ಬಳ್ಳಾರಿ: ನಾನಾ ಕಾರಣಗಳಿಗಾಗಿ ಸದ್ದು ಮಾಡುವ ಶ್ರೀಮಂತ ಇತಿಹಾಸ, ಪರಂಪರೆ ಹೊಂದಿರುವ ಬಳ್ಳಾರಿ ಜಿಲ್ಲೆಯು ಕನ್ನಡ ಪರಿಣಾಮಕಾರಿ ಅನುಷ್ಠಾನ ಮಾಡುವುದರ ಮೂಲಕ ಮಾದರಿ ಜಿಲ್ಲೆಯಾಗಿ ಸದ್ದು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ. ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕನ್ನಡವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬುದನ್ನು ಅರಿತುಕೊಂಡು ಅಧಿಕಾರಿಗಳು ಕನ್ನಡ ಅನುಷ್ಠಾನ ಮಾಡಬೇಕು. ಗಡಿ ಜಿಲ್ಲೆಯಾಗಿರುವ ಬಳ್ಳಾರಿಯಲ್ಲಿ ಮಾದರಿಯಾಗಿ ಕನ್ನಡ ಅನುಷ್ಠಾನವಾಗಿದೆ ಎಂದು ಹೆಮ್ಮೆಯಿಂದ ಹೇಳುವ ರೀತಿಯಲ್ಲಿ ಕೆಲಸ ಮಾಡಿ. ಕನ್ನಡ ಬೆಳೆಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು. ಕನ್ನಡ ಅನುಷ್ಠಾನದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿರುವುದು ಗಮನಕ್ಕಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಮವಹಿಸಲಿದೆ ಎಂಬ ಅಶ್ವಾಸನೆ ನೀಡಿದರು.
ಕನ್ನಡದ ಬಗ್ಗೆ ಏನೇ ಸಮಸ್ಯೆಗಳಿದ್ದರೂ ನೇರವಾಗಿ ಪ್ರಾಧಿಕಾರಕ್ಕೆ ತಿಳಿಸಬಹುದು. ಕನ್ನಡದ ಬದ್ಧತೆ, ಕನ್ನಡದ ಅಸ್ಮಿತೆಗೆ ಹಾಗೂ ಸರೋಜಿನಿ ಮಹಿಷಿ ವರದಿ ಅನುಷ್ಠಾನದಲ್ಲಿ ಪ್ರಾಧಿಕಾರ ಶ್ರಮಿಸುತ್ತಿದ್ದು, 1992ರಲ್ಲಿ ಸ್ಥಾಪನೆಯಾಗಿರುವ ಪ್ರಾಧಿಕಾರಕ್ಕೆ 30 ವರ್ಷ ತುಂಬಿರುವ ಈ ಶುಭ ಸಂದರ್ಭದಲ್ಲಿ 30 ವರ್ಷಗಳು ಸಾಗಿಬಂದ ದಾರಿ ಕುರಿತು ಪುಸ್ತಕ ಸಿದ್ಧಪಡಿಸಲಾಗುತ್ತಿದ್ದು,ಅದನ್ನು ಜುಲೈ ಅಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ 18 ಪುಸ್ತಕಗಳು ಬಿಡುಗಡೆಯಾಗಲಿದ್ದು, ನಾಲ್ಕು ಕಡೆಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗುತ್ತಿದೆ ಎಂದರು.
‘ಪದಕಣಜ’ ಆ್ಯಪ್ ಬಳಸಿ:ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಡಳಿತದಲ್ಲಿ ಪದಬಳಕೆ ಸಮಸ್ಯೆಯಾದಲ್ಲಿ ಇತ್ತೀಚೆಗೆ ಸರಕಾರ ಸಿದ್ಧಪಡಿಸಿದ ‘ಪದಕಣಜ’ ಆ್ಯಪ್ ಬಳಸಿ. ಅದರಲ್ಲಿ 6ಲಕ್ಷ ಪದಗಳಿದ್ದು,ಇತ್ತೀಚೆಗೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ತಿಳಿಸಿದರು. ನಿರ್ವಿಘ್ನವಾಗಿ ಕರ್ನಾಟಕದಲ್ಲಿ ಆಡಳಿತ ಭಾಷೆ ಬಳಸಲು ತಂತ್ರಜ್ಞಾನದ ಬೆಂಬಲ ಸಿಗುತ್ತಿದೆ. ತ್ರಿಭಾಷೆ ಸೂತ್ರವಿರುವುದರಿಂದ ಇಂಗ್ಲಿಷ್ ಸುತ್ತೋಲೆಯ ಜೊತೆಗೆ ನಮ್ಮ ಕನ್ನಡ ಭಾಷೆಯಲ್ಲಿಯೂ ಸುತ್ತೋಲೆ ತರ್ಜುಮೆ ಮಾಡಿ ಕಳುಹಿಸಿಕೊಡುವಂತೆ ತಮ್ಮ ಇಲಾಖೆಗೆ ಪತ್ರ ಬರೆಯಿರಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಔಷಧಿಗಳ ಹೆಸರು, ವಿವರ ಕನ್ನಡದಲ್ಲಿರಲಿ: ರೋಗಿಗಳಿಗೆ ನೀಡುವ ಔಷಧಿಗಳ ಹೆಸರು ಮತ್ತು ವಿವರಗಳನ್ನು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದ್ದು,ಇಂಗ್ಲಿಷ್ ಬದಲಿಗೆ ಕನ್ನಡದಲ್ಲಿಯೇ ನಮೂದಿಸಿ ನೀಡುವಂತೆ ಔಷಧ ನಿಯಂತ್ರಕರಿಗೆ ಪತ್ರ ಬರೆಯಿರಿ. ಅದರ ಪ್ರತಿಯನ್ನು ನಮ್ಮ ಪ್ರಾಧಿಕಾರಕ್ಕೂ ಕಳುಹಿಸಿಕೊಡಿ. ಪಶುಸಂಗೋಪನಾ ಇಲಾಖೆಯ ಔಷಧಿಗಳು ಸೇರಿದಂತೆ ವಿವಿಧ ಇಲಾಖೆಗಳಡಿ ಜನರಿಗೆ ದೊರೆಯುವ ಸೌಲಭ್ಯಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.