ಬೆಳಗಾವಿ: ಹೊಲಕ್ಕೆ ತೆರಳುತ್ತಿದ್ದಾಗ ಅಪರಿಚಿತ ವಾಹನ ಹರಿದು ಮೂವರು ರೈತರು ಮೃತಪಟ್ಟು, ಓರ್ವ ಗಾಯಗೊಂಡ ದುರ್ಘಟನೆ ಖಾನಾಪುರ ತಾಲೂಕಿನ ಗೋಧೋಳಿ ಗ್ರಾಮದ ಹೊರವಲಯದ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಅಸುನೀಗಿದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಗೋಧೋಳಿ ಗ್ರಾಮದ ಮಹಾಬಲೇಶ್ವರ ಶಿಂಧೆ (65), ಪುಂಡಲೀಕ ರೇಡೇಕರ (72) ಸ್ಥಳದಲ್ಲೇ ಮೃತರು. ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ರೇಡೇಕರ (74) ಕೂಡ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಗಾಯಾಳು ಮಂಜುನಾಥ ಕಾಗಿನಕರ (47) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ಬಳಿಕ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ನಂದಗಡ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.