ಕರ್ನಾಟಕ

karnataka

By

Published : Dec 26, 2022, 6:15 PM IST

ETV Bharat / state

ಬಡವರಿಗೆ ವಸತಿ ಸೌಲಭ್ಯ: ಸಹಾಯಧನ ಹೆಚ್ಚಳ- ಸಚಿವ ವಿ.ಸೋಮಣ್ಣ

ರಾಜ್ಯದಲ್ಲಿ ಬಡವರಿಗೆ ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನವನ್ನು ಸರ್ಕಾರ ಹೆಚ್ಚಿಸಲಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಭರವಸೆ ನೀಡಿದರು. ಮನೆ ನಿರ್ಮಾಣಕ್ಕೆ ನೀಡುವ ಹಣ ಸಾಲುತ್ತಿಲ್ಲ. ಇದರಿಂದಾಗಿ ಕಡುಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಹಾಯಧನ ಹೆಚ್ಚಿಸಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು.

subsidy-will-be-increased-for-construction-of-houses-for-poor-says-minister-v-somanna
ಬಡವರಿಗೆ ವಸತಿ ಸೌಲಭ್ಯ.. ಸಹಾಯಧನ ಹೆಚ್ಚಳ : ಸಚಿವ ವಿ.ಸೋಮಣ್ಣ

ಬೆಳಗಾವಿ :ರಾಜ್ಯದಲ್ಲಿ ಬಡವರಿಗೆ ನಿರ್ಮಾಣ ಮಾಡುವ ಮನೆಗಳಿಗೆ ನೀಡುವ ಸಹಾಯಧನವನ್ನು ಗ್ರಾಮೀಣ ಪ್ರದೇಶದಲ್ಲಿ 3 ಲಕ್ಷ ರೂ. ಹಾಗೂ ನಗರ ಪ್ರದೇಶಗಳಲ್ಲಿ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರ ವೇಳೆ ಕೆ.ಜೆ. ಬೋಪಯ್ಯ ಅವರ ಪ್ರಶ್ನೆಗೆ ಉತ್ತರಿಸಿ ಸಚಿವರು, ಕಡು ಬಡವರಿಗೆ ನಿರ್ಮಾಣ ಮಾಡುವ ಮನೆಗಳಿಗೆ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಹಾಗಾಗಿ, ಸಹಾಯಧನವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಕಡು ಬಡವರಿಗೆ 1.20 ಲಕ್ಷ ರೂ. ಹಣವನ್ನು ನೀಡಲಾಗುತಿತ್ತು. ಇದರಿಂದ ಮನೆ ನಿರ್ಮಾಣ ಸಾಧ್ಯವಾಗದೇ ಅರ್ಧಕ್ಕೆ ನಿಂತು ಹೋಗುವ ಪರಿಸ್ಥಿತಿ ಉಂಟಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸಹಾಯಧನವನ್ನು ಹೆಚ್ಚಿಸಲಾಗುವುದು. ರಾಜ್ಯದಲ್ಲಿ 5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ, ಸಹಾಯಧನ ಹೆಚ್ಚಳದಿಂದ 5 ಲಕ್ಷ ಮನೆಗಳನ್ನು 3 ಲಕ್ಷಕ್ಕೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಡು ಬಡವರಿಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಲಾಗಿದೆ. ನಾನಾ ವಸತಿ ಯೋಜನೆಯಡಿ ಮನೆ ನಿರ್ಮಾಣ ಯೋಜನೆಯನ್ನು ಇಬ್ಬರೂ ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ 2019-20 ರಿಂದ ಇಲ್ಲಿಯವರಿಗೆ ನಾನಾ ವಸತಿ ಯೋಜನೆಯಡಿ 2852 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ 81 ಮನೆಗಳು ಪೂರ್ಣಗೊಂಡಿವೆ. 1008 ಮನೆಗಳು ಹಲವು ಹಂತದ ಕಾಮಗಾರಿಯಲ್ಲಿವೆ ಎಂದು ಹೇಳಿದರು.

ಮನೆ ನಿರ್ಮಾಣಕ್ಕೆ ನೀಡಲಾಗುವ ಸಹಾಯಧನ ಕಡಿಮೆ ಇರುವುದರಿಂದ 6-7 ವರ್ಷಗಳ ಹಿಂದೆ ಮಂಜೂರಾತಿಯಾಗಿದ್ದರೂ ಅವುಗಳ ನಿರ್ಮಾಣ ಸಾಧ್ಯವಾಗಿಲ್ಲ. ಮತ್ತೆ ಅಂತಹ ಫಲಾನುಭವಿಗಳಿಗೆ ಹೊಸ ಮನೆಗಳ ನಿರ್ಮಾಣ ಕಷ್ಟವಾಗುತ್ತಿದೆ. ಇದನ್ನು ಬಗೆಹರಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ ಸಲಹೆಗೆ ಮುಂದೆ ಮಂಜೂರಾತಿ ಆಗಿದ್ದು, ನಿರ್ಮಾಣಗೊಳ್ಳದಿರುವ ಮನೆಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಸಚಿವರು ಭರವಸೆ ನೀಡಿದರು.

ಇದನ್ನೂ ಓದಿ:ಸರ್ಕಾರದ ಭ್ರಷ್ಟಾಚಾರ ವಿಷಯ ಪ್ರಸ್ತಾಪಕ್ಕೆ ಪಟ್ಟು: ಆಡಳಿತ-ಪ್ರತಿಪಕ್ಷ ಸದಸ್ಯರ ವಾಗ್ವಾದ

ABOUT THE AUTHOR

...view details