ಅಥಣಿ: ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸೋಂಕಿತರ ಗ್ರಾಮಗಳನ್ನು ಸೀಲ್ ಡೌನ್ ಮಾಡಿ ಎಂದು ನೆರೆಯ ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ಯಾವುದೇ ಗ್ರಾಮವನ್ನು ಸೀಲ್ ಡೌನ್ ಮಾಡಲ್ಲವೆಂದು ತಹಶೀಲ್ದಾರ್ ದುಡ್ಡಪ್ಪ ಸ್ಪಷ್ಟಪಡಿಸಿದ್ದಾರೆ.
ಅಥಣಿಯ ಯಾವುದೇ ಗ್ರಾಮವನ್ನು ಸೀಲ್ ಡೌನ್ ಮಾಡಲ್ಲ: ತಹಶೀಲ್ದಾರ್ ಸ್ಪಷ್ಟನೆ - ಅಥಣಿ ಕೊರೊನಾ ಪ್ರಕರಣ
ಅಥಣಿಯಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸೋಂಕಿತರ ಗ್ರಾಮಗಳನ್ನು ಸೀಲ್ ಡೌನ್ ಮಾಡಿ ಎಂಬ ಕೂಗು ಕೇಳಿಬರುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ದುಡ್ಡಪ್ಪ ಬಳಿ ವಿಚಾರಿಸಿದಾಗ, ಸದ್ಯದ ಮಟ್ಟಿಗೆ ಯಾವುದೇ ಗ್ರಾಮವನ್ನು ಸೀಲ್ ಡೌನ್ ಮಾಡುವುದಿಲ್ಲ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಕೂಡಾ ಭಯಪಡುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ನೀಡಿದರು.
![ಅಥಣಿಯ ಯಾವುದೇ ಗ್ರಾಮವನ್ನು ಸೀಲ್ ಡೌನ್ ಮಾಡಲ್ಲ: ತಹಶೀಲ್ದಾರ್ ಸ್ಪಷ್ಟನೆ No village of Athani is sealed down: Tahsildar](https://etvbharatimages.akamaized.net/etvbharat/prod-images/768-512-7390293-thumbnail-3x2-blgv.jpg)
ತಾಲೂಕಿನಲ್ಲಿ ಕಳೆದ 26ರಂದು 12 ಕೊರೊನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಗ್ರಾಮಗಳನ್ನು ಸೀಲ್ ಡೌನ್ ಮಾಡಿ ಎಂದು ನೆರೆಯ ಗ್ರಾಮದ ಸಾರ್ವಜನಿಕರು ಆಗ್ರಹಿಸಿದರು. ಸೋಂಕಿತರು ಸಾರ್ವಜನಿಕವಾಗಿ ಸಂಪರ್ಕ ಹೊಂದಿದ್ದರಿಂದ ಹಾಗೂ ಹಲವಾರು ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರಿಂದ, ನೆರೆ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ. ಈ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಸೋಂಕು ಕಾಣಿಸಿಕೊಂಡ ಗ್ರಾಮಗಳನ್ನು ಸಂಪೂರ್ಣ ಬಂದ್ ಮಾಡಿ ಎಂದು ಒತ್ತಾಯಗಳು ಕೇಳಿ ಬರುತ್ತಿದ್ದವು.
ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ದುಡ್ಡಪ್ಪ ಅವರನ್ನು ದೂರವಾಣಿ ಮೂಲಕ ಕೇಳಿದಾಗ, ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ನಾವು ಅನುಸರಿಸುತ್ತಿದ್ದೇವೆ. ಹಾಗೂ ಸೋಂಕಿತ ಮತ್ತು ಶಂಕಿತರ ಕುಟುಂಬಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಕೂಡಾ ಭಯ ಪಡುವ ಅಗತ್ಯವಿಲ್ಲ. ಸದ್ಯದ ಮಟ್ಟಿನಲ್ಲಿ ಯಾವುದೇ ಗ್ರಾಮವನ್ನು ಸೀಲ್ ಡೌನ್ ಮಾಡುವುದಿಲ್ಲ. ಆರೋಗ್ಯ ಇಲಾಖೆಯಿಂದ ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆಯೆಂದು ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿದರು.