ಕರ್ನಾಟಕ

karnataka

By

Published : Jun 24, 2023, 2:21 PM IST

Updated : Jun 24, 2023, 3:58 PM IST

ETV Bharat / state

ಕೈಕೊಟ್ಟ ಮುಂಗಾರು: ಬೆಳೆ ನಾಶ ಮಾಡುತ್ತಿರುವ ರೈತರು.. ಮಳೆಗಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಕಣ್ಣೀರಿಟ್ಟ ಮುಸ್ಲಿಂ ಬಾಂಧವರು

ಭಾಗಶಃ ಕೈಕೊಟ್ಟ ಮುಂಗಾರು ಮಳೆಯಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಡೆ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಸ್ಲಿಂ ಬಾಂಧವರು, ಕಣ್ಣೀರಿಟ್ಟರು. ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಕೃಷ್ಣಾ ಒಡಲು ಬರಿದಾದ ಪರಿಣಾಮ ಕಬ್ಬು ಬೆಳೆಗಾರರ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾಗಿ ನೀರು ಇಲ್ಲದ್ದರಿಂದ ಕೆಲವು ರೈತರು ಕಬ್ಬು ಬೆಳೆಯನ್ನು ನಾಶಪಡಿಸುತ್ತಿದ್ದಾರೆ.

Muslim brothers tearful in mass prayer for rain
Muslim brothers tearful in mass prayer for rain

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

ಬೆಳಗಾವಿ:ಮಳೆಗಾಗಿ ಕೈಗೊಂಡಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಮುಸ್ಲಿಂ ಬಾಂಧವರು ಕಣ್ಣೀರು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದರೂ ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿಲ್ಲ. ಇದರಿಂದ ನಗರದ ಅಂಜುಮನ್ ಸಂಸ್ಥೆಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾವುಕರಾದ ಮುಸ್ಲಿಂ ಬಾಂಧವರು 'ಅಲ್ಹಾ ಮಳೆ ಕರುಣಿಸು' ಎಂದು ಕಣ್ಣೀರಿಟ್ಟರು.

ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬೆಳಗಾವಿ ಉತ್ತರ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಮೇ ತಿಂಗಳಲ್ಲೆ ಬೆಳಗಾವಿ ಮತ್ತು ಉತ್ತರಕರ್ನಾಟಕದಲ್ಲಿ ಮಳೆ ಆರಂಭವಾಗುತ್ತಿತ್ತು. ಅದರೆ, ಜೂನ್ ಕೊನೆ ವಾರ ಬಂದರೂ ಮಳೆ ಆಗುತ್ತಿಲ್ಲ. ಇದರಿಂದ ರಾಕಸಕೊಪ್ಪ ಮತ್ತು ಹಿಡಕಲ್ ಡ್ಯಾಮ್​ನಲ್ಲಿ ನೀರು ಖಾಲಿಯಾಗುತ್ತಿದೆ. ಹೀಗಾಗಿ ಮಳೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಇವತ್ತು ಮಳೆ ಆಗದಿದ್ದರೆ ಮತ್ತೆ ನಾಳೆ ಪ್ರಾರ್ಥನೆ ಮಾಡುತ್ತೇವೆ ಎಂದರು.

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

ಪ್ರಾರ್ಥನೆಯಲ್ಲಿ ಅನೇಕರು ಕಣ್ಣೀರು ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಆಸೀಫ್ ಸೇಠ್, ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದನ್ನು ನೆನೆದು ಪ್ರಾರ್ಥನೆ ವೇಳೆ ಕೆಲವರು ಕಣ್ಣೀರು ಹಾಕಿ ಪ್ರಾರ್ಥಿಸಿದ್ದಾರೆ. ಎಲ್ಲ ಧರ್ಮಿಯರು ಅವರ ಆಚಾರಗಳಿಗೆ ತಕ್ಕ ಹಾಗೆ ಪೂಜೆ ಸಲ್ಲಿಸುತ್ತಿದ್ದಾರೆ ಎಂದರು. ಮಳೆಗಾಗಿ ಇಂದಿನಿಂದ ಮುಸಲ್ಮಾನರು ಮೂರು ದಿನಗಳ ಕಾಲ ಪ್ರಾರ್ಥನೆ ಹಮ್ಮಿಕೊಂಡಿದ್ದು, ಇಂದು ಮಳೆ ಆಗದಿದ್ರೆ ಮತ್ತೆ ನಾಳೆ ಬೆಳಗ್ಗೆ 9.30ಕ್ಕೆ ಮತ್ತೆ ಸಾಮೂಹಿಕ ಪ್ರಾರ್ಥನೆಗೆ ನಿರ್ಧರಿಸಿದ್ದಾರೆ.

