ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನೀರಸ ಪ್ರದರ್ಶನದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಬಹುಮತ ಪಡೆದಿರುವುದು ಆಶ್ಚರ್ಯದ ಸಂಗತಿ ಏನಲ್ಲ. ಯಾರೂ ಗೆಲ್ಲಬೇಕಿತ್ತೊ ಅವರು ಗೆದ್ದಿಲ್ಲ. ಅದರ ಲಾಭ ಬಿಜೆಪಿಗೆ ಆಗಿದೆಯಷ್ಟೇ. ಆದರೆ, ಪಾಲಿಕೆ ಚುನಾವಣೆ ಗೆಲುವನ್ನೇ ತಮ್ಮ ಸಾಧನೆ ಎಂದು ಬಿಜೆಪಿಗರು ಬೀಗುತ್ತಿರುವುದು ಸರಿಯಲ್ಲ. ಪ್ರಥಮ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ವಿ, ನಮ್ಮ ಸಾಧನೆಗೆ ತೃಪ್ತಿ ಇದೆ. ಕಾಂಗ್ರೆಸ್ 15, ನಮ್ಮ ಬೆಂಬಲಿತರು ಐವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ನಮ್ಮದಿತ್ತು. ಪಕ್ಷದ ಚಿಹ್ನೆ ಮೇಲೆ 10 ಅಭ್ಯರ್ಥಿಗಳು, ಐವರು ನಮ್ಮ ಬೆಂಬಲಿತ ಪಕ್ಷೇತರರು ಗೆದ್ದಿದ್ದಾರೆ ಎಂದರು.
ನಮ್ಮಲ್ಲಿನ ಹೊಂದಾಣಿಕೆ ಕೊರತೆಯಿಂದ 8 ಸ್ಥಾನ ಕಳೆದುಕೊಂಡೆವು. ಬೆಳಗಾವಿ ದಕ್ಷಿಣದಲ್ಲಿ 5, ಉತ್ತರದಲ್ಲಿ ಮೂವರು ಸೋಲಲು ಹೊಂದಾಣಿಕೆ ಕೊರತೆಯೇ ಕಾರಣ. ನಾವು ಅಂದುಕೊಂಡಿದ್ದನ್ನು ಪಾಲಿಕೆ ಚುನಾವಣೆಯಲ್ಲಿ ಸಾಧಿಸಿದ್ದೇವೆ. ಆದರೆ, ಎಂಇಎಸ್ನಲ್ಲಿನ ಬಂಡಾಯದ ಲಾಭ ಬಿಜೆಪಿಗೆ ಆಗಿದೆಯಷ್ಟೇ. ಒಂದೇ ವಾರ್ಡ್ಗೆ ಎಂಇಎಸ್ ನ ನಾಲ್ವರು ಸ್ಪರ್ಧಿಸಿದ್ದೇ ಬಿಜೆಪಿಯ ಈ ಸಾಧನೆಗೆ ಕಾರಣ ಎಂದು ತಿಳಿಸಿದರು.
ಪಾಲಿಕೆಯ ಗೆಲುವನ್ನೇ ಲೋಕಸಭೆ ಗೆದ್ದ ಹಾಗೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ಬಂದಷ್ಟೇ ಮತಗಳು ಈಗಲೂ ಎಲ್ಲರಿಗೂ ಹಂಚಿಕೆ ಆಗಿವೆ. ಮತ ಹಂಚಿಕೆಯಲ್ಲಿ ಈ ಸಲವೂ ಯಾವುದೇ ವ್ಯತ್ಯಾಸವಾಗಿಲ್ಲ. ಎಂಇಎಸ್ ನಾಯಕರು ಮಾಡಿರುವ ತಪ್ಪಿನಿಂದ ಬಿಜೆಪಿಗೆ ಲಾಭವಾಗಿದೆ. ಎಂಇಎಸ್ ತಪ್ಪನ್ನು ಕಾಂಗ್ರೆಸ್ ತಲೆಗೆ ಕಟ್ಟುವುದು ಸರಿಯಲ್ಲ. ಬಿಜೆಪಿಯ ಜಯವನ್ನು ಕಾಂಗ್ರೆಸ್ ವೈಫಲ್ಯ ಎನ್ನಬೇಡಿ. ನಾವು ಶಕ್ತಿಮೀರಿ ಸಾಧನೆ ಮಾಡಿದ್ದೇವೆ. ಈ ಚುನಾವಣೆ ಮೂಲಕ ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಬೇಸ್ ಕ್ರಿಯೇಟ್ ಮಾಡಿದ್ದೇವೆ ಎಂದರು.