ಬೆಳಗಾವಿ:ಬೆಳಗಾವಿಯಲ್ಲಿ ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಜತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡೆಸಿದ ಸಭೆ ವಿಫಲವಾಗಿದ್ದು, ಟಿಕೆಟ್ ವಂಚಿತರು ಪಕ್ಷೇತರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಂಡಾಯ ಎದ್ದಿರುವ ಅಕಾಂಕ್ಷಿಗಳ ಸಭೆಯನ್ನು ಶನಿವಾರ ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ನಡೆಸಿದರು. ಈ ವೇಳೆ ರಾಮದುರ್ಗ, ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ ಆಕಾಂಕ್ಷಿಗಳು ಆಗಮಿಸಿ ಧರ್ಮೇಂದ್ರ ಪ್ರಧಾನ ಮುಂದೆ ತಮ್ಮ ನೋವು ತೋಡಿಕೊಂಡರು. ಆಕಾಂಕ್ಷಿಗಳನ್ನು ಒನ್ ಟೂ ಒನ್ ಕರೆದ ಪ್ರಧಾನ್ ಅವರು, ಸಮಾಧಾನ ಪಡಿಸುವ ಯತ್ನ ಮಾಡಿದರು.
ಧರ್ಮೇಂದ್ರ ಪ್ರಧಾನ್ ಸಭೆಗೆ ಸವದತ್ತಿ, ಬೈಲಹೊಂಗಲ ಟಿಕೆಟ್ ಆಕಾಂಕ್ಷಿಗಳು ಮತ್ತು ಟಿಕೆಟ್ ವಂಚಿತ ಬಿಜೆಪಿ ಶಾಸಕ ಅನಿಲ್ ಬೆನಕೆ ಕೂಡ ಗೈರಾಗಿದ್ದರು. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೋರೆ, ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಸೇರಿ ಇನ್ನಿತರರು ಹಾಜರಿದ್ದರು.
ಸಭೆ ಬಳಿಕ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.ಪ್ರಧಾನಿ ಮೋದಿ ಪ್ರವಾಸ ಇದೇ ತಿಂಗಳು ಶುರುವಾಗಲಿದೆ. ಯಡಿಯೂರಪ್ಪ, ಬೊಮ್ಮಾಯಿ ಸೇರಿ ಎಲ್ಲ ನಾಯಕರ ಪ್ರವಾಸ ಶುರುವಾಗುತ್ತದೆ. ಬಹಳ ಉತ್ಸಾಹದಿಂದ ನಾಮಪತ್ರ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತದೆ. ಡಬಲ್ ಎಂಜಿನ್ ಸರ್ಕಾರದ ಮೇಲೆ ಜನರ ಭರವಸೆಯಿದ್ದು, ಚುನಾವಣಾ ಫಲಿತಾಂಶ ಸ್ಪಷ್ಟವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಅಸಮಾಧಾನ ವಿಚಾರಕ್ಕೆ ಬಹಳ ಜನರ ಮನಸ್ಸಿನಲ್ಲಿ ಆಸೆ ಇರೋದು ಸಹಜ. ನಮ್ಮದು ಪ್ರಜಾಪ್ರಭುತ್ವ ಪಕ್ಷ, 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ನಾನು ಈ ಮೊದಲು ಸಹ ಇಲ್ಲಿಗೆ ಬಂದು ಹೋಗಿದ್ದೆ. ಏನೇ ಇರಲಿ ಎಲ್ಲರೂ ಒಗ್ಗೂಡಿ ಬಿಜೆಪಿ ಗೆಲ್ಲಿಸುತ್ತಾರೆ. ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವ ಬಗ್ಗೆ ಪ್ರತಿಕ್ರಿಯೆಸಿದ ಧರ್ಮೇಂದ್ರ ಪ್ರಧಾನ್ ಅವರು, ಲಕ್ಷ್ಮಣ್ ಸವದಿ ಮೇಲೆ ನಮಗೆ ಈ ನಿರೀಕ್ಷೆ ಇರಲಿಲ್ಲ. ಲಕ್ಷ್ಮಣ್ ಸವದಿಗೆ ಎಲ್ಲ ಅವಕಾಶ, ಗೌರವ ನೀಡಿದ್ದೆವು. ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ನಡೆದಿದೆ. ಸೋತರೂ ಅವರ ಸೇವೆ ಪರಿಗಣಿಸಿ ಡಿಸಿಎಂ ಮಾಡಿದ್ದೇವು. ಚುನಾವಣೆಗೆ ಕೆಲವು ಲೆಕ್ಕಾಚಾರ ಇರುತ್ತೆ. ಬಿಜೆಪಿ ಕಾರ್ಯಕರ್ತರ ಪಕ್ಷ, ಇದು ಹಲವು ಬಾರಿ ಸಾಬೀತಾಗಿದೆ. ಅಥಣಿಯಲ್ಲಿಯೂ ಬಿಜೆಪಿಗೆ ಗೆಲುವು ಆಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.