ಕರ್ನಾಟಕ

karnataka

By ETV Bharat Karnataka Team

Published : Dec 7, 2023, 4:11 PM IST

Updated : Dec 7, 2023, 6:22 PM IST

ETV Bharat / state

ಸುವರ್ಣಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ, ನನಗೆ ಬಿಟ್ಟರೆ ಇವತ್ತೇ ತೆರವು ಮಾಡುವೆ: ಪ್ರಿಯಾಂಕ್ ಖರ್ಗೆ

Priyank Kharge statement about Savarkar photo: ಸುವರ್ಣಸೌಧದ ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಬದಲಿಗೆ ಜವಾಹರ‌ಲಾಲ್ ನೆಹರು ಫೋಟೋ ಹಾಕಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಸಾವರ್ಕರ್ ಫೋಟೋ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಳಗಾವಿ : ಸುವರ್ಣಸೌಧ ವಿಧಾನಸಭೆಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ತೆಗೆದರೆ ಸೂಕ್ತ. ನನಗೆ ಬಿಟ್ಟರೆ ಇವತ್ತೇ ತೆರವು ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು,‌ ಸಾವರ್ಕರ್ ಫೋಟೋ ತೆರವುಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ತತ್ವ ಸಿದ್ದಾಂತದಲ್ಲಿ ಸಮಾನತೆ‌ ಇಲ್ಲವೋ, ಸ್ವಾಭಿಮಾನದ ಬದುಕಿಲ್ಲವೋ‌ ಅದನ್ನು ನಾನು ಒಪ್ಪಲ್ಲ.‌ ಗಾಂಧಿ ಹತ್ಯೆಗೆ ಪ್ರೇರಣೆಯಾದ ತತ್ವವನ್ನು ಒಪ್ಪಲ್ಲ. ಹೀಗಾಗಿ ವಿಧಾನಸಭೆಯಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ಆದರೆ ನಿಯಮಾನುಸಾರವೇ ಮಾಡಬೇಕು.‌ ಅದು ನಮ್ಮ ಕೈಯಲ್ಲಿ ಇಲ್ಲ.‌ ಸ್ಪೀಕರ್ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ವಿಧಾನಸಭೆಯಲ್ಲಿ ದೇಶದ ಮೊದಲ ಪ್ರಧಾನಿ ಜವಾಹರ‌ಲಾಲ್ ನೆಹರು ಫೋಟೋ ಹಾಕಬೇಕು. ಅವರು ಮೂರು ಸಾವಿರ ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ದೇಶವನ್ನು ಆಳಿ ವೈಜ್ಞಾನಿಕ ಮನೋಭಾವ ಬೆಳೆಸಿದ್ದಾರೆ. ಸಾವರ್ಕರ್ ಇತಿಹಾಸ ಅಶ್ವತ್ಥ ನಾರಾಯಣ ಅವರಿಗಿಂತ ಚೆನ್ನಾಗಿ ನನಗೆ ಗೊತ್ತಿದೆ. ಬಿಜೆಪಿಯವರಿಗೆ ಆರ್​ಎಸ್ಎಸ್ ಇತಿಹಾಸ ಗೊತ್ತಾ?. ಅವರಿಗೆ ಸಾವರ್ಕರ್ ಇತಿಹಾಸ ಗೊತ್ತಾ?. ಅವರಿಂದ ಹೆಚ್ಚು ನನಗೆ ಗೊತ್ತು. ನಾನು ಅವರ ತತ್ವವನ್ನು ನಂಬಲ್ಲ, ಆ ತತ್ವವನ್ನು ಹುಟ್ಟು ಹಾಕಿದವರನ್ನು ಏಕೆ ನಂಬಬೇಕು?. ನನಗೆ ಬಸವ ತತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಸಾವರ್ಕರ್ ಫೋಟೋ ತೆರವು ವಿಚಾರವಾಗಿ ನಾನು ಸ್ಪೀಕರ್ ಬಳಿ ಈ ವಿಚಾರವಾಗಿ ಮಾತನಾಡಿಲ್ಲ ಎಂದು ಹೇಳಿದರು.

ನಾನು ಸಂವಿಧಾನದಲ್ಲಿ ನಂಬಿಕೆ ಇಟ್ಟ ವ್ಯಕ್ತಿ.‌ ಆದರೆ ನನ್ನ ಕೆಲವು ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ವೀರ ಸಾವರ್ಕರ್​ಗೆ ವೀರ್ ಎಂಬ ಬಿರುದು ಕೊಟ್ಟಿದ್ದು ಯಾರು?, ಸಾವರ್ಕರ್ ಬ್ರಿಟಿಷರ ಬಳಿ ಪಿಂಚಣಿ ತೆಗೆದುಕೊಳ್ಳುತ್ತಿದ್ದರಲ್ಲವೇ?, ಬ್ರಿಟಿಷರಿಗೆ ಮೂರು ನಾಲ್ಕು ಬಾರಿ ಮಾಫಿ ಪತ್ರವನ್ನು ಅವರು ಬರೆದಿಲ್ವಾ? ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮಾಡ್ತಾ ಇದ್ದಾಗ ಅವರ ವಿರುದ್ಧ ನಮ್ಮವರು ಬ್ರಿಟಿಷ್ ಆರ್ಮಿಗೆ ಸೇರ್ಪಡೆ ಆಗಿ ಎಂದು ಪ್ರೇರಣೆ ಮಾಡ್ತಿರಲಿಲ್ವಾ? ಇದಕ್ಕೆ ಬಿಜೆಪಿ ಉತ್ತರ ಕೊಡಲಿ ಎಂದು ಸವಾಲೆಸೆದರು.

ನನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ:ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ನನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಂದ ಮೇಲೆ ನೋಡೋಣ ಈಗಲೇ ಬ್ಯಾಟ್ ಬೀಸಿದ್ರೆ ಆಗುತ್ತಾ?. ಸಂವಿಧಾನದ ಬದ್ದವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನನಗೆ ಮಂತ್ರಿಗಳು ಒಂದೇ ಪ್ರತಿ ಪಕ್ಷದವರು ಒಂದೇ. ಪ್ರಜಾಪ್ರಭುತ್ವದಲ್ಲಿ ಅವರವರ ಹೇಳಿಕೆ ನೀಡಲು ಅವಕಾಶ ಇದೆ. ಸಂವಿಧಾನ ಬದ್ದವಾಗಿ ಯಾವುದೇ ವಿಚಾರದಲ್ಲಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಮಧು ಬಂಗಾರಪ್ಪ

Last Updated : Dec 7, 2023, 6:22 PM IST

ABOUT THE AUTHOR

...view details