ಕರ್ನಾಟಕ

karnataka

ETV Bharat / state

ಮಾರ್ಚ್​ನಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆ, ಕುಮಟಳ್ಳಿಗೆ ಸಚಿವ ಸ್ಥಾನ ಪಕ್ಕಾ: ರಮೇಶ್ ಜಾರಕಿಹೊಳಿ - ಅಥಣಿ ಸುದ್ದಿ

ಸರ್ಕಾರ ಮೂರನೇ ಹಂತದ ಸಚಿವ ಸಂಪುಟ ಮಾರ್ಚ್ ತಿಂಗಳಲ್ಲಿ ವಿಸ್ತರಣೆ ಆಗಲಿದ್ದು, ಅದರಲ್ಲಿ ಅಥಣಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದರು.

ramesh jarkiholi
ರಮೇಶ್ ಜಾರಕಿಹೊಳಿ

By

Published : Jan 25, 2021, 4:53 PM IST

ಅಥಣಿ(ಬೆಳಗಾವಿ):ಮುಂಬರುವ ಮಾರ್ಚ್- ಏಪ್ರಿಲ್​ನಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಆ ಸಂದರ್ಭದಲ್ಲಿ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾಹಿತಿ ನೀಡಿದ ಸಚಿವ ಜಾರಕಿಹೊಳಿ

ಕಾಗವಾಡ ತಾಲೂಕಿನಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆಗೆ ಆಗಮಿಸಿದ ಸಚಿವರು ಅಥಣಿಗೆ ಭೇಟಿ ನೀಡಿ ಅಥಣಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸರ್ಕಾರ ಮೂರನೇ ಹಂತದ ಸಚಿವ ಸಂಪುಟ ಮಾರ್ಚ್ ತಿಂಗಳಲ್ಲಿ ವಿಸ್ತರಣೆ ಆಗಲಿದ್ದು, ಅದರಲ್ಲಿ ಅಥಣಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದೆಂದು ಆಶಾ ಭಾವನೆ ಇದೆ ಎಂದರು.

ತಾಲೂಕಿನ ವಿವಿಧ ನೀರಾವರಿ ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಅಥಣಿ ತಾಲೂಕಿನಲ್ಲಿ ಸವಳು-ಜವಳು ಭೂಮಿ ಹೆಚ್ಚಾಗಿದ್ದು, ತಾಲೂಕಿನ ಸತ್ತಿ, ಮಹೇಷವಾಡಗಿ, ನಂದೇಶ್ವರ ಗ್ರಾಮದಲ್ಲಿ ಮೊದಲ ಹಂತದ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಬಾಧಿತ ಗ್ರಾಮವಾದ ಸತ್ತಿ ಗ್ರಾಮದ ಸ್ಥಳಾಂತರ ಹಾಗೂ ಪರಿಹಾರ, ಜಾಮದಾರ ವರದಿ ಪ್ರಕಾರ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಇದನ್ನೂ ಓದಿ:ಜನವರಿ 28 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಕೊಟ್ಟಲಗಿ-ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಗೆ ಮಾರ್ಚ್ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಲಿದೆ. ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ಅದರಲ್ಲೂ ನಮ್ಮ ಮಿತ್ರ ಮಂಡಳಿಯ 17 ಜನರಲ್ಲಿ ಯಾವುದೇ ಭಿನ್ನಾಭಿಪ್ರಾಯದ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಲಕ್ಷ್ಮಣ ಸವದಿ ಅವರು ಬಸವಕಲ್ಯಾಣ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂಬ ಮಾತು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದರು.

ABOUT THE AUTHOR

...view details