ಕರ್ನಾಟಕ

karnataka

By ETV Bharat Karnataka Team

Published : Sep 2, 2023, 4:52 PM IST

ETV Bharat / state

ನಾನು ಎಸ್​ಪಿ ಮಾತಾಡ್ತಿದೇನ್ರಿ, ಏನ್​‌ ಸಮಸ್ಯೆ? ಬೆಳಗಾವಿ ಪೊಲೀಸರ ಫೋನ್ ಇನ್ ಕಾರ್ಯಕ್ರಮಕ್ಕೆ ಜನ ಮೆಚ್ಚುಗೆ: ಜನರ ಸಮಸ್ಯೆಗೆ ಸ್ಪಂದನೆ

ಬೆಳಗಾವಿ ಜಿಲ್ಲೆಯಲ್ಲಿ ನಿನೂತನಕ್ಕೆ ಸಾಕ್ಷಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ನೇತೃತ್ವದಲ್ಲಿ ನಡೆಯುವ ಫೋನ್ ಇನ್ ಕಾರ್ಯಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Public appreciation for Belagavi SP phone-in program
Public appreciation for Belagavi SP phone-in program

ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುವುದು

ಬೆಳಗಾವಿ: ಈ ಹಿಂದೆ ಕನ್ನಡದಲ್ಲಿಯೇ ಕವಾಯತು ಆರಂಭಿಸಿ ರಾಜ್ಯಕ್ಕೆ ಮಾದರಿಯಾಗಿದ್ದ ಬೆಳಗಾವಿ ಜಿಲ್ಲಾ ಪೊಲೀಸರು, ಇದೀಗ ಮತ್ತೊಂದು ವಿನೂತನ ಕಾರ್ಯಕ್ರಮದ ಮೂಲಕ ಸುದ್ದಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಂಡ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಜನ ಮೆಚ್ಚುಗೆ ಗಳಿಸುತ್ತಿದೆ.

ಹೌದು, ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧಿಗಳನ್ನು ಮಟ್ಟ ಹಾಕಲು ಇಲ್ಲಿನ ಪೊಲೀಸರು ದಕ್ಷತೆಯಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿಕಾಂತೇಗೌಡ ಅವರು ಬೆಳಗಾವಿಯಲ್ಲಿ ಕನ್ನಡದಲ್ಲೇ ಕವಾಯತು ನಡೆಸುವ ಮೂಲಕ ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪನ್ನು ಗಟ್ಟಿಗೊಳಿಸಿದ್ದರು. ಇದೀಗ ಡಾ. ಸಂಜೀವ ಪಾಟೀಲ ಅವರು, ಇಲಾಖೆಯು ಜನರಿಗೆ ಹತ್ತಿರವಾಗುವ ಉದ್ದೇಶದಿಂದ ಫೋನ್ ಇನ್ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಫೋನ್ ಇನ್ ಕಾರ್ಯಕ್ರಮದ ಮಾಹಿತಿ

