ಚಿಕ್ಕೋಡಿ: ಕರ್ನಾಟಕ - ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ಈಗ ನೂತನ ತಾಲೂಕಾಗಿ ಘೋಷಣೆಯಾಗಿದ್ದು, ಈ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿಪ್ಪಾಣಿ ಕ್ಷೇತ್ರ ಶಾಸಕಿ ಮತ್ತು ಸಚಿವೆ ಶಶಿಕಲಾ ಜೊಲ್ಲೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಹೈಟೆಕ್ ಮಾಡಲು ಮುಂದಾಗಿದ್ದಾರೆ.
ನಿಪ್ಪಾಣಿ ಕ್ಷೇತ್ರ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಸೌಂದಲಗಾ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹಾಗೂ ಅಕ್ಕೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೀಗೆ ಮೂರು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಈ ಶಾಲೆಗಳಲ್ಲಿ ಆಗಬೇಕಾದ ಮೂಲಸೌಲಭ್ಯಗಳ ಕುರಿತು ಅಂದಾಜು 2.40 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದಾರೆ. ದತ್ತು ಪಡೆದ ಶಾಲೆಗಳಲ್ಲಿ ಕೊಠಡಿ ಸಮಸ್ಯೆ, ಗಣಕಯಂತ್ರ, ಆಟದ ಮೈದಾನ, ಪ್ರೊಜೆಕ್ಟರ್, ಗ್ರಂಥಾಲಯ ಮತ್ತು ಶೌಚಾಲಯ ಸಮಸ್ಯೆ ಪ್ರಮುಖವಾಗಿದೆ. ಹೀಗಾಗಿ ಈ ಶಾಲೆಗಳ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಕ್ಕೋಳ :
ನಿಪ್ಪಾಣಿ ತಾಲೂಕಿನಲ್ಲಿ ದೊಡ್ಡ ಗ್ರಾಮವಾದ ಅಕ್ಕೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ಶಾಲೆಯಲ್ಲಿ 1ರಿಂದ 8 ತರಗತಿಯವರೆಗೆ ಸುಮಾರು 300 ಮಕ್ಕಳು ಅಧ್ಯಯನ ಮಾಡುತ್ತಾರೆ. ಶಾಲೆಗೆ ಪ್ರಮುಖವಾಗಿ ಮಕ್ಕಳಿಗೆ ಆಟದ ಮೈದಾನ, ನಾಲ್ಕು ಶೌಚಾಲಯ, ಎರಡು ಹೊಸ ಕಟ್ಟಡ, ಕಾಂಪೌಂಡ್ ಬೇಡಿಕೆ ಸೇರಿ ಒಟ್ಟು 81.40 ಲಕ್ಷ ರೂ. ಯೋಜನೆ ಸಿದ್ಧಪಡಿಸಿದ್ದಾರೆ.