ಕರ್ನಾಟಕ

karnataka

By

Published : Jan 22, 2023, 8:02 AM IST

ETV Bharat / state

ನಾಡ ಹಬ್ಬವಾಗಿ ಬಳ್ಳಾರಿ ಉತ್ಸವ ಶಾಶ್ವತ ಆಚರಣೆ: ಬಿ.ಶ್ರೀರಾಮುಲು

ಹಂಪಿ, ಕದಂಬ, ಲಕ್ಕುಂಡಿ, ಚಾಲುಕ್ಯ, ಧಾರವಾಡ ಉತ್ಸವದ ಸಾಲಿಗೆ ಬಳ್ಳಾರಿ ಉತ್ಸವವೂ ಸೇರಿದೆ. ರಾಜ್ಯ ಮಾತ್ರವಲ್ಲದೇ ದೇಶದ ಭೂಪಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಸುವರ್ಣಾಕ್ಷರದಲ್ಲಿ ಗುರುತಿಸಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

bellary utsav 2023
ಬಳ್ಳಾರಿ ಉತ್ಸವ 2023

ಬಳ್ಳಾರಿ ಉತ್ಸವ 2023

ಬಳ್ಳಾರಿ: "ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವವನ್ನು ನಾಡ ಹಬ್ಬವಾಗಿ ಶಾಶ್ವತವಾಗಿ ಆಯೋಜಿಸಲಾಗುವುದು. 1998ರಲ್ಲಿ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ‌ ಅಂದಿನ ಜಿಲ್ಲಾ ಉಸ್ತುವಾರಿ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವ ಆರಂಭಿಸಲಾಯಿತು. ಜಿಲ್ಲೆ ವಿಭಜನೆಯ ನಂತರ ಎಸ್.ಆರ್.ಬೊಮ್ಮಾಯಿ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇರುವ ಈ ಸಂದರ್ಭದಲ್ಲಿ ಬಳ್ಳಾರಿ ಉತ್ಸವವನ್ನು ಪ್ರಾರಂಭಿಸಲಾಗಿದೆ" ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರ ಮುನ್ಸಿಪಲ್ ಮೈದಾನದ‌ ರಾಘವ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಬಳ್ಳಾರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಇಂದು ಚಾಲನೆ ನೀಡಿರುವ ಉತ್ಸವದ ರಥವನ್ನು ಮುಂದಿನ ದಿನಗಳಲ್ಲಿಯೂ ಮುನ್ನಡೆಸಬೇಕು. ನಾಡಿನ ಹಂಪಿ ಕದಂಬ, ಲಕ್ಕುಂಡಿ, ಚಾಲುಕ್ಯ, ಧಾರವಾಡ ಉತ್ಸವದ ಸಾಲಿಗೆ ಬಳ್ಳಾರಿ ಉತ್ಸವವೂ ಸೇರಿದೆ. ಬಳ್ಳಾರಿ ನಗರವನ್ನು ಉಕ್ಕಿನ ನಗರ‌ ಎಂದು ಕರೆಯುತ್ತೇವೆ. ದೇವರು ಬಳ್ಳಾರಿ ಜಿಲ್ಲೆಯನ್ನು ಉಕ್ಕಿನ‌ ಜಿಲ್ಲೆಯಾಗಿ ಮಾಡಿದ್ದಾನೆ. ಹನುಮಪ್ಪ ನಾಯಕ ಉಕ್ಕಿನಂತಹ ಕೋಟೆ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಭೂಪಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಸುವರ್ಣ ಅಕ್ಷರದಲ್ಲಿ ಗುರುತಿಸಲಾಗುತ್ತಿದೆ. ಜಿಲ್ಲೆಯ ಕಲೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಬಳ್ಳಾರಿ ಉತ್ಸವ ಆಯೋಜಿಸಲಾಗಿದೆ" ಎಂದರು.