ಪ್ರತಿ ತಿಂಗಳು ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ನಡೆಯುವ ಫೋನ್ ಇನ್​ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕರೆ ಮಾಡುವ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನಾನು ಎಸ್​ಪಿ ಮಾತಾಡ್ತಿದೇನ್ರಿ, ಏನ್​‌ ಸಮಸ್ಯೆ ಎಂದು ಮಾತು ಆರಂಭಿಸುತ್ತ, ಪ್ರತಿಯೊಂದು ಕರೆಯನ್ನು ಖುದ್ದು ಅವರೇ ಸ್ವೀಕರಿಸಿ ಸಾರ್ವಜನಿಕರ ಅಹವಾಲು ಆಲಿಸುತ್ತಿರುವುದು ವಿಶೇಷ. 2022ರ ನವೆಂಬರ್ 12ರಿಂದ ಆರಂಭವಾಗಿ, ಈವರೆಗೆ 18 ಫೋನ್ ಕಾರ್ಯಕ್ರಮಗಳು ನಡೆದಿವೆ. ಸಾರ್ವಜನಿಕರು ಸಮಸ್ಯೆ ಹೇಳಿ ಫೋನ್ ಇಡುತ್ತಿದ್ದಂತೆ ಅನೇಕ‌ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದು ಡಾ. ಸಂಜೀವ ಪಾಟೀಲರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮುಕ್ತವಾಗಿ ಮಾತನಾಡಿರುವ ಡಾ. ಸಂಜೀವ ಪಾಟೀಲ, ಬೆಳಗಾವಿ ಜಿಲ್ಲೆ ವಿಶಾಲವಾದ ವಿಸ್ತೀರ್ಣ ಹೊಂದಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಎಸ್ಪಿ ಕಚೇರಿಗೆ ಬರಬೇಕು ಎಂದರೆ ಇಡೀ ದಿನ ಕಳೆಯಬೇಕು. ಇದನ್ನು ತಡೆಯಲು ಫೋನ್ ಇನ್ ಆರಂಭಿಸಿದ್ದೇವೆ. ಕೇವಲ ಫೋನಿನಲ್ಲೇ ತಿಳಿಸಿದರೂ‌ ಅವರ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ಇದರಿಂದ ದೂರದ ಪ್ರಯಾಣ ತಪ್ಪಿಸುವ ಜೊತೆಗೆ ಸಾರ್ವಜನಿಕರಲ್ಲಿ ಮುಕ್ತವಾದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ಡಿಜಿ ಮತ್ತು ಐಜಿ‌ಪಿ ಸಾಹೇಬರು ಸದಾಕಾಲ ಜನಸ್ನೇಹಿ ಪೊಲೀಸರಾಗಿ ಕೆಲಸ ಮಾಡಬೇಕು ಎಂದು ನೀಡಿದ ಸಂದೇಶದಡಿ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಚುನಾವಣೆ ವೇಳೆ ತಿಂಗಳಿಗೊಂದು ಕಾರ್ಯಕ್ರಮ ಮಾಡಿದ್ದೇವೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ

ಈವರೆಗೆ ಒಟ್ಟು 1136 ಕರೆ: ಸಾರ್ವಜನಿಕರು ನೇರವಾಗಿ ಆಡಳಿತದ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಒಂದು ವೇದಿಕೆ ಸೃಷ್ಟಿಸಿದ್ದೇವೆ. ಇದನ್ನು ಜಿಲ್ಲೆಯ ಜನರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.‌ ಜಿಲ್ಲೆಯ ಎಲ್ಲ ಪೊಲೀಸರ ವತಿಯಿಂದ ಹೃದಯತುಂಬಿ ಜನರಿಗೆ ಆಭಾರಿಯಾಗಿದ್ದೇನೆ. ಒಂದು ಸಾರಿ ಜಿಲ್ಲಾಧಿಕಾರಿಗಳನ್ನು ಕೂಡ ಆಹ್ವಾನಿಸಿದ್ದೆವು. ಆ ವೇಳೆ ಜಿಲ್ಲೆಯ ಕಂದಾಯ ಇಲಾಖೆ ಸೇರಿ ಇನ್ನಿತರ ಸಮಸ್ಯೆಗಳನ್ನು ಆಲಿಸಲಾಗಿತ್ತು. ಇನ್ನು‌ 18 ಫೋನ್ ಇನ್ ಕಾರ್ಯಕ್ರಮಗಳಲ್ಲಿ ಒಟ್ಟು 1136 ಕರೆಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ ನಮ್ಮ ಪೊಲೀಸ್ ಇಲಾಖೆಯಿಂದ ಆಗುವ ಕೆಲಸಗಳನ್ನು ತಕ್ಷಣವೇ ಮಾಡಿದ್ದೇವೆ. ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು, ನಿಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಈ ಸಮಸ್ಯೆಗಳನ್ನು ಇಂತಿಂಥ ಸಾರ್ವಜನಿಕರು ಕರೆ ಮಾಡಿ ತಿಳಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ ಎಂದು‌ ಎಸ್​ಪಿ ಡಾ. ಸಂಜೀವ‌ ಪಾಟೀಲ ಮಾಹಿತಿ ನೀಡಿದರು.

ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ರಾಜು ಮದನೆ‌ ಈಟಿವಿ ಭಾರತ ಜೊತೆಗೆ ಮಾತನಾಡಿ, ನಮ್ಮೂರಿನ‌ ಹಳೆ ಬಾವಿ‌ ಸಂಪೂರ್ಣ ಹಾಳಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಅಲ್ಲದೇ ಬಾವಿಗೆ ಬಿದ್ದು ಇಬ್ಬರು ಸಾವನ್ನಪ್ಪಿದ್ದರು. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಫೋನ್ ಇನ್‌ ಕಾರ್ಯಕ್ರಮದಲ್ಲಿ ಎಸ್​ಪಿ ಸಾಹೇಬರಿಗೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ‌ ಕಾಗವಾಡ ಪೊಲೀಸರನ್ನು‌ ಕಳಿಸಿ‌ ಬಾವಿಯ‌‌‌ ಸುತ್ತಲೂ ತಂತಿ ಬೇಲಿ ಹಾಕಿಸಿ, ಮುಂದೆ ಆಗುವ ಅನಾಹುತ ತಪ್ಪಿಸಿದ್ದಾರೆ ಎಂದು‌‌ ಡಾ. ಸಂಜೀವ ಪಾಟೀಲ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಗೆಹರಿದ ಕೆಲ ಪ್ರಮುಖ ಸಮಸ್ಯೆಗಳ ಪಟ್ಟಿ:

