ಚಿಕ್ಕೋಡಿ (ಬೆಳಗಾವಿ): ಲಿಂಗಾಯತ ಸಮುದಾಯದಲ್ಲಿ ತುಂಬಾ ಜನ ಮುಖ್ಯಮಂತ್ರಿಗಳಾದರು. ಆದರೆ ಬಸವರಾಜ ಬೊಮ್ಮಾಯಿಯಂಥ ಭ್ರಷ್ಟ ಮುಖ್ಯಮಂತ್ರಿಯನ್ನು ಈ ಹಿಂದೆ ನೋಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸವದಿಯವರು ಪಕ್ಷಕ್ಕೆ ಬಂದ ಮೇಲೆ ಈ ಭಾಗದ ಜಿ. ಪಂ ಸದಸ್ಯರು, ತಾ.ಪಂ ಸದಸ್ಯರು ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರಿದ್ದಾರೆ. ನಿಮ್ಮೆಲ್ಲರನ್ನು ನಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ತಿವಿ ಇಲ್ಲಿ ಮೂಲ, ವಲಸೆ ಎಂಬ ಭೇದ ಇಲ್ಲ. ಮುಂದೆ ನಾವು ಅಧಿಕಾರಕ್ಕೆ ಬಂದೇ ಬರ್ತಿವಿ, ನಿಮಗೆ ಸೂಕ್ತ ಸ್ಥಾನಮಾನ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ರಾಜು ಕಾಗೆಗೆ ಮೇ 10 ರಂದು ನಡೆಯವ ಚುನಾವಣೆಯಲ್ಲಿ ಕಾಗವಾಡದಿಂದ ಆಶೀರ್ವಾದ ಮಾಡಿ. ನಿಮ್ಮ ಉತ್ಸಾಹ ಹುರುಪು ನೋಡಿದ್ರೆ ನೂರಕ್ಕೆ ನೂರು ರಾಜು ಕಾಗೆ ಗೆಲ್ತಾರೆ ಅಂತ ಅನಿಸ್ತಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಗಾಳಿ ಬೀಸೋಕೆ ಶುರುವಾಗಿದೆ. ಈ ಭಾಗದಲ್ಲಿ ಸವದಿ ಬಂದ ಮೇಲೆ ಅದು ಬಿರುಗಾಳಿಯ ರೀತಿಯಲ್ಲಿ ಬೀಸೋಕೆ ಶುರುವಾಗಿದೆ. ಲಕ್ಷ್ಮಣ ಸವದಿಯವರಿಗೆ ಅವರದೆ ಆದ ಫಾಲೋವಿಂಗ್ ಇದೆ. ಬಿಜೆಪಿಯವರಿಗೆ ತಮ್ಮ ತಪ್ಪಿನ ಅರಿವಾಗುತ್ತಿರಬೇಕು ಇಂತಹ ಸೀನಿಯರ್ ಲೀಡರ್ ಜತೆ ಅವರು ನಡ್ಕೊಂಡಿದ್ದು ಅಕ್ಷಮ್ಯ ಅಪರಾಧ. 20 ವರ್ಷ ಬಿಜೆಪಿ ಕಟ್ಟಿದ ನಾಯಕನಿಗೆ ವಿನಾಕಾರಣ ಅವಮಾನ ಮಾಡಿದ್ದಾರೆ. ಇಂಹತ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕೋ, ಬೇಡವೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಶ್ರೀಮಂತ ಪಾಟೀಲ್ 2018ರಲ್ಲಿ ಜೆಡಿಎಸ್ ನಲ್ಲಿದ್ದರು, ಟಿಕೆಟ್ ಕೊಡಿ ಕಾಂಗ್ರೆಸ್ಗೆ ಸೇರ್ತಿನಿ ಅಂದ್ರು, ನಾನು ಲಾಯಲ್ ಆಗಿರ್ತಿಯೇನಪ್ಪ ಅಂತ ಕೇಳಿದ್ದೆ, ನನ್ನ ಪ್ರಾಣ ಹೋದ್ರೂ ಸರಿ ನಾನು ಪಕ್ಷಕ್ಕೆ ನಿಯತ್ತಾಗಿ ಇರುತ್ತೀನಿ ಅಂತ ಹೇಳಿದ್ದ. ಹೀಗಾಗಿ ಟಿಕೆಟ್ ಕೊಟ್ಟ ಮೇಲೆ ಆರಿಸಿ ಬಂದ, ಆರಿಸಿ ಬಂದ ಮೇಲೆ ದ್ರೋಹ ಮಾಡೋಕೆ ಶುರು ಮಾಡಿದ. ನಿನ್ನ ಮೇಲೆ ಅನುಮಾನ ಇದೆ ಅಂತ ಕೇಳ್ತಿದ್ದಾರಲ್ಲ ಅಂತ ಕೆಲವರು ಹೇಳ್ತಿದ್ದಾರೆ ಅಂತ ಕರೆದು ಕೇಳಿದ್ದೆ. ಇಲ್ಲ ಸಾರ್ ನಾನು ಪಕ್ಷದಲ್ಲಿಯೇ ಇರ್ತಿನಿ ಅಂತ ಹೇಳಿದ್ದ. ನಾನು ಹೊರಡುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದಾನೆ ಈ ಆಸಾಮಿ, ತನ್ನನ್ನ ತಾನು ಮಾರ್ಕೊಂಡು ಬಿಜೆಪಿ ಜತೆ ಹೋದವನು ಈ ಕ್ಷೇತ್ರದ ಜನರಿಗೂ ಬೆನ್ನಿಗೆ ಚೂರಿ ಹಾಕ್ತಾನೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಒಂದು ಶುಗರ್ ಫ್ಯಾಕ್ಟರಿ ಇತ್ತು ಈಗ ಐದು ಫ್ಯಾಕ್ಟರಿ ಮಾಡಿದ್ದಾನೆ. ರೈತರ ತಲೆ ಬೋಳಿಸಿ ಮಾಡಿದ್ದಾರೆ, ತೂಕದಲ್ಲಿ ಹೊಡೆದು ಈ ರೀತಿ ಮಾಡಿದ್ದಾರೆ. ಭ್ರಷ್ಟ ರಹಿತ ಕ್ಷೇತ್ರ ಮಾಡ್ತಿನಿ ಅಂತಿದ್ದ ಅಲ್ಲಪಾ ನೀನೇ ಭ್ರಷ್ಟ, ನಿಮಗೆ ಮೋಸ ಮಾಡಿದವನಿಗೆ ನೀವು ತಕ್ಕ ಪಾಠ ಕಲಿಸಬೇಕು ಎಂದು ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ರು.