ಕರ್ನಾಟಕ

karnataka

ETV Bharat / state

ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ವಿಡಿಯೋ, ಫೋಟೋ ಪ್ರಸಾರ ಮಾಡದಂತೆ ಮಾಧ್ಯಮಕ್ಕೆ ಹೈಕೋರ್ಟ್​ ತಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್​, ಸಂತ್ರಸ್ತೆಯ ವಿಡಿಯೋ ಹಾಗೂ ಫೋಟೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ.

By ETV Bharat Karnataka Team

Published : Dec 12, 2023, 8:18 PM IST

Women assault case High Court restrains media from broadcasting videos photo
ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ವಿಡಿಯೋ, ಫೋಟೋ ಪ್ರಸಾರ ಮಾಡದಂತೆ ಮಾಧ್ಯಮಕ್ಕೆ ಹೈಕೋರ್ಟ್​ ತಡೆ

ಬೆಂಗಳೂರು: ಪುತ್ರ ಯುವತಿಯೊಂದಿಗೆ ಓಡಿ ಹೋದ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿರುವ ಸಂಬಂಧ ಸಂತ್ರಸ್ತೆಯ ಗುರುತು ಪತ್ತೆಯಾಗುವಂತೆ ವರದಿ ಮಾಡಿದ ಮಾಧ್ಯಮಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇಡೀ ಪ್ರಕರಣವನ್ನು ಸ್ವಯಂಪ್ರೇರಿತ ಅರ್ಜಿಯನ್ನಾಗಿ ದಾಖಲಿಸಿಕೊಂಡಿದೆ.

ಭಾನುವಾರ ಬೆಳಗಾವಿ ತಾಲೂಕಿನಲ್ಲಿ ನಡೆದಿದ್ದ ಘಟನೆ ಸಂಬಂಧ ಮಾಧ್ಯಮಗಳ ವರದಿಯನ್ನು ಗಮನಿಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್​ ಕಮಲ್​ ಅವರಿದ್ದ ವಿಭಾಗೀಯ ಪೀಠ, ಈ ವರದಿಯ ಶೀರ್ಷಿಕೆಗಳು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದೆ. ಅಷ್ಟೇ ಅಲ್ಲದೆ, ಮನಸ್ಸಿಗೆ ದುಃಖ ಹಾಗೂ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

ವಿಡಿಯೋ, ಫೋಟೋ ಪ್ರಸಾರ ಮಾಡದಂತೆ ತಡೆ: ಸಚಿವರೊಬ್ಬರು ಸಂತ್ರಸ್ತೆಯನ್ನು ಭೇಟಿಯಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಛಾಯಾಚಿತ್ರದಲ್ಲಿ ಸಂತ್ರಸ್ತೆಯ ಮುಖವನ್ನು ಗುರುತು ಸಿಗುವಂತೆ ವಿಡಿಯೋ ಮಾಡಿರುವುದು ಗೊತ್ತಾಗಿದೆ. ಇದು ಮಾಧ್ಯಮದವರು ಅತ್ಯಂತ ಬೇಜವಾಬ್ದಾರಿ ಮತ್ತು ಸಂವೇದನಾರಹಿತವಾಗಿ ವರ್ತಿಸಿರುವುದು ತಿಳಿದಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಅಲ್ಲದೆ, ಸಂತ್ರಸ್ತೆಯ ಗುರುತು ಸಿಗುವಂತೆ ಯಾವುದೇ ಮಾಧ್ಯಮ ಸಂಸ್ಥೆ ಚಿತ್ರಿಸಿರುವ ಯಾವುದೇ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಸಾರ ಮಾಡದಂತೆ ನಿರ್ದೇಶನ ನೀಡಿದೆ. ಜೊತೆಗೆ, ಈಗಾಗಲೇ ಪ್ರದರ್ಶನ ಮಾಡಿದ್ದರೆ ಅದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.

ಈ ಮಧ್ಯಂತರ ನಿರ್ದೇಶನ ಸಂತ್ರಸ್ಥೆ ತನ್ನ ಘನತೆ ಕಾಪಾಡಿಕೊಳ್ಳಲು ಮತ್ತು ಆಕೆಯ ಗುರುತನ್ನು ಬಹಿರಂಗಪಡಿಸದಿರುವುದಕ್ಕೆ ಮಾತ್ರವೇ ವಿನಃ ಪತ್ರಿಕಾ ಸ್ವಾತಂತ್ರ್ಯದ ಪರಿಕಲ್ಪನೆಯ ನಿಯಂತ್ರಣ ಎಂದಾಗುವುದಿಲ್ಲ, ಯಾವುದೇ ಸುದ್ದಿ ಪ್ರಸಾರವನ್ನು ನಿಷೇಧಿಸಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್​ ಜನರಲ್​ ಶಶಿ ಕಿರಣ್​ ಶೆಟ್ಟಿ, ಘಟನೆ ಸಂಬಂಧ ಯಾವುದೇ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಕ್ರಮ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಭಾರತ ದೇಶ 76ನೇ ವರ್ಷದ ಸ್ವಾತಂತ್ರ್ಯವನ್ನು 'ಆಜಾದಿ ಕಾ ಅಮೃತೋತ್ಸವ' ಎಂದು ಆಚರಿಸುತ್ತಿದೆ. ಮತ್ತೊಂದೆಡೆ ರಾಜ್ಯ ಪ್ರಗತಿ ಪಥದಲ್ಲಿ ಸಾಗುತ್ತಿರುವುದಕ್ಕೆ ಹೆಸರು ವಾಸಿಯಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯಗಳು ತಲೆ ತಗ್ಗಿಸುವಂತೆ ಮಾಡಿದೆ ಎಂದು ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.

ಇದನ್ನೂ ಓದಿ :ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಪ್ರೇಮಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತೆ.. ಡಾ ಜಿ ಪರಮೇಶ್ವರ್ ಅಭಯ

ABOUT THE AUTHOR

...view details