ಬಳ್ಳಾರಿ: ಎಂಟು ವರ್ಷಗಳಲ್ಲಿ (2012-2020) ಬಳ್ಳಾರಿ, ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲಿ 120 ನವಜಾತ ಹೆಣ್ಣು ಶಿಶುಗಳನ್ನು ರಕ್ಷಿಸಲಾಗಿದೆ. ವಿಪರ್ಯಾಸ ಎಂದರೆ ಎಲ್ಲಿಯೂ ಒಂದೂ ಪ್ರಕರಣ ದಾಖಲಾಗದಿರುವುದು.
ಸುಮೋಟೋ ಕೇಸ್ ದಾಖಲಿಸಬೇಕಿದ್ದ ಪೊಲೀಸ್ ಇಲಾಖೆ ಮೌನವಹಿಸಿದೆ. ಆಗ ತಾನೇ ಜನಿಸಿದ ನವಜಾತ ಶಿಶುವನ್ನು ತ್ಯಜಿಸಿರುವ ಅದೆಷ್ಟೋ ಪೋಷಕರಿಗೆ ಕನಿಷ್ಠ ಶಿಕ್ಷೆಯನ್ನೂ ಕೊಡಿಸದೇ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಗಣಿನಾಡಿನಲ್ಲಿ ಎದ್ದು ಕಾಣುತ್ತಿದೆ.
ಅಂದಾಜು 185 ನವಜಾತ ಶಿಶುಗಳ ರಕ್ಷಣೆ ಮಾಡಲಾಗಿದೆ. ಆ ಪೈಕಿ ಹೆಣ್ಣು ನವಜಾತ ಶಿಶುಗಳೇ (120) ಹೆಚ್ಚು. ನವಜಾತ ಹೆಣ್ಣು ಶಿಶುಗಳನ್ನು ತಮಗೆ ಬೇಡವಾದರೆ ಎಲ್ಲೆಂದರಲ್ಲಿ ಬಿಸಾಡುವುದು ಅಪರಾಧ ಎಂದು ತಿಳಿದಿದ್ದರೂ ಪೋಷಕರು ಮತ್ತದೇ ಕೆಲಸಗಳನ್ನು ಮುಂದುವರೆಸಿದ್ದಾರೆ.
ಕೆಲವರು ಹೆರಿಗೆಯಾದ ಆಸ್ಪತ್ರೆಗಳಲ್ಲೇ ರಾತ್ರೋರಾತ್ರಿ ಶಿಶುವನ್ನು ಬಿಟ್ಟು ಪರಾರಿಯಾಗಿದ್ದರೆ, ಇನ್ನೂ ಹಲವರು ತೋಟದ ಮನೆ, ಪೊದೆ, ರಸ್ತೆ ಬದಿಗಳಲ್ಲಿ ಬಿಸಾಡುತ್ತಿದ್ದಾರೆ. ಆದರೆ, ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೂ ಕಣ್ಣಾರೆ ನೋಡಿಯೂ ನೋಡದ ರೀತಿ ಪೊಲೀಸರು ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅಂತಹ ಶಿಶುಗಳನ್ನು ರಕ್ಷಿಸುವುದು ನಮ್ಮ ಕೆಲಸವಲ್ಲ. ಅದೇನಿದ್ದರೂ ಮಕ್ಕಳ ರಕ್ಷಣಾ ಘಟಕದ್ದು ಎಂದು ಹೇಳಿ ಕೈತೊಳೆದುಕೊಳ್ಳುತ್ತಿದೆ ಜಿಲ್ಲಾ ಪೊಲೀಸ್ ಇಲಾಖೆ. ಹೀಗಾಗಿ, ಪ್ರಕರಣ ದಾಖಲಿಸುವಲ್ಲಿ ಶೂನ್ಯ ಸಾಧನೆಗೆ ಸೇರಿದೆ.
ನವಜಾತ ಶಿಶುಗಳ ರಕ್ಷಣೆ ಕುರಿತ ಅಭಿಪ್ರಾಯ ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೈಯದ್ ಚಾಂದ್ ಬಾಷಾ ಅವರು, ಬಹುತೇಕ ನವಜಾತ ಶಿಶುಗಳಲ್ಲಿ ಹೆಣ್ಣು ಶಿಶುಗಳ ರಕ್ಷಣೆಯೇ ಹೆಚ್ಚು. 185ರ ಪೈಕಿ 140 ನವಜಾತ ಶಿಶುಗಳನ್ನು ಅವರ ಅವಲಂಬಿತರಿಗೆ ಹಸ್ತಾಂತರಿಸಲಾಗಿದೆ. ಉಳಿದ ಶಿಶುಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿಶುಗೃಹದಲ್ಲಿಟ್ಟು ಪೋಷಿಸಲಾಗುತ್ತಿದೆ ಎಂದರು.
ವಕೀಲೆ ವಿಜಯಲಕ್ಷ್ಮಿ ಮಾದೂರು ಮಾತನಾಡಿ, ಈವರೆಗೂ ನವಜಾತ ಶಿಶುಗಳ ಹತ್ಯೆ ಪ್ರಕರಣ ನಡೆದಿಲ್ಲ. ಅಂತಹ ವಿಶೇಷ ಪ್ರಕರಣಗಳನ್ನು ಪತ್ತೆಹಚ್ಚುವ ಸಲುವಾಗಿಯೇ ಎಸ್ಜೆಪಿ ಪೊಲೀಸ್ ಪೋರ್ಸ್ ಇದೆ. ಅದನ್ನು ಸದ್ಬಳಕೆ ಮಾಡಿಕೊಂಡು ಪ್ರಕರಣ ಬೇಧಿಸಲಾಗುವುದು ಎಂದರು.