ಕರ್ನಾಟಕ

karnataka

ETV Bharat / state

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಸಿಎಂ ಭೇಟಿಯಾದ ಸಮುದಾಯದ ನಾಯಕರು

ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿ ಪ್ರಮಾಣವನ್ನು ಶೇಕಡಾ 12ಕ್ಕೆ ಹೆಚ್ಚಿಸಬೇಕು ಎಂದು ಸಮುದಾಯದ ಮುಖಂಡರು ಇಂದು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

By

Published : Dec 23, 2022, 3:37 PM IST

Updated : Dec 23, 2022, 5:21 PM IST

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ

ಬೆಳಗಾವಿ:ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿ ಪ್ರಮಾಣವನ್ನು ಶೇಕಡಾ 12ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರದಲ್ಲಿರುವ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿಯಾಗಿ ಒತ್ತಾಯಿಸಿದರು.

ಬಳಿಕ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆದಷ್ಟು ಶೀಘ್ರ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಶೋತ್ತರಗಳು ಈಡೇರಬೇಕು. ಅವಕಾಶಗಳು ಹೆಚ್ಚಾಗಬೇಕೆಂಬ ಹಿನ್ನೆಲೆಯಲ್ಲಿ ಈಗಿನ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಬೇಕೆಂದು ಸಮುದಾಯದ ಶಾಸಕರು ಬೇಡಿಕೆ ಸಲ್ಲಿಸಿದ್ದಾರೆ. ಅದೇ ಸಮುದಾಯಕ್ಕೆ ಹೊಂದಿಕೊಂಡಿರುವ ರೆಡ್ಡಿ, ಬಂಟ ಸೇರಿದಂತೆ ಎಲ್ಲಾ ಸಮುದಾಯದ ಮೀಸಲಾತಿ ಅಗತ್ಯ. ಕುಂಚಿಟಿಗ ಸಮುದಾಯದ್ದು ಕೇಂದ್ರದ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಸಮುದಾಯವನ್ನು ಕೇಂದ್ರದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ ಎಂದರು.

ಈ ಹಿಂದೆಯೇ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿ ಮನವಿಯನ್ನು ಕೊಟ್ಟಿದ್ದರು. ಆ ಮನವಿಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ. ಅದರ ಪರಿಷ್ಕರಣೆ ಕೂಡ ಆಗುತ್ತಿದೆ. ಸಂವಿಧಾನದತ್ತವಾದ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸು ಅಗತ್ಯವಿದೆ. ಹೀಗಾಗಿ ಕಳೆದ ತಿಂಗಳ 29ನೇ ತಾರೀಖಿನಂದೇ ಕಳುಹಿಸಲಾಗಿದೆ. ಇದರ ಅಂಶಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈಗಿನ ಮನವಿಯನ್ನೂ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಸಿಎಂ ತಿಳಿಸಿದರು.

ಸಿಎಂಗೆ ಮನವರಿಕೆ ಮಾಡಿದ್ದೇವೆ: ಅಶ್ವಥ್ ನಾರಾಯಣ್:ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 16ರಷ್ಟಿರುವ ಹಾಗೂ ವಿವಿಧ ಯೋಜನೆಗಳಿಂದಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿಯನ್ನು ಶೇಕಡ 12ಕ್ಕೆ ಹೆಚ್ಚಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

