ಚಿಕ್ಕೋಡಿ: ಕಳೆದ ಮೂರು ದಿನಗಳಿಂದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಮುಷ್ಕರದ ಕುರಿತಂತೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪನವರು ಸೇರಿದಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್ ಅಶೋಕವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬುದು ಸಾರಿಗೆ ಸಿಬ್ಬಂದಿಯ ಮುಖ್ಯ ಬೇಡಿಕೆಯಾಗಿತ್ತು. ಆದರೆ, ಅದು ಅಷ್ಟು ಸುಲಭವಾಗಿ ಆಗುವಂತ ಮಾತಲ್ಲ. ಅವರ ಹತ್ತು ಬೇಡಿಕೆಗಳಲ್ಲಿ ಆರರಿಂದ ಏಳು ಬೇಡಿಕೆಗಳನ್ನು ಸರ್ಕಾರ ಒಪ್ಪಿದೆ ಎಂದರು. ನಮ್ಮ ಸರ್ಕಾರ ಯಾವುದೇ ಕ್ಷೇತ್ರದ, ವರ್ಗದ ಜನರಿಗೆ ತೊಂದರೆ ಆಗದ ಹಾಗೆ ಕೆಲಸ ಮಾಡುತ್ತಿದೆ. ಏಳೆಂಟು ತಿಂಗಳಿಂದ ಕೋವಿಡ್-19 ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸಿಎಂ ಯಡಿಯೂರಪ್ಪನವರು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಸದ್ಯದ ಕಷ್ಟದ ಪರಿಸ್ಥಿತಿಯಲ್ಲೂ ಸಾರಿಗೆ ನೌಕರರಿಗೆ ಸರ್ಕಾರ ನ್ಯಾಯ ಒದಗಿಸಿದೆ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರದಲ್ಲಿ ಭಾಗಿಯಾಗಿದ್ದು ಖಂಡನೀಯ. ರೈತರ ಪರವಾಗಿ ರೈತರಿಗಾಗಿ ಹೋರಾಟ ಮಾಡಿದ್ರೆ ಒಪ್ಪಿಕೊಳ್ತಿದ್ವಿ, ಸಾರಿಗೆ ನೌಕರರಿಗೆ ಹುರಿದುಂಬಿಸಿ ಬೇರೆ ರೀತಿಯಲ್ಲಿ ಪರಿಸ್ಥಿತಿ ಸೃಷ್ಟಿ ಮಾಡಿದರು.
ನಮ್ಮ ಸರ್ಕಾರಕ್ಕೆ ನಮ್ಮ ನೌಕರರನ್ನು ಹೇಗೆ ಇಟ್ಟುಕೊಳ್ಳಬೇಕು ಅಂತಾ ಗೊತ್ತು. ಕೋಡಿಹಳ್ಳಿ ಚಂದ್ರಶೇಖರ್ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇದರಿಂದ ಜನರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಯಿತು ಎಂದು ಆರೋಪಿಸಿದ್ದಾರೆ.