ಚಿಕ್ಕೋಡಿ:ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರವೇ. ಬಿಜೆಪಿ ಪಕ್ಷವು ಇದಕ್ಕೆ ಒಂದು ಹೆಜ್ಜೆ ಮುಂದೆ ಎಂಬಂತೆ ರಾಷ್ಟ್ರೀಯ ನಾಯಕರನ್ನು ಕರೆತಂದು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇವತ್ತು ಬೆಳಗಾವಿಯಲ್ಲಿ ಜರುಗುವ ಜನಸಂಕಲ್ಪ ಯಾತ್ರೆಗಿಂತಲೂ ಕುಂದಾನಗರಿ ಬಿಜೆಪಿ ನಾಯಕರ ಜೊತೆಗೆ ಅಮಿತ್ ಶಾ ಹಂತ ಹಂತವಾಗಿ ನಡೆಯುತ್ತಿರುವ ಸಭೆಗಳು ಭಾರಿ ಕುತೂಹಲ ಕೆರಳಿಸಿವೆ.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲಿ ಆಂತರಿಕ ಕಲಹದಿಂದಲೇ ಪಕ್ಷ ಹಲವು ಪರಿಣಾಮಗಳು ಉಂಟಾಗಿವೆ. ಕಳೆದ ವಿಧಾನ ಪರಿಷತ್ ಹಾಗೂ ವಾಯುವ್ಯ ಮತಕ್ಷೇತ್ರದ ಶಿಕ್ಷಕರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ, ಸದ್ಯ ಬಿಜೆಪಿಯ ಬುಡವನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಅಲುಗಾಡಿಸಿದೆ. ಇದರಿಂದ ಕೇಂದ್ರ ವರಿಷ್ಠರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯ ಬಿಜೆಪಿ ನಾಯಕರ ಕಲಹ:ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಸ್ಥಳೀಯ ನಾಯಕರ ವೈಮನಸ್ಸೇ ಪ್ರಮುಖ ಕಾರಣವಾಗಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ್ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈ ಪ್ರಮುಖ ಎರಡು ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿಗೆ ಭಾರಿ ಮುಖಭಂಗ ಎದುರಾಗಿತ್ತು. ಈ ಎರಡು ಸ್ಥಾನಗಳು ಕೈತಪ್ಪಲು ಸ್ಥಳೀಯ ಬಿಜೆಪಿ ನಾಯಕರ ಕಲಹ ಎಂಬುದು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಸದ್ಯ ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ವರಿಷ್ಠರು ಶತಾಯಗತಾಯವಾಗಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಳ ಮಟ್ಟದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ.
ಅಮಿತ್ ಶಾ ಬಿಜೆಪಿ ನಾಯಕರ ಜೊತೆ ಸಭೆ:ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಪಕ್ಷದಿಂದ ಜನ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ. ಜನ ಸಂಕಲ್ಪ ಯಾತ್ರೆಗಿಂತಲೂ ಕುಂದಾನಗರಿ ನಾಯಕರ ಜೊತೆ ನಡೆಯಲಿರುವ ಒನ್ ಟು ಒನ್ ಸಭೆ ಕುತೂಹಲ ತೀವ್ರ ಮೂಡಿಸಿದೆ. ಬೆಳಗಾವಿ ನಾಯಕರು ಆಂತರಿಕ ಕಲಹ ಶಮನ ಮಾಡುತ್ತಾರಾ ಶಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಬೆಳಗಾವಿಯಲ್ಲಿ ಕುಟುಂಬ ರಾಜಕಾರಣ ಪ್ರತಿಷ್ಠಿತ ಕದನವಾಗಿದೆ. ಸದ್ಯ ಆಪರೇಷನ್ ಕಮಲದಿಂದ ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರುತ್ತಿದ್ದಂತೆ. ಬಿಜೆಪಿಯ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನದಿಂದ ಬೆಳಗಾವಿಯ ಕೆಲವು ಚುನಾವಣೆಯಲ್ಲಿ ಮುಗ್ಗರಿಸಿತ್ತು. ಸದ್ಯ ಬೆಳಗಾವಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ವರಿಷ್ಠ ಅಮಿತ್ ಶಾ ಪ್ರತಿಯೊಬ್ಬ ನಾಯಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.