ಗಲಾಟೆ, ಧಮ್ಕಿ ಹಾಕಲ್ಲ. ಶಾಂತಿಯಿಂದ ಮನವಿ ಮಾಡುತ್ತೇವೆ- ಸಚಿವ ಆರ್.ಅಶೋಕ್:ಮೀಸಲಾತಿಗಾಗಿ ನಾವೂ ಗಲಾಟೆ, ಧಮ್ಕಿ ಹಾಕಲ್ಲ. ಶಾಂತಿಯುತವಾಗಿ ಎಲ್ಲರೂ ಸೇರಿ ಮೀಸಲಾತಿಗೆ ಮನವಿ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸಿಎಂಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ನ್ಯಾಯಯುತ ಬೇಡಿಕೆ ಇದಾಗಿದೆ. ಜನಸಂಖ್ಯೆ ಆಧಾರದಲ್ಲಿ ನಾವೂ ರಾಜ್ಯದಲ್ಲಿ ಶೇ.16ರಷ್ಟು ಇದ್ದೇವೆ. ನಮ್ಮಲ್ಲೂ ತುಂಬಾ ಬಡವರಿದ್ದಾರೆ. ಜಮೀನುಗಳನ್ನು ಕಳೆದುಕೊಂಡವರಿದ್ದಾರೆ. ನಮ್ಮ ಸಮುದಾಯದ ಮೀಸಲಾತಿಯನ್ನ 4 ರಿಂದ 12 ಪರ್ಸೆಂಟ್​​ಗೆ ಹೆಚ್ಚಿಸಬೇಕು ಎಂಬುದು ನಮ್ಮ ನ್ಯಾಯಯುತವಾದ ಬೇಡಿಕೆ. ಒಕ್ಕಲಿಗ ಸಮುದಾಯವನ್ನ ಭಾಗ ಮಾಡಿ ಒಡೆದಿದ್ದಾರೆ. ಹೀಗಾಗಿ ಭಂಟರು, ರೆಡ್ಡಿ, ಕುಂಚಿಟಗರು ಸೇರಿದಂತೆ ಕೇಂದ್ರ ಓಬಿಸಿ ರಿಸರ್ವೇಶನ್​​ನಲ್ಲಿ ಸೇರಿಸಬೇಕು. ಒಕ್ಕಲಿಗ ಸಮುದಾಯಕ್ಕೆ ಅಭದ್ರತೆ ಕಾಡಬಾರದು. ಇಡೀ ಒಕ್ಕಲಿಗ ಸಮುದಾಯವನ್ನ ಒಟ್ಟಿಗೆ ಸೇರಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ, ಹೀಗಾಗಿ ನಮಗೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಗೋಪಾಲಯ್ಯ, ಸಚಿವರಾದ ಆರಗ ಜ್ಞಾನೇಂದ್ರ, ಡಾ.ಸುಧಾಕರ, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಶಾಸಕರಾದ ಕೃಷ್ಣಪ್ಪ, ಕೆ.ಜೆ.ಭೋಪಯ್ಯ, ಸುಕುಮಾರ ಶೆಟ್ಟಿ, ಡಾ.ರಾಜೇಶ ಗೌಡ, ಮಸಾಲೆ ಜಯರಾಂ, ರಾಜೇಶ ನಾಯ್ಕ, ತುಳಸಿ ಮುನಿರಾಜು, ಸತೀಶ ರೆಡ್ಡಿ, ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ, ಸೋಮಶೇಖರ ರೆಡ್ಡಿ, ಸಂಜೀವ ಮಟಂದೂರು, ಎಲ್ ನಾಗೇಂದ್ರ, ಭಾರತಿ ಶೆಟ್ಟಿ, ಅ.ದೇವೇಗೌಡ, ಪುಟ್ಟಣ್ಣ, ಚಿದಾನಂದ ಗೌಡ, ಎಸ್ ಆರ್ ವಿಶ್ವನಾಥ ಮತ್ತಿತರರು ಸಭೆಯಲ್ಲಿ ಇದ್ದರು.

ಇದನ್ನೂ ಓದಿ: ಕನ್ನಡಿಗರಿಗೆ ಗ್ರೂಪ್ ಸಿ, ಡಿ ದರ್ಜೆ ಉದ್ಯೋಗ ಮೀಸಲಾತಿಯ ಖಾಸಗಿ ವಿಧೇಯಕ ಅಂಗೀಕಾರ

Last Updated : Dec 23, 2022, 5:21 PM IST

ABOUT THE AUTHOR

...view details