೂಕ್ತ ಪರಿಹಾರ ಒದಗಿಸಿಕೊಡಲು ಮುಂದಾಗಬೇಕಿದೆ..

chilli Rotting disease
ಮೆಣಸಿನಕಾಯಿ ಬೆಳೆಗೆ ಕೊಳೆ ರೋಗ

By

Published : Jan 20, 2021, 3:56 PM IST

ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮ ಹೊರವಲಯದ ಹಾಗಲೂರು ಗುಡ್ಡಗಾಡು ಪ್ರದೇಶದಲ್ಲಿರುವ ಮೂರು ಎಕರೆ ಭೂಮಿಯಲಿ ಸಿಜೆಂಟಾ ತಳಿಯ ಮೆಣಸಿನಕಾಯಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಆ ಬೆಳೆನಾಶಕ್ಕೆ ರೈತನೋರ್ವ ಮುಂದಾಗಿದ್ದಾನೆ.

ಮೆಣಸಿನಕಾಯಿ ಬೆಳೆಗೆ ಬಂಪರ್ ದರ ಇದ್ದರೂ ಕೂಡ ಜಿಲ್ಲೆಯ ಮೆಣಸಿಕಾಯಿ ಬೆಳೆಗಾರರಲ್ಲಿ ಮಾತ್ರ ಒಂದಲ್ಲ ಒಂದು ರೀತಿಯ ಆತಂಕ ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ರೈತ ಹೊನ್ನೂರಪ್ಪ ಎಂಬುವರು ತನ್ನ 3 ಎಕರೆಯಲ್ಲಿ ಬೆಳೆದ ಸಿಜೆಂಟಾ 2043 ತಳಿಯ ಮೆಣಸಿನಕಾಯಿ ಬೆಳೆಯನ್ನ ನಾಶಪಡಿಸಲು ಮುಂದಾಗಿದ್ದಾರೆ.

ಮೆಣಸಿನಕಾಯಿ ಬೆಳೆಗೆ ಕೊಳೆ ರೋಗ..

ಯಾಕಂದ್ರೆ, ಈ ಸಿಜೆಂಟಾ ತಳಿಯ ಬೆಳೆಯಿಂದಾಗಿ ಉತ್ತಮ ಫಸಲೇನೋ ಬಂದಿತ್ತಾದ್ರೂ, ಇತ್ತೀಚೆಗೆ ಸುರಿದ ಮಳೆ ಹಾಗೂ ವಾತಾವರಣದಲ್ಲಿನ ಏರುಪೇರು ಉಂಟಾದ ಪರಿಣಾಮ ಇಡೀ ಬೆಳೆಗೆ ಮಜ್ಜಿಗೆ ರೋಗ ಬಾಧೆಯು ಕಾಣಿಸಿದೆ. ಗಿಡದಲ್ಲಿಯೇ ಹಸಿರು ಬಣ್ಣದ ಮೆಣಸಿನಕಾಯಿಗಳು ಬಾಡಿದ ಹಾಗೂ ಒಣಗಿದ ಮತ್ತು ಕೊಳೆತ ಸ್ಥಿತಿಯಲ್ಲಿ ಜೋತು ಬಿದ್ದಿವೆ.

ಈ ಮೂರು ಎಕರೆ ಪ್ರದೇಶದಲ್ಲೂ ಇಂಥಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಕಪಕ್ಕದ ಹೊಲದಲ್ಲೂ ಕೂಡ ಇಂತಹದ್ದೇ ಪರಿಸ್ಥಿತಿ ಇದೆ‌. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಕೂಡ ಮೆಣಸಿನಕಾಯಿ ಬೆಳೆಗಾರ ಮಾತ್ರ ಇಂತಹ ಬೆಳೆನಷ್ಟ ಅನುಭವಿಸೋದು ಸರ್ವೇ ಸಾಮಾನ್ಯವಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಸವಾಸಪುರ ಗ್ರಾಮದ ರೈತ ಹೊನ್ನೂರಪ್ಪ ಅವರು, ಅಂದಾಜು 4- 5 ಲಕ್ಷ ರೂ.ಗಳನ್ನ ವ್ಯಯ ಮಾಡಿ ಈ ಬಾರಿಯೂ ಕೂಡ ಸಿಜೆಂಟಾ ತಳಿಯ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಅಂದಾಜು 20 ಸಾವಿರ ರೂ.ಗಳನ್ನ ವ್ಯಯಿಸಿ ಸಿಜೆಂಟಾ ಕಂಪನಿಯ ಮೆಣಸಿನಕಾಯಿ ಬೀಜವನ್ನ ಖರೀದಿಸಲಾಗಿದೆ.

ಆದರೆ, ಬೆಳೆಯುವ ಹಂತದಲ್ಲೇ ಈ ಮಜ್ಜಿಗೆ ರೋಗಬಾಧೆ ಕಾಣಿಸಿಕೊಂಡು ಇಡೀ ಮೆಣಸಿನಕಾಯಿ ಬೆಳೆಯೇ ಸಂಪೂರ್ಣವಾಗಿ ನಾಶಪಡಿಸುವ ಹಂತಕ್ಕೆ ತಲುಪಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗ್ರಾಮದ ಯುವ ರೈತ ಹನುಮಯ್ಯ ಮಾತನಾಡಿ, ಸಿಂದಿಗೇರಿ, ಶಾನವಾಸಪುರ ಗ್ರಾಮ ಸೇರಿ ನಾನಾ ಕಡೆಗಳಲ್ಲಿ ಬೆಳೆದ ಸಿಜೆಂಟಾ ತಳಿಯ ಮೆಣಸಿನಕಾಯಿ ಬೆಳೆಯೆಲ್ಲವೂ ಇದೇ ರೀತಿಯಾಗಿದೆ.

ಬೀಜ ಅಥವಾ ಹವಾಮಾನ ವೈಪರೀತ್ಯದ ಸಮಸ್ಯೆಯೇ ಎಂಬುದೇ ತಿಳಿಯುತ್ತಿಲ್ಲ‌. ಸಾಲಸೋಲ ಮಾಡಿ ಮೆಣಸಿನಕಾಯಿ ಬೆಳೆಯನ್ನ ಬೆಳೆದು ಬೆಳೆನಷ್ಟ ಅನುಭವಿಸಿದ ರೈತರ ಗೋಳು ಕೇಳೋರು ಯಾರೂ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಸೂಕ್ತ ಪರಿಹಾರ ಒದಗಿಸಿಕೊಡಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಓದಿ...ಗೌಪ್ಯತೆ ಪಾಲಿಸಿ ವಿರುದ್ಧ ಕೇಂದ್ರದ 14 ಸವಾಲ್​: ನಿಮ್ಮ ಪ್ರಶ್ನೆಗೆ ಉತ್ತರಿಸಲು ಸಿದ್ಧ ಎಂದ ವಾಟ್ಸ್​ಆ್ಯಪ್​ ಮೆಸೇಜ್

ABOUT THE AUTHOR

...view details