ಕರ್ನಾಟಕ

karnataka

By

Published : Nov 3, 2020, 12:56 PM IST

Updated : Nov 3, 2020, 2:07 PM IST

ETV Bharat / state

ಕುಂದಾನಗರಿಯಲ್ಲೀಗ ‘ಸಹೋದರರ ಸವಾಲ್​’.. ಡಿಸಿಸಿ ಬ್ಯಾಂಕ್ ಚುಕ್ಕಾಣಿಗೆ ತಂತ್ರ-ಪ್ರತಿತಂತ್ರ

ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರ ವಿರುದ್ಧ ಎಂಇಎಸ್‍ನ ಮಾಜಿ ಶಾಸಕ ಅರವಿಂದ ಪಾಟೀಲ ಕಣದಲ್ಲಿದ್ದಾರೆ. ಅರವಿಂದ ಪಾಟೀಲ ಬೆನ್ನಿಗೆ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ಉಮೇಶ ಕತ್ತಿ ನಿಂತಿದ್ದಾರೆ..

tough-fight-in-dcc-bank-election-field-at-belagavi
ಡಿಸಿಸಿ ಬ್ಯಾಂಕ್ ಚುಕ್ಕಾಣಿಗೆ ತಂತ್ರ-ಪ್ರತಿತಂತ್ರ

ಬೆಳಗಾವಿ: ಜಿಲ್ಲೆಯ ಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿಯಲು ಘಟಾನುಘಟಿ ನಾಯಕರು ಒಂದೇ ಪಕ್ಷದಲ್ಲಿದ್ದೇವೆ ಎಂಬುವುದನ್ನು ಮರೆತು ಜಿದ್ದಾಜಿದ್ದಿಯಲ್ಲಿ ತೊಡಗುತ್ತಿದ್ದರು. ನಿಮ್ಮ ಪ್ರತಿಷ್ಠೆಯಿಂದ ಪಕ್ಷಕ್ಕೆ ಮುಜುಗರ ತರಬೇಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಅವಿರೋಧವಾಗಿ ಮಾಡುವಂತೆ ಬಿಜೆಪಿ ವರಿಷ್ಠರ ಖಡಕ್ ಸೂಚನೆ ಹಿನ್ನೆಲೆ ಹಾವು-ಮುಂಗುಸಿಯಂತಿದ್ದ ಜಿಲ್ಲೆಯ ಕಮಲ ನಾಯಕರು ಒಂದಾಗಿದ್ದಾರೆ.

ಈ ನಡುವೆ ಡಿಸಿಸಿ ಬ್ಯಾಂಕ್‍ನ ಎಲ್ಲ 16 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿ ಶಾಕ್ ಕೊಟ್ಟಿದ್ದಾರೆ. ಮೂರು ದಿನಗಳ ಕಾಲ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಉಮೇಶ ಕತ್ತಿ, ಬ್ಯಾಂಕ್‍ನ ಹಾಲಿ ಅಧ್ಯಕ್ಷ ರಮೇಶ ಕತ್ತಿ ಅವಿರೋಧ ಆಯ್ಕೆಗೆ ಶ್ರಮಿಸಿದ್ದರು.

ವರಿಷ್ಠರ ಸೂಚನೆ ಅಚ್ಚುಕಟ್ಟಾಗಿ ಪಾಲಿಸಿ ಭೇಷ್ ಎನಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದ ಕಮಲ ನಾಯಕರಿಗೆ ನಿರಾಸೆಯಾಗಿದೆ. ಬ್ಯಾಂಕ್ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲು ಒಂದಾಗಿದ್ದ ಬಿಜೆಪಿ ನಾಯಕರ ಯತ್ನಕ್ಕೆ ಫಲ ಸಿಗಲಿಲ್ಲ.

16 ಸ್ಥಾನಗಳ ಪೈಕಿ 13 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದ್ರೆ, ಉಳಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಕೃಷ್ಣಾ ಅನಗೋಳ್ಕರ್ ಹಾಗೂ ಭೀಮಪ್ಪ ಬೆಳವಣಕಿ ನಾಮಪತ್ರ ಹಿಂಪಡೆಯಲು ನಿರಾಕರಿಸಿರುವ ಕಾರಣಕ್ಕೆ ಮೂರು ಸ್ಥಾನಗಳಿಗೆ ನವೆಂಬರ್ 6ಕ್ಕೆ ಚುನಾವಣೆ ನಡೆಯಲಿದೆ.

ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರ ವಿರುದ್ಧ ಎಂಇಎಸ್‍ನ ಮಾಜಿ ಶಾಸಕ ಅರವಿಂದ ಪಾಟೀಲ ಕಣದಲ್ಲಿದ್ದಾರೆ. ಅರವಿಂದ ಪಾಟೀಲ ಬೆನ್ನಿಗೆ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ಉಮೇಶ ಕತ್ತಿ ನಿಂತಿದ್ದಾರೆ.

ಮತ್ತೊಂದೆಡೆ ಶಾಸಕಿ ಅಂಜಲಿ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ನಿಂತಿದ್ದಾರೆ. ರಾಮದುರ್ಗ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕಮಲ ನಾಯಕರ ಬಣದಿಂದ ಶ್ರೀಕಾಂತ್ ಢವಣ್ ಹಾಗೂ ಸತೀಶ್ ಬಣದಿಂದ ಭೀಮಪ್ಪ ಬೆಳವಣಕಿ ಹಾಗೂ ನೇಕಾರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಸತೀಶ ಆಪ್ತ ಕೃಷ್ಣಾ ಅನಗೋಳ್ಕರ್ ಹಾಗೂ ಕತ್ತಿ ಸಹೋದರರ ಆಪ್ತ ಗಜಾನನ ಮಂಗಸೂಳಿ ಎದುರಾಳಿ ಆಗಲಿದ್ದಾರೆ.

ಖಾನಾಪುರ ಹೈವೋಲ್ಟೇಜ್!

ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಪತ್ನಿ ಹಾಗೂ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸ್ಪರ್ಧೆಯಿಂದ ಖಾನಾಪುರ ಕ್ಷೇತ್ರದ ಕಣ ರಂಗೇರಿದೆ. ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರಲಿದ್ದಾರೆ ಎಂದು ನಿನ್ನೆಯಷ್ಟೇ ಹೊಸಬಾಂಬ್ ಸಿಡಿಸಿದ್ದ ಸಚಿವ ಜಾರಕಿಹೊಳಿ, ಇದೀಗ ಅರವಿಂದ ಪಾಟೀಲ್ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಇತ್ತ ಅಂಜಲಿ ಬೆನ್ನಿಗೆ ನಿಂತಿರುವ ಸತೀಶ್​ ಜಾರಕಿಹೊಳಿ ಕೂಡ ಗೆಲುವಿಗೆ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂಜಲಿ ವಿರುದ್ಧ ಸೋತಿದ್ದ ಅರವಿಂದ ಪಾಟೀಲ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಉಳಿದ ಎರಡು ಕ್ಷೇತ್ರಗಳು ಅಷ್ಟೇನೂ ಜಿದ್ದಾಜಿದ್ದಿನಿಂದ ಕೂಡಿಲ್ಲ.

ಇತ್ತ ಕಳೆದ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಲಕ್ಷ್ಮಣ ಸವದಿ ಮಾಡಿದ್ದ ಪ್ರಯತ್ನಕ್ಕೆ ಫಲಸಿಕ್ಕಿರಲಿಲ್ಲ. ಆಗ ಸವದಿ ಬೆನ್ನಿಗೆ ಸಚಿವೆ ಶಶಿಕಲಾ ಜೊಲ್ಲೆ, ಮಹಾಂತೇಶ ಕವಟಗಿಮಠ, ಅಣ್ಣಾಸಾಬ್ ಜೊಲ್ಲೆ, ಪ್ರಭಾಕರ ಕೋರೆ ನಿಂತಿದ್ದರು. ಆದರೆ ಜಾರಕಿಹೊಳಿ ಸಹೋದರರ ಬೆಂಬಲದಿಂದ ಮಾಜಿ ಸಂಸದ ರಮೇಶ್​ ಕತ್ತಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿದಿದ್ದರು.

ಕಳೆದ 5 ವರ್ಷಗಳಿಂದ ಉಭಯ ಬಣಗಳ ಮಧ್ಯೆ ಶೀತಲ ಸಮರ ಮುಂದುವರೆದಿತ್ತು. ವರಿಷ್ಠರು ಹಾಗೂ ಆರ್​​​ಎಸ್‍ಎಸ್ ನಾಯಕರ ಮಧ್ಯಸ್ಥಿಕೆ ವಹಿಸದಿದ್ದರೆ ಈ ಸಲವೂ ಸಾಕಷ್ಟು ಜಿದ್ದಾಜಿದ್ದಿಗೆ ಈ ಬ್ಯಾಂಕ್ ಚುನಾವಣೆ ಕಾರಣವಾಗುತ್ತಿತ್ತು. ಆದರೆ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಅಂದು ಎದುರಾಳಿ ಆಗಿದ್ದವರು ಇಂದು ಒಂದಾಗಿದ್ದಾರೆ.

Last Updated : Nov 3, 2020, 2:07 PM IST

ABOUT THE AUTHOR

...view details