ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದ್ದು, ಗೋಕಾಕ್ ತಾಲೂಕಿನಲ್ಲಿ ಎರಡು ಸೇತುವೆ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಐದು ಸೇತುವೆಗಳು ಮುಳುಗಡೆ ಆಗಿವೆ. ಮತ್ತೊಂದೆಡೆ ಹಿಡಕಲ್ ಜಲಾಶದಿಂದ 23 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ಘಟಪ್ರಭಾ ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ 23ಸಾವಿರ ಕ್ಯೂಸೆಕ್ ನೀರನ್ನು ಸದ್ಯ ಹೊರಕ್ಕೆ ಬಿಡಲಾಗುತ್ತಿದೆ. ಇದಲ್ಲದೇ ಹಿಡಕಲ್ ಜಲಾಶಯ ಸಂಪೂರ್ಣವಾಗಿ 100ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ 40 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುವುದು. ಹೀಗಾಗಿ ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿ ಪಾತ್ರದ ಜನರು ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ಹೋಗಬೇಕೆಂದು ನೀರಾವರಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಘಟಪ್ರಭಾ ನದಿ ಪಾತ್ರಕ್ಕೆ ಬರುವ ಲೋಳಸೂರ್ ಸೇತುವೆ ಹಾಗೂ ಸಿಂಗಳಾಪೂರ ಸೇತುವೆಗಳು ಮುಳುಗಡೆ ಆಗಿದ್ದು, ಮತ್ತೆ ಪ್ರವಾಹದ ಭೀತಿಯನ್ನು ಎದುರಿಸುವಂತಾಗಿದೆ.