  • ಸವದತ್ತಿ ತಾಲೂಕಿನ ಮುರಗೋಡ ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಗಳಲ್ಲಿರುವ ಮನೆಗಳಿಗೆ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಕಡಿತವಾಗಿದ್ದ ವಿದ್ಯುತ್ ಸಮಸ್ಯೆ ನಿವಾರಿಸಿ, ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ.
  • ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಕಟ್ಟಡಗಳ ಪಕ್ಕಕ್ಕೆ ಹೊಂದಿಕೊಂಡಿರುವ ಪಾನ್ ಶಾಪ್ ಅಂಗಡಿಗಳಲ್ಲಿ ಗುಟಕಾ, ತಂಬಾಕು ಮಾರಾಟದ ಬಗ್ಗೆ ಕೋಟ್ಪಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಕೊಂಡು ಸ್ಥಳೀಯ ಪಂಚಾಯಿತಿ ಸಹಾಯದಿಂದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
  • ಸಂಕೇಶ್ವರ-ನಿಪ್ಪಾಣಿ ರಸ್ತೆಯ ಸಂಕೇಶ್ವರದ ಸಾಯಿನಾಥ‌ ಚಿತ್ರಮಂದಿರ ಹತ್ತಿರ ಬ್ರಿಡ್ಜ್ ದುರಸ್ತಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಭಾರಿ ಗಾತ್ರದ ವಾಹನಗಳ ಓಡಾಟದಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ‌ ಪರಿಹರಿಸಲು ಅಂತಹ ವಾಹನಗಳ ಮಾರ್ಗ ಬದಲಾಯಿಸಿದ್ದು, ಪ್ರತಿದಿನ ಬ್ರಿಡ್ಜ್ ಹತ್ತಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.‌ ಇಂಜಿನಿಯರ್ ಕಡೆಯಿಂದ ಸ್ಥಳದಲ್ಲಿ ಸೂಚನಾಫಲಕವನ್ನೂ‌ ಅಳವಡಿಸಲಾಗಿದೆ.
  • ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ಹತ್ತಿರದಲ್ಲಿ ಪುಂಡರ ಹಾವಳಿ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಂದ ಬಂದ ಕರೆಗೆ ಕೂಡಲೇ ಸ್ಪಂದಿಸಿದ ಎಸ್​ಪಿ, ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
  • ಹಲಕಿ ಗ್ರಾಮದಿಂದ ಮುರಗೋಡವರೆಗೆ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ಬಗ್ಗೆ ಸಾರ್ವಜನಿಕರ ಮನವಿಗೆ ಕೂಡಲೇ ಸ್ಪಂದಿಸಿದ ಎಸ್​ಪಿ ಅವರು, ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರ ವ್ಯವಹರಿಸಿ ರಸ್ತೆ ಕಾರ್ಯ ಪೂರ್ಣಗೊಳ್ಳುವಂತೆ ಮಾಡಿದ್ದಾರೆ.
  • ಪ್ರತಿ ನಿತ್ಯ ಟ್ರ್ಯಾಕ್ಟರ್‌ಗಳ ಅತಿಯಾದ ಧ್ವನಿವರ್ಧಕಗಳ ಬಳಕೆಯಿಂದ ಸಾರ್ವಜನಿಕರು ತೊಂದರೆ ಬಗ್ಗೆ ವಿವರಿಸಿದ್ದರು. ಈ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
  • ಜಿಲ್ಲೆಯ ಪ್ರಮುಖ ನಗರ, ಪಟ್ಟಣ ವ್ಯಾಪ್ತಿಗಳಲ್ಲಿ ಸಂಚಾರ ದಟ್ಟಣೆಯಿಂದ ಉಂಟಾಗಿದ್ದ ಟ್ರಾಫಿಕ್ ಸಮಸ್ಯೆ ಪರಿಹರಿಸಲಾಗಿದೆ.
  • ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜಾಟ, ಅಕ್ರಮ ಮದ್ಯ ಮಾರಾಟ ಬಗ್ಗೆ ಸಾರ್ವಜನಿಕರ ಕರೆಗಳಿಗೆ ಕೂಡಲೇ ಸ್ಪಂದಿಸಿದ ಎಸ್​ಪಿ ಡಾ. ಸಂಜೀವ ಪಾಟೀಲ ಅವರು ಕಾನೂನು ಕ್ರಮ ಕೈಕೊಂಡು ಪ್ರಕರಣಗಳನ್ನು ದಾಖಲಿಸುವ ಮೂಲಕ ಅಪರಾಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ ಕಾರ್ಯನಿರತವಾಗಿದೆ. ನಿಮ್ಮ ನಂಬಿಕೆ ಇದೇ ರೀತಿ ಮುಂದುವರಿಯಬೇಕು.‌ ಇನ್ನು ಹೆಚ್ಚಿನ ರೀತಿಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತೇವೆ -ಡಾ. ಸಂಜೀವ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಒಟ್ಟಿನಲ್ಲಿ ಪೊಲೀಸ್ ಠಾಣೆಗೆ ಬಂದು‌ ದೂರು ಕೊಟ್ಟರೆ ಮಾತ್ರ ಕೆಲಸ ಎಂಬುದನ್ನು ಸುಳ್ಳು ಮಾಡಿರುವ ಎಸ್​ಪಿ ಡಾ. ಸಂಜೀವ ಅವರು, ಒಂದು ಕರೆ ಮಾಡಿದರೆ ಸಾಕು ಸಾರ್ವಜನಿಕರ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತಿದ್ದಾರೆ. ಈ ಮೂಲಕ ಜನ ಮೆಚ್ಚುಗೆ ಗಳಿಸುತ್ತಿರುವ ಈ ಸೂಪರ್ ಕಾಪ್​ಗೆ ನಮ್ಮದೊಂದು ಸಲಾಂ.

ಇದನ್ನೂ ಓದಿ:ದಶಕದಿಂದ ಪಡತರವಾಡಿ ಗ್ರಾಮಕ್ಕಿಲ್ಲ ಬಸ್​ ಸಂಪರ್ಕ.. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಕಷ್ಟ, ಗ್ರಾಮಸ್ಥರಿಗೂ ತೊಂದರೆ

ABOUT THE AUTHOR

...view details