ಬರಿದಾದ ಕೃಷ್ಣೆ: ಇನ್ನು ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಕೃಷ್ಣಾ ಒಡಲು ಬರಿದಾಗಿದೆ. ಪರಿಣಾಮ ಕಬ್ಬು ಬೆಳೆಗಾರರ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡ್ಮೂರು ತಿಂಗಳಿಂದ ನೀರು ಖಾಲಿಯಾದ ಹಿನ್ನೆಲೆ ಕಬ್ಬು ಒಣಗುತ್ತಿದೆ. ಸರಿಯಾಗಿ ನೀರು ಇಲ್ಲದ್ದರಿಂದ ಕೆಲ ರೈತರು ಕಬ್ಬು ಬೆಳೆಯನ್ನು ನಾಶಪಡಿಸುತ್ತಿದ್ದಾರೆ. ಈ ವೇಳೆಗೆ ಮಳೆಯಾಗಿದ್ದರೆ ಇನ್ನೇನು ಐದಾರು ತಿಂಗಳಲ್ಲಿ ಕಬ್ಬು ಸಕ್ಕರೆ ಕಾರ್ಖಾನೆಗೆ ಸರಬರಾಜು ಆಗುತ್ತಿತ್ತು. ಆದರೆ, ಮಳೆಯಾಗದ ಹಿನ್ನೆಲೆ ಅನ್ನದಾತ ಅಕ್ಷರಶ ಕಣ್ಣೀರಲ್ಲಿ ಕೈತೊಳೆಯುಂತಾಗಿದೆ ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡಿದ್ದಾರೆ.

ಬರಿದಾದ ಕೃಷ್ಣೆ

ಪ್ರತಿ ವರ್ಷ ಕೃಷ್ಣಾ ನದಿಯಿಂದ ಅತಿವೃಷ್ಟಿ-ಅನಾವೃಷ್ಟಿ ಸಾಮಾನ್ಯ. ಕೃಷ್ಣಾ ನದಿಯ ನೀರು ನಂಬಿ ಚಿಕ್ಕೋಡಿ-ಬಾಗಲಕೋಟೆ ಜಿಲ್ಲೆಯ ರೈತರು ನದಿ ಅಕ್ಕ-ಪಕ್ಕದ ಕೃಷಿ ಭೂಪ್ರದೇಶದಲ್ಲಿ ಸಾವಿರಾರು ಹೆಕ್ಟೇರ್​​​​ ಕಬ್ಬು ಬೆಳೆಯುತ್ತಾರೆ. ಆದರೆ, ಒಮ್ಮೊಮ್ಮೆ ಭಾರಿ ಮಳೆಯಿಂದ ರೈತ ಕಂಗಾಲಾದರೆ ಮತ್ತೊಮ್ಮೆ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ತಳ್ಳಲ್ಪಡುತ್ತಾನೆ. ಒಟ್ಟಿನಲ್ಲಿ ಈ ಭಾಗದ ಜನಕ್ಕೆ ಅತಿವೃಷ್ಟಿ-ಅನಾವೃಷ್ಟಿ ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಅನ್ನದಾತರ ರಕ್ಷಣೆಗೆ ಸರ್ಕಾರ ಬರಬೇಕು. ಈ ಭಾಗದ ರೈತರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಇಲ್ಲಿನ ರೈತರು ಆಗ್ರಹಿಸುತ್ತಿದ್ದಾರೆ.

ಬೆಳೆ ನಾಶ ಮಾಡುತ್ತಿರುವ ರೈತರು

ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿ ಖಾಲಿ ಆಗದಂತೆ ನೋಡಿಕೊಳ್ಳುವುದು ಸರ್ಕಾರ ಜವಾಬ್ದಾರಿ. ಆದಷ್ಟು ಬೇಗನೆ ಆಲಮಟ್ಟಿ 524 ಅಡಿ ನೀರು ಹಿಡಿಯುವ ಯೋಜನೆಯನ್ನು ಪ್ರಾರಂಭಿಸಬೇಕು. ಇದರಿಂದ ಪ್ರತಿ ವರ್ಷ ನದಿಯಲ್ಲಿ ನೀರು ಕಡಿಮೆಯಾಗುವುದು ತಪ್ಪುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಸಹ ಈ ಭಾಗದ ರೈತರು ಸರ್ಕಾರಕ್ಕೆ ಕೆಲವು ಸಲಹೆ ನೀಡಿದ್ದಾರೆ. ಮಳೆ ಇಲ್ಲದೆ ಘಟಪ್ರಭಾ ನದಿ ಬತ್ತಿಹೋಗಿದ್ದು, ಲಕ್ಷಾಂತರ ಮೀನಿಗಳು ಪ್ರಾಣ ಬಿಟ್ಟಿವೆ. ನದಿಯಲ್ಲಿ ರಾಶಿಗಟ್ಟಲೆ ಮೀನುಗಳು ಕೆಸರಿನಲ್ಲಿ ವಿಲವಿಲ ಒದ್ದಾಡುತ್ತಿರುವ ದೃಶ್ಯ ಮನಕಲಕುವಂತಿದೆ.

ಮೀನುಗಳ ಸಾವು

ಮಳೆ ಇಲ್ಲದೆ ರೈತರು ಕಂಗಾಲು: ವಾಡಿಕೆಯಂತೆ ಜೂನ್ ಮೊದಲ ವಾರ ಮಳೆ ಸುರಿಯಬೇಕಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ರೋಹಿಣಿ ಮಳೆಗೆ ಹೆಚ್ಚಿನ ಆದ್ಯತೆ. ಈ ವರ್ಷ ರೋನಿಮಳೆ (ರೋಹಿಣಿ) ಆಗದ ಹಿನ್ನೆಲೆ ಬಿತ್ತನೆ ಕಾರ್ಯ ವಿಳಂಬವಾಗಿದೆ. ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪೆಟ್ಟು ನೀಡಿದೆ. ಅರಿಶಿಣ ಹಾಗೂ ತೊಗರಿ ಬೆಳೆಯನ್ನು ಜೂನ್ ಮೊದಲ ವಾರವೇ ಬಿತ್ತಬೇಕಿತ್ತು. ಆದರೆ, ವಾಡಿಕೆಯಂತೆ ಮಳೆಯಾಗದ್ದರಿಂದ ಇದುವರೆಗೆ ಬಿತ್ತನೆ ಕಾರ್ಯ ಸಾಧ್ಯವಾಗಿಲ್ಲ. ಇನ್ನುಮೇಲೆ ಬಿತ್ತಿದರೆ ಅವು ಸರಿಯಾಗಿ ಬೆಳೆಯೋದಿಲ್ಲ ಅನ್ನೋದು ಇಲ್ಲಿನ ರೈತರ ನೋವು.

ಇದನ್ನೂ ಓದಿ:KRS Dam: ಬರಿದಾಗ್ತಿದೆ ಕೆ​ಆರ್​ಎಸ್ ಡ್ಯಾಂ; ಕುಡಿಯುವ ನೀರಿಗೆ ಹಾಹಾಕಾರದ ಮುನ್ಸೂಚನೆಯೇ?

Last Updated : Jun 24, 2023, 3:58 PM IST

ABOUT THE AUTHOR

...view details