ಬಳ್ಳಾರಿ : ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಫಾರಂ ನಂಬರ್ 3 ಕೊಡಲು ಅರ್ಜಿದಾರರಿಂದ ಅಂದಾಜು 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆಂಬ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದ್ದು, ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ, ರಾತ್ರೋರಾತ್ರಿ ಮಹಾನಗರ ಪಾಲಿಕೆ ಆಯುಕ್ತರ ಕಾರು ಹೊರಗಡೆ ಬರುತ್ತದೆ. ಆ ಕಾರಿನೊಳಗೆ ಮಹಿಳೆಯೊಬ್ಬರು ಹಣ ಪಡೆಯುತ್ತಾರೆ. ಹಣ ಕೊಡಲು ಬಂದ ವ್ಯಕ್ತಿ "ಸರ್ ಕೊಟ್ಟಿದ್ದು ಮೇಡಂ, ಕೊಟ್ಟು ಬಿಡಪ್ಪ ಅಂದ್ರು. ನನಗೆ ಸಮಯವಿರಲಿಲ್ಲ, ಹಾಗೆ ರಾತ್ರಿ ಬಂದೆ ಮೇಡಂ" ಎಂದು ಹೇಳುತ್ತಾರೆ. ಹಣ ಪಡೆದ ಮಹಿಳೆ "ಒಕೆ, ಧನ್ಯವಾದ" ಎಂದು ಹೇಳಿ ಹೊರಟು ಹೋಗುತ್ತಾರೆ. ವಿಡಿಯೋದಲ್ಲಿ ಹಣ ನೀಡಲು ಬಂದ ವ್ಯಕ್ತಿ ಬಳ್ಳಾರಿ ನಿವಾಸಿ ಬದ್ರಿ ಮತ್ತು ಹಣ ಪಡೆದ ಮಹಿಳೆ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ ತುಷಾರಮಣಿ ಎಂದು ಹೇಳಲಾಗ್ತಿದೆ. ವಿಡಿಯೋದಲ್ಲಿ ಇಬ್ಬರ ಮುಖವೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಇನ್ನು, ಆಯುಕ್ತೆ ಹಣ ಪಡೆದಿದ್ದರೂ, ಅದು ವೈಯುಕ್ತಿಕ ವ್ಯವಹಾರವೋ ಅಥವಾ ಲಂಚದ ಹಣವೋ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಇನ್ನು ಹಣ ನೀಡಲು ಬಂದ ಬದ್ರಿ ಎಂದು ಹೇಳಲಾಗುವ ವ್ಯಕ್ತಿ, " ಸರ್ ಹಣ ಕೊಟ್ರು ಮೇಡಂ" ಎನ್ನುತ್ತಾನೆ. ಹಾಗಾದರೆ, ಆ ಸರ್ ಯಾರೂ ಎಂಬ ಬಗ್ಗೆಯೂ ಕುತೂಹಲ ಮೂಡಿದೆ.
ಇದನ್ನೂ ಓದಿ: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳ್ಳಾರಿ ಪಾಲಿಕೆ ಆಯುಕ್ತರ ಆಪ್ತ ಸಹಾಯಕ