ಕರ್ನಾಟಕ

karnataka

ETV Bharat / state

ಅವೈಜ್ಞಾನಿಕ ರಸ್ತೆ ಹಂಪ್​​ಗಳ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ - ETv Bharat kannada news

ವಿಧಾನಸಭೆಯಲ್ಲಿ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಂಪ್​ ವಿಷಯ ಚರ್ಚೆ, ವಿಷಯ ಪ್ರಸ್ತಾಪಿಸಿದ ಎ.ಟಿ.ರಾಮಸ್ವಾಮಿ, ಅವೈಜ್ಞಾನಿಕ ಹಂಪ್ಸ್ ತೆಗೆಯಲು ಸ್ಥಳೀಯ ಸಹಕಾರಬೇಕು ಎಂದ ಗೋವಿಂದ ಕಾರಜೋಳ

Serious discussion on unscientific road humps in the assembly
ವಿಧಾನಸಭೆಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ಗಳ ಬಗ್ಗೆ ಗಂಭೀರ ಚರ್ಚೆ

By

Published : Dec 28, 2022, 7:10 PM IST

ಬೆಳಗಾವಿ:ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬು (ಹಂಪ್) ಗಳ ವಿಷಯದ ಗಂಭೀರ ಚರ್ಚೆ ವಿಧಾನಸಭೆಯಲ್ಲಿ ಇಂದು ನಡೆಯಿತು. ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ, ರಾಜ್ಯದ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ರಸ್ತೆ ಹಂಪ್‌ ಹಾಕಲಾಗಿದ್ದು, ಇದರಿಂದ ಅಪಘಾತಗಳಾಗುತ್ತಿವೆ. ಹಂಪ್​ಗಳ ಬಳಿ ಸೂಚನಾ ಫಲಕ ಇರಬೇಕು. ಬಣ್ಣ ಬಳಿಯಬೇಕು ಎಂಬುದು ಸೇರಿದಂತೆ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಮಧ್ಯೆ ಪ್ರವೇಶಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈ ವಿಚಾರ ಸದನದಲ್ಲಿ ಹಲವು ಬಾರಿ ಪ್ರಸ್ತಾಪವಾಗಿದ್ದು, ಸರ್ಕಾರ ಏನೂ ಮಾಡಲ್ಲ ಎಂಬ ಹತಾಶೆ ಭಾವನೆ ಇದೆ. ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಿಲ್ಲ ಎಂದರು. ಬಹುತೇಕ ಎಲ್ಲರ ಬಳಿ ವಾಹನವಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿ ಹಾಗೂ ಹಂಪ್‌ಗಳಿಂದ ತೊಂದರೆಯಾಗುತ್ತಿದ್ದು, ವೈಜ್ಞಾನಿಕವಾಗಿ ನಿರ್ಮಿಸಿ ಎಂಬ ಸಲಹೆ ಮಾಡಿದರು.

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಂಪ್ ಹಾಕಬಾರದು ಎಂಬ ನಿಯಮವಿದೆ. ಶಾಲೆ, ಆಸ್ಪತ್ರೆ, ಜನಸಂದಣಿ ಇರುವ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಎಂದು ಒತ್ತಾಯಿಸಿದರು. ನಂತರ ಕಾಂಗ್ರೆಸ್‌ ಸದಸ್ಯರಾದ ಯು.ಟಿ.ಖಾದರ್, ರಾಮಲಿಂಗಾರೆಡ್ಡಿ ಕೂಡ ದನಿಗೂಡಿಸಿದರು.

ಸರ್ಕಾರದ ಪರವಾಗಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು, ಗ್ರಾಮಸ್ಥರ ಒತ್ತಾಯಕ್ಕೆ ಹಂಪ್ ಹಾಕಲಾಗುತ್ತದೆ. ಬಹಳಷ್ಟು ಕಡೆ ಶಾಸಕರೇ ಹಂಪ್‌ಗಳನ್ನು ಹಾಕಿಸುತ್ತಾರೆ. ರಾಜ್ಯದ 29 ಸಾವಿರ ಗ್ರಾಮಗಳಲ್ಲೂ ಹಂಪ್ ಸಮಸ್ಯೆ ಇದೆ. ಅವೈಜ್ಞಾನಿಕ ಹಂಪ್‌ಗಳನ್ನು ತೆಗೆಯಲು ಅಗತ್ಯವಿರುವ ಕಡೆ ವೈಜ್ಞಾನಿಕ ರೀತಿ ಹಂಪ್ಸ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

ಹಂಪ್ ನಿರ್ಮಿಸಬಾರದು ಎಂಬ ಸುಪ್ರೀಂಕೋರ್ಟ್ ಆದೇಶವಿದ್ದರೂ ಗ್ರಾಮಸ್ಥರ, ಜನರ ಒತ್ತಡಕ್ಕೆ ಮಣಿದು, ಗುತ್ತಿಗೆದಾರರು, ಅಧಿಕಾರಿಗಳು ಹಂಪ್ ಹಾಕುತ್ತಾರೆ. ಎಲ್ಲರ ಸಹಕಾರದಿಂದ ವೈಜ್ಞಾನಿಕ ಹಂಪ್‌ಗಳನ್ನು ನಿರ್ಮಿಸಲು ಕೂಡ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಪಘಾತವಾದ ಕಡೆಗಳಲ್ಲಿ ಹಂಪ್ ಹಾಕಲಾಗುತ್ತದೆ. ಅವೈಜ್ಞಾನಿಕ ಹಂಪ್ಸ್ ತೆಗೆಯಲು ಸ್ಥಳೀಯ ಸಹಕಾರ ಬೇಕು ಎಂದರು.

ಇದನ್ನೂ ಓದಿ :ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜಿಲ್ಲಾ, ತಾಲ್ಲೂಕು ಕೇಂದ್ರದಿಂದ ಪ್ರವೇಶಕ್ಕೆ ಕೇಂದ್ರಕ್ಕೆ ಮನವಿ

ABOUT THE AUTHOR

...view details