ಬೆಳಗಾವಿ:ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ರಾಮದುರ್ಗ ತಾಲೂಕಿನ ಕಿಲಬನೂರು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೈ ಸೇರದ ಕಳೆದ ವರ್ಷದ ನೆರೆ ಪರಿಹಾರ: ಶಾಸಕರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು
ಕಳೆದ ಬಾರಿಯ ನೆರೆ ಪರಿಹಾರವೇ ಬಿಡುಗಡೆಯಾಗಿಲ್ಲ. ಕೂಡಲೇ ಪರಿಹಾರ ನೀಡಿ. ಈಗಲೂ ಪ್ರವಾಹ ಬರುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರಿಗೆ ಕಿಲಬನೂರು ಗ್ರಾಮಸ್ಥರು ಒತ್ತಾಯಿಸಿದರು.
ಮಲಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಳೆದ ಬಾರಿ ಭೀಕರ ಜಲಪ್ರಳಯದಲ್ಲಿ ಅಪಾರ ಆಸ್ತಿ ಪಾಸ್ತಿ ನಷ್ಟ, ಬೆಳೆ ಹಾನಿಯಾಗಿತ್ತು. ಇಲ್ಲಿನ ಜನರಿಗೆ ಕಳೆದ ಬಾರಿಯ ನೆರೆ ಪರಿಹಾರ ಈವರೆಗೂ ಬಿಡುಗಡೆಯಾಗಿಲ್ಲ.
ನಿಮ್ಮೆಲ್ಲಾ ಟೊಳ್ಳು ಭರವಸೆಗಳು ಬೇಡ. ಕೂಡಲೇ ಪರಿಹಾರ ಬಿಡುಗಡೆ ಮಾಡಿಸಿ. ಈಗಲೂ ನಮಗೆ ಪ್ರವಾಹ ಭೀತಿ ಇದೆ. ಸುಮ್ಮನೆ ಇಲ್ಲಿಗೆ ಬಂದು ನೋಡಿಕೊಂಡು ಹೋಗುತ್ತೀರಾ. ಆದರೆ ಕೊಟ್ಟ ಭರವಸೆಗಳು ಮಾತ್ರ ಮಾತಿನಲ್ಲೇ ಉಳಿದಿವೆ ಎಂದು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರನ್ನು ಸಮಾಧಾನಪಡಿಸಲು ಶಾಸಕರು ಹೈರಾಣಾದರು.