ಬೆಳಗಾವಿ :ಕೋವಿಡ್ -19 ಹಿನ್ನೆಲೆ ಜನರ ಒಮ್ಮತದ ಅಭಿಪ್ರಾಯದಂತೆ ಇದೇ ಅಕ್ಟೋಬರ್ 23ರಂದು ಒಂದು ದಿನ ಮಾತ್ರ ಸಂಪ್ರದಾಯ ಬದ್ಧವಾಗಿ ಸರಳ ರೀತಿ ಕಿತ್ತೂರು ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ತಿಳಿಸಿದ್ದಾರೆ.
ಒಂದೇ ದಿನ ಸರಳ ಮತ್ತು ಸಾಂಪ್ರದಾಯಿಕ ಕಿತ್ತೂರು ಉತ್ಸವ.. ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ಚೆನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚೆನ್ನಮ್ಮ ಸ್ವಾಭಿಮಾನದ ಸಂಕೇತ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಜೀವ ರಕ್ಷಣೆ ಮುಖ್ಯವಾಗಿದೆ. ಆದ್ದರಿಂದ ಈ ಬಾರಿ ಮೂರು ದಿನಗಳ ಅದ್ದೂರಿ ಉತ್ಸವದ ಬದಲಾಗಿ ಸಂಪ್ರದಾಯದಂತೆ ಜ್ಯೋತಿಯಾತ್ರೆ, ವಿಜಯದ ಸಂಕೇತವಾದ ದೀಪೋತ್ಸವ; ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರಳ ರೀತಿ ಒಂದು ದಿನ ಮಾತ್ರ ಉತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.
ಒಂದೇ ದಿನ ಸರಳ ಮತ್ತು ಸಾಂಪ್ರದಾಯಿಕ ಕಿತ್ತೂರು ಉತ್ಸವ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸರಳ ರೀತಿ ಆಚರಣೆಗೆ ಸಲಹೆ ನೀಡುವ ಮೂಲಕ ಎಲ್ಲರೂ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಕೊರೊನಾದಿಂದ ಮುಕ್ತರಾಗುವ ಕಡೆಗೆ ನಾವು ಹೆಜ್ಜೆ ಇಟ್ಟಿದ್ದೇವೆ. ಇಂತಹ ಸಂದರ್ಭದಲ್ಲಿ ಉತ್ಸವವನ್ನು ಸರಳವಾಗಿ ಆಚರಿಸುವುದು ಸೂಕ್ತವಾಗಿದೆ.
ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡಗೌಡ್ರ, ಕಳೆದ 24 ವರ್ಷಗಳಿಂದ ಕಿತ್ತೂರು ಉತ್ಸವವನ್ನು ಅಭಿಮಾನದಿಂದ ಅದ್ದೂರಿಯಾಗಿ ಆಚರಿಸುತ್ತ ಬರಲಾಗಿದೆ. ಆದರೆ, ಜಗತ್ತಿಗೆ ಎದುರಾಗಿರುವ ಮಹಾಮಾರಿಯಿಂದ ಸಮಾಜವನ್ನು ರಕ್ಷಿಸಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕಿತ್ತೂರು ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸೋಣ ಎಂದು ತಿಳಿಸಿದರು.
ಕಳೆದ ಬಾರಿ ಪ್ರವಾಹದ ಮಧ್ಯೆಯೂ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ, ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಸೇರಿ ಅನೇಕ ಮಹನೀಯರನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಉತ್ಸವವನ್ನು ಆಡಂಬರದ ಬದಲು ಸಂಪ್ರದಾಯದ ಪ್ರಕಾರ ಆಚರಿಸೋಣ ಎಂದರು. ಸಾರ್ವಜನಿಕರ ಅಭಿಪ್ರಾಯದಂತೆ ಜ್ಯೋತಿಯಾತ್ರೆ, ಅನ್ನಪ್ರಸಾದ, ಕೋಟೆಯಲ್ಲಿ ದೀಪೋತ್ಸವ ಆಯೋಜಿಸಿ ಒಂದು ದಿನದ ಕಿತ್ತೂರು ಉತ್ಸವ ಆಚರಿಸಲಾಗುವುದು ಎಂದರು.
ಮುಂದಿನ ವರ್ಷ ವಿಜೃಂಭಣೆಯ ಆಚರಣೆ : ಶಾಸಕ ದೊಡಗೌಡ್ರ
ಮುಂದಿನ ವರ್ಷ ನಡೆಯಲಿರುವ 25ನೇ ಉತ್ಸವದ ಬೆಳ್ಳಿಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಬಾರಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸರಳ ಉತ್ಸವ ಒಂದೇ ದಿನ ಆಚರಿಸೋಣ. ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಮಹಾಂತೇಶ ದೊಡಗೌಡ್ರ ಮನವಿ ಮಾಡಿದರು.
ಕಲ್ಮಠದ ಮಡಿವಾಳ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ತೀರ್ಮಾನದಂತೆ ಸರಳ ರೀತಿ ಈ ಬಾರಿ ಉತ್ಸವ ಆಚರಿಸಬೇಕು. ಜ್ಯೋತಿಯಾತ್ರೆ, ಧ್ವಜಾರೋಹಣ ಮತ್ತಿತರ ಸಾಂಪ್ರದಾಯಿಕ ರೀತಿ ಉತ್ಸವ ನಡೆಸಬೇಕು ಎಂದು ಶ್ರೀಗಳು ತಿಳಿಸಿದರು.