ಬೆಳಗಾವಿ : 2022-23ನೇ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಇಂದು ಮಂಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸದನದಲ್ಲಿ ಪರಿಶೀಲನಾ ವರದಿ ಮಂಡಿಸಿದರು. ಕೋವಿಡ್ ಅವಧಿ ನಂತರ ರಾಜ್ಯದ ಜಿಎಸ್ಟಿ ಸಂಗ್ರಹ ಶೇ.30 ರಷ್ಟು ಹೆಚ್ಚಳವಾಗಿದೆ. ಹಣದುಬ್ಬರವೂ ಕಡಿಮೆಯಾಗಿ ರಾಜ್ಯದ ಒಟ್ಟಾರೆ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೋವಿಡ್ ಅವಧಿಯಲ್ಲಿ (2021-22) ಕರ್ನಾಟಕ ರಾಜ್ಯದ ಜಿಎಸ್ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022-23ರ ಪ್ರಥಮ ಅರ್ಧ ವಾರ್ಷಿಕದಲ್ಲಿ ಶೇ.30 ರಷ್ಟು ಜಿಎಸ್ಟಿ ಸಂಗ್ರಹ ಏರಿಕೆಯಾಗಿದೆ. ಅಲ್ಲದೇ, 2022-23ರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲೇ 21,480 ಕೋಟಿ ರೂ. ವಿದೇಶಿ ನೇರ ಬಂಡವಾಳ ಹರಿದುಬಂದಿದೆ. 2022ರ ಏಪ್ರಿಲ್ನಲ್ಲಿದ್ದ ಶೇ.6.39 ರಷ್ಟಿದ್ದ ಹಣದುಬ್ಬರ 2022ರ ಸೆಪ್ಟೆಂಬರ್ ವೇಳೆಗೆ 5.81ಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಹಣದುಬ್ಬರ 7.4 ರಷ್ಟಿತ್ತು ಎಂಬ ಅಂಶಗಳು ವರದಿಯಲ್ಲಿವೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು 2.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, ಬಜೆಟ್ನಲ್ಲಿ ಜಿಎಸ್ಡಿಪಿಯನ್ನು ಪ್ರಸಕ್ತ ಬೆಲೆಗಳಲ್ಲಿ 18,85,750 ಕೋಟಿ ರೂ. ಎಂದು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರ 2022-23ರಲ್ಲಿ ರಾಜ್ಯದ ಜಿಎಸ್ಡಿಪಿ 21,81,217 ಕೋಟಿ ರೂ. ಎಂದು ಹೇಳಿದೆ. ಅದರಂತೆ ಜಿಎಸ್ಡಿಪಿ ಪರಿಷ್ಕರಿಸಿದ್ದು, ಜಿಎಸ್ಡಿಪಿಯ ಶೇ.2.82 ರಷ್ಟು ವಿತ್ತೀಯ ಹಾಗೂ ಶೇ.0.67 ರಷ್ಟು ರಾಜಸ್ವ ಕೊರತೆ ಉಂಟಾಗಲಿದೆ.