ಕರ್ನಾಟಕ

karnataka

By

Published : Jul 6, 2021, 12:04 PM IST

ETV Bharat / state

ಬಳ್ಳಾರಿ ಪಾಲಿಕೆ ಮೇಯರ್- ಉಪಮೇಯರ್ ಆಯ್ಕೆ ವಿಳಂಬ: ಕೋರ್ಟ್ ಮೆಟ್ಟಿಲೇರಲು ಮುಂದಾದ ಕಾಂಗ್ರೆಸ್

ಕಾಂಗ್ರೆಸ್​ಗೆ ಬಹುಮತ ಬಂದಿರುವ ಹಿನ್ನೆಲೆ ರಾಜ್ಯ ಸರ್ಕಾರ ಮೇಯರ್ - ಉಪ ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಬಳ್ಳಾರಿ ಕಾಂಗ್ರೆಸ್,​ ಸರ್ಕಾರದ ಆದೇಶದ ವಿರುದ್ಧ ಕೋರ್ಟ್ ಮೊರೆ ಹೋಗಲು ಮುಂದಾಗಿದೆ.

Bellary mayor election
ಮೇಯರ್- ಉಪಮೇಯರ್ ಆಯ್ಕೆ ವಿಳಂಬ

ಬಳ್ಳಾರಿ: ಕೋವಿಡ್ ನೆಪವೊಡ್ಡಿ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಧಾರವಾಡ ಹೈಕೋರ್ಟ್ ಪೀಠದ ಮೊರೆ ಹೋಗಲು ನಿರ್ಧರಿಸಿದೆ.

ಕಳೆದ ತಿಂಗಳು ನಡೆದಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದ್ದು, ಒಟ್ಟಾರೆ 21 ಮಂದಿ ಕಾಂಗ್ರೆಸ್ ನ ಸದಸ್ಯರು ಗೆಲುವು ಸಾಧಿಸಿದ್ದಾರೆ. 5 ಮಂದಿ ಪಕ್ಷೇತರರು, 13 ಮಂದಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ.

ಸ್ಪಷ್ಟ ಬಹುಮತವಿರುವುದರಿಂದ ಈ ಬಾರಿ ಕೂಡ ಕಾಂಗ್ರೆಸ್​ ಪಾಲಿಕೆಯ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಆದರೆ, ಚುನಾವಣೆ ಫಲಿತಾಂಶ ಬಂದು ತಿಂಗಳು ಕಳೆದರೂ, ರಾಜ್ಯ ಸರ್ಕಾರ ಕೋವಿಡ್ ನೆಪವೊಡ್ಡಿ ಮೇಯರ್- ಉಪ ಮೇಯರ್ ಆಯ್ಕೆ ಪ್ರಕ್ರಿಯೆನ್ನು ಮುಂದಿನ 6 ತಿಂಗಳಿಗೆ ಮುಂದೂಡಿದೆ. ಸರ್ಕಾರದ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಆಪರೇಷನ್ ಕಮಲ ಸಾಧ್ಯನಾ..?

ರಾಜ್ಯದಲ್ಲಿ ಆಪರೇಷನ್ ಕಮಲ ಪರಂಪರೆಯನ್ನು ಹುಟ್ಟು ಹಾಕಿದ್ದೇ ಬಳ್ಳಾರಿಯ ರೆಡ್ಡಿ ಸಹೋದರರು. ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮನಸ್ಸು ಮಾಡಿದರೆ, ಪಾಲಿಕೆಯಲ್ಲಿ ಆಪರೇಷನ್ ಕಮಲ ಮಾಡಬಹುದೆಂದು ಹೇಳಲಾಗ್ತಿದೆ. ಆದರೆ, ಪಾಲಿಕೆ ಚುನಾವಣೆಯಲ್ಲಿ ಮಗನ ಸೋಲಿನಿಂದ ಬೇಸರಗೊಂಡಿರುವ ಅವರು, ತೆರೆಮರೆಯಲ್ಲಿ ಆಪರೇಷನ್ ಕಮಲದ ಕರಸತ್ತು ನಡೆಸಿ ಕೆಲ ಕಾಂಗ್ರೆಸ್​ ಸದಸ್ಯರನ್ನು ಗುಟ್ಟಾಗಿ ಸಂಪಕಿರ್ಸಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ನಗರದ ದೇಗುಲ ಒಂದರಲ್ಲಿ ಕಾಂಗ್ರೆಸ್​ನಿಂದ ಗೆದ್ದಿರುವ ಅದರಲ್ಲೂ ಮೇಯರ್​ ಸ್ಥಾನದ ಆಕಾಂಕ್ಷಿಯಾಗಿರುವ ಪಾಲಿಕೆ ಸದಸ್ಯರೋರ್ವರಿಗೆ 'ನೀನು ಮೇಯರ್​ ಆದರೆ ನಮ್ಮ ಅಭ್ಯಂತರವಿಲ್ಲ' ಎಂದು ಹೇಳಿರುವ ರೆಡ್ಡಿ ಮಾತು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಓದಿ : ಬಳ್ಳಾರಿ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ವಿಳಂಬ: ಅಭಿವೃದ್ಧಿ ಕುಂಠಿತ ಆರೋಪ

ಅಧಿಕಾರ ಹಿಡಿಯುವ ಉಮೇದಿನಲ್ಲಿ ಎರಡು ಪಕ್ಷಗಳಿವೆ. ಸಲೀಸಾಗಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ಹಠದಲ್ಲಿ ಕಾಂಗ್ರೆಸ್​ ಪಕ್ಷವಿದ್ದರೆ, ಹೇಗಾದರೂ ಮಾಡಿ ಕೈ'ನ ನಾಗಾಲೋಟಕ್ಕೆ ಬ್ರೇಕ್​ ಹಾಕಬೇಕೆಂಬ ತುಡಿತದಲ್ಲಿ ಬಿಜೆಪಿಯಿದೆ. ಹೀಗಾಗಿಯೇ ಬೇಗ ಅಧಿಕಾರ ದಕ್ಕಿಸಿಕೊಳ್ಳಬೇಕೆಂದು ಕಾಂಗ್ರೆಸ್​ ಕೋರ್ಟ್​ ಮೋರೆ ಹೋಗಲು ನಿರ್ಧರಿಸಿದೆ.

ಕೊರೊನಾ ಅಬ್ಬರ ಕಡಿಮೆಯಾದರೂ ಮೇಯರ್​ - ಉಪಮೇಯರ್​ ಆಯ್ಕೆ ಮುಂದೂಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ. ಹೀಗಾಗಿ, ಇದನ್ನು ಪ್ರಶ್ನಿಸಿ, ಧಾರವಾಡ ಹೈಕೋರ್ಟ್​ನಲ್ಲಿ ದಾವೆ ಹೂಡಲು ಪಕ್ಷದಿಂದ ಚಿಂತನೆ ನಡೆಸಲಾಗಿದೆ. ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ.ಎಸ್. ಮಹಮ್ಮದ ರಫೀಕ್ ತಿಳಿಸಿದ್ದಾರೆ.

ABOUT THE AUTHOR

...view details