ಕರ್ನಾಟಕ

karnataka

By ETV Bharat Karnataka Team

Published : Nov 13, 2023, 5:46 PM IST

Updated : Nov 13, 2023, 7:05 PM IST

ETV Bharat / state

ಲೋಕಸಭೆ ಚುನಾವಣೆ: ಬೆಳಗಾವಿ ಲಿಂಗಾಯತ, ಚಿಕ್ಕೋಡಿ ಕುರುಬರಿಗೆ ಟಿಕೆಟ್ ಚಿಂತನೆ - ಸಚಿವ ಸತೀಶ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

Minister satish jarakiholi
ಸಚಿವ ಸತೀಶ ಜಾರಕಿಹೊಳಿ

ಸಚಿವ ಸತೀಶ ಜಾರಕಿಹೊಳಿ ಮಾಧ್ಯಮ ಪ್ರತಿಕ್ರಿಯೆ

ಬೆಳಗಾವಿ:ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಚಿಂತನೆ ನಡೆದಿದೆ. ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಗುರಿ ಹೊಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಕಾಂಗ್ರೆಸ್​ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿದ್ದೇವೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿದ್ದು, ಎಲ್ಲ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ ಚರ್ಚಿಸಿದ ನಂತರ ಅಂತಿಮವಾಗಿ ಹೈಕಮಾಂಡ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದರು.

ಇನ್ನು ಯಾವ್ಯಾವ ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್​, ಇಲ್ಲಿವರೆಗೆ ಯಾವುದೇ ಸಚಿವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿಲ್ಲ. ಇನ್ನು ಅಭ್ಯರ್ಥಿಗಳ ಆಯ್ಕೆಗಾಗಿ ಮೊದಲು ಅರ್ಜಿ ಕರೆಯಲಾಗುತ್ತೆ. ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರು ಅರ್ಜಿ ಸಲ್ಲಿಸಬೇಕು. ಅರ್ಜಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದ ಅವರು, ರಾಹುಲ್ ಜಾರಕಿಹೊಳಿ, ಮೃಣಾಲ್ ಹೆಬ್ಬಾಳಕರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಇನ್ನು ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದು, ಆರೋಪ ಮಾಡಲು ಅವರಿಗೆ ಹಕ್ಕಿದೆ. ಹಾಗಾಗಿ ಮಾತನಾಡುತ್ತಾರೆ. ಮಾತನಾಡಬೇಡ ಅಂತಾ ನಾವು ಹೇಳಲು ಆಗಲ್ಲ ಎಂದರು. ಇನ್ನು ಸಿಎಂಗೆ ಸೋಪಾ ಗಿಫ್ಟ್ ಆರೋಪಕ್ಕೆ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಸ್ಪಷ್ಟೀಕರಣ ನೀಡುತ್ತಾರೆ. ಅದರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹೇಳಿದರು. ಸಚಿವರಿಗೆ ಹಣ ಸಂಗ್ರಹ ಟಾರ್ಗೆಟ್ ನೀಡಲಾಗಿದೆ ಎಂಬ ವಿಚಾರಕ್ಕೆ ಆ ರೀತಿಯ ಕಂಡಿಷನ್​ ನಮ್ಮ ಸಂಪುಟದಲ್ಲಿ ನಡೆದಿಲ್ಲ ಎಂದು ಅಲ್ಲಗೆಳೆದರು.

ಜಾತಿ ಜನಗಣತಿ ಬಿಡುಗಡೆ ವಿಚಾರಕ್ಕೆ, ಜಾತಿ ಜನಗಣತಿ ವರದಿ ಬಗ್ಗೆ ಗೊತ್ತಿಲ್ಲ. ಅದರಲ್ಲಿ ಏನಿದೆ..? ಏನಿಲ್ಲ ಎನ್ನುವ ಅಂಶಗಳ ಕುರಿತು ಚರ್ಚೆ ನಡೆಯಬೇಕು. ಯಾರಿಗೆ ಜಾತಿ ಜನಗಣತಿ ಬಗ್ಗೆ ಗೊಂದಲ ಇದೆ ಅವರು ಸದನದಲ್ಲಿ ಮಾತನಾಡಬೇಕು. ಅದನ್ನು ಬಿಟ್ಟು ಹೊರಗಡೆ ಹೇಳಿಕೆ ನೀಡಿದರೆ ಏನೂ ಪ್ರಯೋಜ‌ನ ಆಗುವುದಿಲ್ಲ ಎಂದರು.

ಹಾಗೇ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಕೆಲವು ಚಿಕ್ಕ ವಯಸ್ಸಿನ ಯುವಕರು ಗುಂಪು ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದೇ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಕೊಲೆಗಳು ಆಗುತ್ತಿವೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಕಾರಣರಲ್ಲ. ಪೊಲೀಸರ ಗಮನಕ್ಕೆ ಬಂದರೆ ಘಟನೆಗಳನ್ನು ತಡೆಯುತ್ತಾರೆ. ಆದರೆ‌, ಆಕಸ್ಮಿಕವಾಗಿ ನಡೆದರೆ ಏನು ಮಾಡುವುದು ಎಂದು ಸತೀಶ ಜಾರಕಿಹೊಳಿ ಪ್ರಶ್ನಿಸಿದರು. ಈ ವೇಳೆ ಮಾಜಿ ಸಚಿವ ವೀರಕುಮಾರ ಪಾಟೀಲ್​, ಮಾಜಿ ಶಾಸಕ ಕಾಕಾಸಾಹೇಬ್​ ಪಾಟೀಲ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್​ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಕಿರಣ ಸಾಧುನವರ, ಸುನೀಲ್​ ಹಣಮನ್ನವರ ಉಪಸ್ಥಿತರಿದ್ದರು.

ಇದನ್ನೂ ಓದಿ:ದೇವೇಗೌಡರ ಆಶೀರ್ವಾದ ಪಡೆದ ವಿಜಯೇಂದ್ರ: ಬಿಜೆಪಿ ನೂತನ ರಾಜ್ಯಾಧ್ಯಕ್ಷರಿಗೆ ದೊಡ್ಡಗೌಡರ ಸಲಹೆ ಏನು?

Last Updated : Nov 13, 2023, 7:05 PM IST

ABOUT THE AUTHOR

...view details