ಬೆಳಗಾವಿ: ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆಯ (ಠಾಕ್ರೆ ಬಣ) ಆಕ್ಷೇಪ ವ್ಯಕ್ತಪಡಿಸಿದ್ದು, ಮೊದಲು ಕರ್ನಾಟಕದಲ್ಲಿ ನೀವು ನಮಗೆ ಮರಾಠಿ ಭವನ ಕಟ್ಟಲು ಅವಕಾಶ ನೀಡಬೇಕು. ಆಮೇಲೆ ಕರ್ನಾಟಕ ಭವನ ನಿರ್ಮಾಣ ಮಾಡಿಕೊಳ್ಳಿ ಎಂದು ಕ್ಯಾತೆ ತೆಗೆದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಸೇನೆಯ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ರವಿಕಿರಣ ಇಂಗವಳ್ಳಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟದಲ್ಲಿ ಸಾಕಷ್ಟು ನಮ್ಮ ಜನರು ಮೃತರಾಗಿದ್ದಾರೆ. ಆದ್ರೆ, ಅವರಿಗೆ ನ್ಯಾಯ ಕೊಡಿಸುವಂತಹ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿಲ್ಲ.
ಈಗ ಕರ್ನಾಟಕದ ಸಿಎಂ ಮಹಾರಾಷ್ಟ್ರದಲ್ಲಿ ಬಂದು ಕರ್ನಾಟಕ ಭವನ ಕಟ್ಟಿದ್ರೆ, ನಮಗೂ ಕರ್ನಾಟಕದಲ್ಲಿ ಮಹಾರಾಷ್ಟ್ರ ಭವನ ಕಟ್ಟಲು ಅವಕಾಶ ನೀಡಬೇಕು. ಮೊದಲು ನೀವು ನಮಗೆ ಭವನ ಕಟ್ಟಲು ಅವಕಾಶ ನೀಡಿ. ಆಮೇಲೆ ನಿಮ್ಮ ಭವನ ಇಲ್ಲಿ ನಿರ್ಮಾಣ ಮಾಡಿಕೊಳ್ಳಿ. ಒಂದು ವೇಳೆ, ನೀವು ಕರ್ನಾಟಕ ಭವನ ಕಟ್ಟಿದ್ದೇ ಆದ್ರೆ ನಾವು ಕರ್ನಾಟಕ ಇರುವ ಹೆಸರು ತೆಗೆದು ಹಾಕುತ್ತೇವೆ ಎಂದು ಸಿಎಂ ಬೊಮ್ಮಾಯಿಗೆ ಎಚ್ಚರಿಕೆ ನೀಡಿದ್ದಾರೆ.