"ಶತಮಾನದ ಇತಿಹಾಸವಿರುವ ಬಳ್ಳಾರಿಯ ಕೃಷಿ ಕಾಲೇಜಿಗೆ 25 ಕೋಟಿ ರೂ. ಮಂಜೂರು ಮಾಡಲಾಗಿದೆ. ಜೀನ್ಸ್ ಉತ್ಪಾದನಾ ಉದ್ಯಮಕ್ಕೆ 50 ಎಕರೆ ಜಮೀನು ನೀಡಿ, ಟೆಕ್ಸ್​ಟೈಲ್ ಪಾರ್ಕ್ ನಿರ್ಮಿಸಲು ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2008 ರಲ್ಲಿ ಪ್ರಾರಂಭಿಸಿದ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 40 ಕೋಟಿ ನೀಡಲಾಗಿದೆ. ಶೀಘ್ರದಲ್ಲೇ ಬಳ್ಳಾರಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಾಗುವುದು. ನಗರದಲ್ಲಿ 20 ಎಕರೆ ವಿಸ್ತೀರ್ಣದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. 23 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಸಿಂಥೆಟಿಕ್ ಟ್ರಾಕ್ ನಿರ್ಮಿಸಲಾಗಿದೆ. ನಗರದಲ್ಲಿ ಹಾಕಿ ಕ್ರೀಡಾಂಗಣ ನಿರ್ಮಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.

ಶ್ರೀರಾಮುಲು ಎಂಬ ಗಾಳಿಪಟದ ಸೂತ್ರ ಬಳ್ಳಾರಿ ಜನತೆ ಕೈಯಲ್ಲಿ: "ಬಳ್ಳಾರಿ ಜನರು ನನ್ನನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಗಾಳಿಪಟದ ರೀತಿಯಲ್ಲಿ ಬಾನೆತ್ತಕ್ಕೆ ಹಾರಾಡುತ್ತಿರುವ ನನ್ನ ಸೂತ್ರ ಬಳ್ಳಾರಿ ಜನತೆಯ ಕೈಯಲ್ಲಿದೆ. ಬಳ್ಳಾರಿ ಜನ ರಾಜಕೀಯವಾಗಿ ನನಗೆ ಪುನರ್‌ಜನ್ಮ ನೀಡಿದ್ದೀರಿ. ನಾಯಕ ಜನಾಂಗದಲ್ಲಿ ಹುಟ್ಟಿದ ನಾನು ಎಲ್ಲಾ ಜನಾಂಗದ ಪ್ರೀತಿ ಅಭಿಮಾನ ಗಳಿಸಿದ್ದೇನೆ.‌ ಬಳ್ಳಾರಿ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡುತ್ತೇನೆ" ಎಂದು ಅವರು ಭಾವುಕರಾದರು.

'ಬೊಂಬೆ ಹೇಳುತೈತೆ..': ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್​ ಮಾತನಾಡಿ, ಈ ಬಳ್ಳಾರಿ ಉತ್ಸವವನ್ನು ಒಂದು ರೀತಿ ಬಳ್ಳಾರಿಯ ದಸರಾ ಆಗಿ ಆಚರಣೆ ಮಾಡಲಾಗುತ್ತಿದೆ. ಪುನೀತ್ ರಾಜ್​ಕುಮಾರ್ ಅವರನ್ನು ಅಭಿಮಾನಿಗಳು ಸ್ಟಾರ್ ಆಗಿ ನೋಡುತ್ತಿದ್ದರು. ಆದರೆ, ಈಗ ಅವರನ್ನು ಪುತ್ಥಳಿಯ ರೂಪದಲ್ಲಿ ನೋಡುವಂತಾಗಿದೆ. ಪುನೀತ್ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ಅಜರಾಮರ ಎನ್ನುತ್ತಾ, ಪುನೀತ್​ ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡನ್ನು ಹೇಳಿ ತಮ್ಮ ಮಾತಿಗೆ ವಿರಾಮ ನೀಡಿದರು. ಬಳಿಕ ಪ್ರವಾಸೋದ್ಯಮ ಇಲಾಖೆಯು ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯುಳ್ಳ ಕೈಪಿಡಿ ಬಿಡುಗಡೆ ಮಾಡಿತು.

ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್​ ರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷ ಗೌಡ, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್, ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಚಲನಚಿತ್ರ ನಿರ್ಮಾಪಕಿ ಅಶ್ವಿನ್ ಪುನೀತ್ ರಾಜಕುಮಾರ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ ಸಿಇಒ ಜಿ.ಲಿಂಗಮೂರ್ತಿ, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಹೇಮಂತ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ABOUT THE AUTHOR

...view details