ಅಥಣಿ: ಅಥಣಿಯನ್ನು ನೂತನ ಜಿಲ್ಲೆ ಮಾಡಬೇಕೆಂದು ವಿದ್ಯಾರ್ಥಿಗಳು ಹೋರಾಟ ಆರಂಭಿಸಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಇದೀಗ ವಿದ್ಯಾರ್ಥಿಗಳು ಪತ್ರ ಚಳವಳಿಗೆ ಮುಂದಾಗಿದ್ದಾರೆ.
ಅಥಣಿ ನೂತನ ಜಿಲ್ಲೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪತ್ರ ಚಳವಳಿ - Athani
ಅಥಣಿ ನೂತನ ಜಿಲ್ಲೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಪತ್ರ ಚಳವಳಿ ನಡೆಸಿ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಮುಖ್ಯಮಂತ್ರಿಗಳ ಮನವೊಲಿಸುವಂತೆ ಮನವಿ ಮಾಡಿದ್ದಾರೆ.
![ಅಥಣಿ ನೂತನ ಜಿಲ್ಲೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪತ್ರ ಚಳವಳಿ Students Movement for Athani New District](https://etvbharatimages.akamaized.net/etvbharat/prod-images/768-512-10692537-thumbnail-3x2-vish.jpg)
ಹಲವು ಸಂಘಟನೆಗಳು ಮತ್ತು ಮಠಾಧೀಶರು, ಸಾಹಿತಿಗಳು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಿಎಂ ಯಡಿಯೂರಪ್ಪಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಅಥಣಿ ತಾಲೂಕಿನಿಂದ ಬೆಳಗಾವಿ ನಗರ 180 ಕಿಲೋಮೀಟರ್ ದೂರದಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಸರ್ಕಾರಿ ಕೆಲಸಗಳಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದಾಗಿ ಅಥಣಿ ಜಿಲ್ಲೆ ರಚನೆಗೆ ಒತ್ತಾಯ ಕೇಳಿಬರುತ್ತಿದೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಶಶಿಧರ ಬುರ್ಲಿ, ಕಳೆದ ಹಲವಾರು ವರ್ಷಗಳಿಂದ ಅಥಣಿ ಜಿಲ್ಲೆ ಮಾಡಬೇಕೆಂದು ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ ಮಾಡಿದ್ದು, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಈಗಲಾದರೂ ನಮ್ಮ ಭಾಗದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ, ಮುಖ್ಯಮಂತ್ರಿಗೆ ಈ ಭಾಗದ ವಸ್ತುಸ್ಥಿತಿ ವಿವರಿಸಿ ಅಥಣಿ ಜಿಲ್ಲೆ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ.