ಬೆಳಗಾವಿ:ಪಕ್ಷ ಬಯಸಿದರೆ ಸಿಎಂ ಹುದ್ದೆ ಏರಲು ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಇಲ್ಲದವರು ಸಿಎಂ ಆಗಿದ್ದಾರೆ. ಕೆಎಂಎಫ್ ಡೈರೆಕ್ಟರ್ ಆಗದೇ ಇರುವವರೂ ಸಹ ಸಿಎಂ ಆಗಿದ್ದಾರೆ. ನನಗೂ ಅಧಿಕಾರ ಕೊಟ್ರೆ ಉತ್ತಮ ಆಡಳಿತ ಕೊಡ್ತೀನಿ ಎಂದಿದ್ದಾರೆ.
ಉತ್ತರ ಪ್ರದೇಶ ಯೋಗಿ ಸರ್ಕಾರ ಮಾದರಿಯಲ್ಲಿ ಕರ್ನಾಟಕ ಸರ್ಕಾರ ನಡೆಯುತ್ತೆ. ನಾನೂ ಸಹ ಪಕ್ಷ ಕಟ್ಟಿದವನು. ಏಪ್ರಿಲ್ 30ರೊಳಗೆ ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ಆಗುವ ಸಂಭವ ಇದೆ. ಏಪ್ರಿಲ್ 17ರ ಮತದಾನದ ಬಳಿಕ ಬದಲಾವಣೆ ಪ್ರಕ್ರಿಯೆ ಆರಂಭ ಆಗುತ್ತದೆ. ಕರ್ನಾಟಕ ರಾಜಕೀಯದಲ್ಲಿ ಬದಲಾವಾಣೆ ಕೆಲಸ ಆರಂಭ ಆಗುತ್ತೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ಕೆಲವರು ಬದಲಾವಣೆ ಆಗಿ ಮೌನ ಆಗ್ತಾರೆ. ಪಾದಯಾತ್ರೆ ರದ್ದು ಪಡಿಸೋದಾಗಿ ಹೇಳಿದ್ದರು. ಹಿಂದುಳಿದ ಆಯೋಗಕ್ಕೆ ಪತ್ರ ಬರೆದ ಬಗ್ಗೆಯೂ ಸುಳ್ಳು ಮಾಹಿತಿ ನೀಡಿದರು. ಡಿಕೆಶಿ ಹಾಗೂ ಕೆಲವರು ಹಣ ಕೊಟ್ಟು ಹೋರಾಟ ಮಾಡಿಸುತ್ತಿದ್ದಾರೆ ಅಂತ ಸುದ್ದಿ ಹರಿಬಿಟ್ಟರು. ಆದರೆ, ನಮ್ಮ ಸಮುದಾಯ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಬಂದು ಹೋರಾಟ ಮಾಡಿದರು.
ಆಗ ದೊಡ್ಡ ಸಂಚಲನ ಸೃಷ್ಟಿಯಾಗಿ ಕೆಲವರಿಗೆ ಶಾಕ್ ಆಯಿತು. ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಸಹ ನಡೀತು. ಹೋರಾಟಕ್ಕೆ ಪ್ಯಾಲೇಸ್ ಗ್ರೌಂಡ್ ಕೊಡಬಾರದು ಎಂದು ಸಚಿವ ಬಸವರಾಜ ಬೊಮ್ಮಾಯಿ ಜೊತೆ ವಿಜಯೇಂದ್ರ ಜಗಳ ಮಾಡಿದ್ದರು. ಇಂದು ಉಪಚುನಾವಣೆಯಲ್ಲಿ ನಮ್ಮ ಸಮುದಾಯ ಉದ್ದೇಶಿಸಿ ಮಾತನಾಡುತ್ತಿರುವ ವಿಜಯೇಂದ್ರಗೆ ಏನು ನೈತಿಕತೆ ಇದೆ ಎಂದರು.