ಕರ್ನಾಟಕ

karnataka

By

Published : Nov 25, 2021, 7:16 PM IST

ETV Bharat / state

ಪಕ್ಷೇತರ ಅಭ್ಯರ್ಥಿ ಲಖನ್ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನ ಕನ್ಫ್ಯೂಸ್​​ ಮಾಡ್ತಿದ್ದಾರೆ: ಸತೀಶ್​ ಜಾರಕಿಹೊಳಿ‌

ಎಲ್ಲರನ್ನು ಭೇಟಿ ಮಾಡುವ ಮೂಲಕ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

sathish jarkiholi speech in chikkodi programme
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಚಿಕ್ಕೋಡಿ(ಬೆಳಗಾವಿ): ವಿಧಾನಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿಯಿಂದ ರಂಗೇರಿದ್ದು, ಪಕ್ಷೇತರ ಅಭ್ಯರ್ಥಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಕನ್ಫ್ಯೂಸ್​​ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

ರಾಯಬಾಗ ಮತ್ತು ಕುಡಚಿ ಮತಕ್ಷೇತ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದೇ ರೀತಿ ಕಾರ್ಯಕರ್ತರು ಕೂಡ ಬಹಳ ಗಟ್ಟಿಯಾಗಿ ಕೆಲಸಗಳನ್ನು ಮಾಡಬೇಕು. ಪ್ರಜ್ಞಾವಂತರಾಗಿರುವ ನೀವು ಯಾವುದೇ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಯಿಂದ ಕನ್ಫ್ಯೂಸ್:

ಕಳೆದ ನಾಲ್ಕೈದು ದಿನಗಳಿಂದ ಮಾಜಿ ಸಚಿವ ರಮೇಶ್​​ ಜಾರಕಿಹೊಳಿ‌, ಕಾಂಗ್ರೆಸ್ ಮಾಜಿ‌ ಶಾಸಕರು, ಮುಖಂಡರನ್ನು ಭೇಟಿಯಾಗಿದ್ದರು. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್​ ಜಾರಕಿಹೊಳಿ‌ ರಮೇಶ್​ ಜಾರಕಿಹೊಳಿ‌ ಅವರನ್ನು ಲೇವಡಿ ಮಾಡಿದ್ದಾರೆ. "ವಿಧಾನಪರಿಷತ್ ಚುನಾವಣೆ ಮೂರನೇಯ ವ್ಯಕ್ತಿಯಿಂದ ರಂಗೇರಿದೆ. ಪಕ್ಷೇತರ ಅಭ್ಯರ್ಥಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಪೂರ್ತಿ ಗೊಂದಲ ಹುಟ್ಟಿಸುತ್ತಿದ್ದಾರೆ. ಶ್ಯಾಮ್ ಘಾಟಗೆಯವರನ್ನು ಭೇಟಿಯಾಗುತ್ತಾರೆ.. ಮತ್ತೊಂದೆಡೆ ರಾಜು ಕಾಗೆ.. ಇನ್ನೊಂದಡೆ ಬಿಜೆಪಿ ಶಾಸಕ ಪಿ. ರಾಜು ಅವರನ್ನು ಭೇಟಿಯಾಗ್ತಾರೆ. ಕೊನೆಗೆ ಎಲ್ಲರನ್ನೂ ಕನ್ಫ್ಯೂಸ್ ಮಾಡುತ್ತಿದ್ದಾರೆ". ತಮ್ಮ ಸ್ವಾರ್ಥ ರಾಜಕಾರಣಕ್ಕೆ ತಾವು ಮಂತ್ರಿ ಆಗಬೇಕೆಂಬ ದುರಾಸೆಗೆ ಯಾರನ್ನೂ ಬೇಕಾದರೂ ಬಳಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಯಾರು ಯಾರನ್ನೇ ಭೇಟಿಯಾದ್ರು, ನೀವು ಪಕ್ಷದ ಪರವಾಗಿ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಾವ್ಯಾರೂ ಗರ್ದಿ ಈ ಗಮ್ಮತ್​​ನಲ್ಲಿ ಸೋಲಬಾರದು. ಅವರು ತಾಜ್ ಮಹಲ್, ದೆಹಲಿ ಕುತುಬ್ ಮಿನಾರ್, ಹೈದರಾಬಾದ್ ನಿಜಾಮ್ ಕೋಟೆ, ಮೈಸೂರು ಅರಮನೆ ಯಾವುದೇ ಚಿತ್ರ ತೋರಿಸಲಿ, ನೀವು ಮಾತ್ರ ಬದಲಾಗಬಾರದು. ಆ ವ್ಯಕ್ತಿ ಇನ್ನೂ ಘಾಟಗಿಯವರ ಮನೆಗೆ ಎಷ್ಟು ಬಾರಿ ಬರುತ್ತಾರೋ ಗೊತ್ತಿಲ್ಲ. ಬಿಜೆಪಿ ದಪ್ಪ ಚರ್ಮದ ಸರ್ಕಾರ. ಇದಕ್ಕೆ ಕಿವಿ, ಕಣ್ಣು ಏನು ಇಲ್ಲ. ಆ ರೀತಿಯಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವರ್ತಿಸುತ್ತಿವೆ. ಅದಕ್ಕೆ ಅಂಕುಶ ಹಾಕಬೇಕಾದ್ರೆ, ಈ ಚುನಾವಣೆಯಲ್ಲಿ ಬಿಜೆಪಿಯನ್ನು ನಿಯಂತ್ರಿಸಲೇಬೇಕು. ಅದಕ್ಕಾಗಿ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಚನ್ನರಾಜ್ ಹಟ್ಟಿಹೊಳಿ ಸ್ಪರ್ಧಿಸಿದ್ದು, ಮತ ನೀಡಿ ಆಶೀರ್ವಾದ ಮಾಡಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದಂತ ಕಾರ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ ಹಾಕಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ನೂರು ವರ್ಷದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಪರಿಷತ್​​ಗೆ ಸ್ಪರ್ಧೆ ಮಾಡಿದ್ದೇನೆ. ನನ್ನ ಸೌಭಾಗ್ಯ, ಕಾಂಗ್ರೆಸ್ ಪಕ್ಷ ಯುವಕರಲ್ಲಿ ವಿಶ್ವಾಸ ಇಟ್ಟು ಟಿಕೆಟ್ ನೀಡಿದೆ. ಟಿಕೆಟ್ ಸಿಗಬೇಕಾದ್ರೆ, ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಆಶೀರ್ವಾದ ಇದ್ದಾಗ ಮಾತ್ರ ಸಿಗಲಿದೆ ಎಂದರು.

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾತನಾಡಿ, ಜನರ ಬೇಡಿಕೆಯಂತೆ 18 ಕೋಟಿ ರೂ. ವೆಚ್ಚದಲ್ಲಿ ರಾಯಬಾಗ ರೈಲ್ವೆ ಬ್ರಿಡ್ಜ್​ ನಿರ್ಮಾಣ ಮಾಡಿಕೊಡಲಾಗಿದೆ. ಸಂಸದರಾಗಿರುವ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದೇ ರೀತಿ ಚನ್ನರಾಜ್ ಹಟ್ಟಿಹೊಳಿಯವರನ್ನು ಗೆಲ್ಲಿಸಿದ್ರೆ ಈ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡಲಿದ್ದಾರೆಂಬ ಭರವಸೆ ಇದೆ ಎಂದು ಹೇಳಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಎಸ್.ಬಿ. ಘಾಟಗೆ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details